ದ್ವಿಚಕ್ರ ವಾಹನ ಅಪಘಾತ | ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ : ರಾಮಲಿಂಗಾರೆಡ್ಡಿ
"ರಾಜ್ಯಾದ್ಯಂತ 5 ವರ್ಷಗಳಲ್ಲಿ 60,115 ಮಂದಿ ವಾಹನ ಅಪಘಾತದಿಂದ ಮೃತ್ಯು"
ಬೆಂಗಳೂರು, ಆ.13: ರಾಜ್ಯಾದ್ಯಂತ ಐದು ವರ್ಷಗಳಲ್ಲಿ 60,115 ಮಂದಿ ವಾಹನ ಅಪಘಾತದಿಂದ ಸಾವನ್ನಪ್ಪಿದ್ದು, ಈ ಅವಧಿಯಲ್ಲಿ 2.13 ಲಕ್ಷ ಅಪಫಾತಗಳು ಸಂಭವಿಸಿವೆ. ದ್ವಿಚಕ್ರ ವಾಹನ ಅಪಘಾತಗಳ ಪೈಕಿ ಬೆಂಗಳೂರು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2021 ಜನವರಿಯಿಂದ ರಿಂದ 2025ರ ಜೂನ್ ಅಂತ್ಯದವರೆಗೂ 2,13,192 ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ 60,115 ಮಂದಿ ವಾಹನ ಸವಾರರು ಮೃತಪಟ್ಟಿದ್ದಾರೆ. ಪ್ರತಿದಿನ ಸರಾಸರಿ 130ರಿಂದ 150 ಅಪಘಾತಗಳು ನಡೆದಿದ್ದು, ಈ ಪೈಕಿ 36 ರಿಂದ 40 ಮಂದಿ ಬಲಿಯಾಗಿದ್ದಾರೆ ಎಂದರು.
ಹಲವು ರೀತಿಯ ಕಾನೂನು ಕ್ರಮಗಳು ಹಾಗೂ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಸಾವನ್ನಪ್ಪಿದವರ ಪೈಕಿ ಬಹುತೇಕ ಮಂದಿ ಯುವಕರಾಗಿದ್ದಾರೆ. ಕುಡಿದು ವಾಹನ ಚಾಲನೆ, ಬೈಕ್ ವ್ಹೀಲಿಂಗ್, ಹೆಲ್ಮೆಟ್ ಧರಿಸದಿರುವುದು, ಅಲ್ಲದೇ ಅರ್ಧ ಹೆಲ್ಮೆಟ್ ಹಾಕುವುದು ಹಾಗೂ ಅಜಾಗರೂಕ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಆದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ.10ರಷ್ಟು ಅಪಘಾತಗಳ ಪ್ರಮಾಣ ಇಳಿಕೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 1.31 ಕೋಟಿ ದ್ವಿಚಕ್ರ ವಾಹನಗಳಿಗೆ 1.23 ಕೋಟಿ ನಾಲ್ಕು ಚಕ್ರದ ವಾಹನಗಳಿಗೆ ಪರವಾನಗಿ (ಡಿಎಲ್) ನೀಡಲಾಗಿದೆ. 2,89,977 ಲಕ್ಷ ಹಳದಿ ಬೋರ್ಡ್ ಕಾರುಗಳು ನೋಂದಾಯಿಸಿಕೊಂಡಿವೆ ಎಂದು ಅವರು ಹೇಳಿದರು.