ಮದ್ದೂರು ಘಟನೆಯ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ : ಪ್ರಿಯಾಂಕ್ ಖರ್ಗೆ
"ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ"
ಪ್ರಿಯಾಂಕ್ ಖರ್ಗೆ
ಬೆಂಗಳೂರು : ʼಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ʼಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ, ಶ್ರೀರಂಗಪಟ್ಟಣದ ಕೋಮು ಸಂಘರ್ಷ, ಕೆರೆಗೋಡು ಧ್ವಜ ಗಲಾಟೆ, ನಾಗಮಂಗಲ ಗಲಾಟೆ, ಮದ್ದೂರು ಗಲಾಟೆ, ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ, ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆʼ ಎಂದು ವಾಗ್ದಾಳಿ ನಡೆಸಿದ್ದಾರೆ.
ʼಬಿಜೆಪಿಯೊಂದಿಗೆ ಜೆಡಿಎಸ್ ಸೈದ್ದಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆʼ ಎಂದು ತಿಳಿಸಿದ್ದಾರೆ.