ರಾಜ್ಯ ಸರಕಾರ ಕೂಡಲೇ ಬರ ಘೋಷಣೆ ಮಾಡಿ, ಪರಿಹಾರ ನೀಡಬೇಕು : ಆರ್.ಅಶೋಕ್ ಆಗ್ರಹ
"ರಾಜ್ಯದಲ್ಲಿ ಶೇ.80ರಷ್ಟು ಕೃಷಿ ಕೆಲಸ ಸ್ಥಗಿತವಾಗಿದೆ"
ಬೆಂಗಳೂರು : ಮಳೆ ಕೊರತೆ ಕಾರಣದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ರಾಜ್ಯ ಸರಕಾರ ಕೂಡಲೇ ಬರ ಘೋಷಣೆ ಮಾಡುವ ಜತೆಗೆ ಪರಿಹಾರ ನೀಡಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರ ಹಿನ್ನೆಲೆ ಕೃಷಿ ನಿರತ ರೈತರ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು. 1 ಲಕ್ಷದವರೆಗೂ ರೈತರ ಸಾಲಮನ್ನಾ ಮಾಡಬೇಕು.ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ಹೊಸದಿಲ್ಲಿಯಲ್ಲಿ ಮೋಜುಗಾಗಿ ಹೋಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಶೇ.80ರಷ್ಟು ಕೃಷಿ ಕೆಲಸ ಸ್ಥಗಿತವಾಗಿದೆ. ಜಾನುವಾರುಗಳಿಗೆ ಒಣ ಮೇವು ಕಡಿಮೆ ಆಗುತ್ತಿದೆ. ರೈತರು ದನ-ಕರುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ.ಆದರೆ, ಕಂದಾಯ ಸಚಿವರು ಮಾತ್ರ ಜಿಲ್ಲಾಧಿಕಾರಿಗಳಿಂದ 15 ದಿನದಲ್ಲಿ ವರದಿ ಮಾಡುತ್ತಾರೆ ಎಂದು ನಿರ್ಲಕ್ಷ್ಯದ ಹೇಳಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇನ್ನೊಂದೆಡೆ, ವರದಿಗಳ ಪ್ರಕಾರ ಎರಡು ತಿಂಗಳಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.