ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಎಂಎಲ್ಸಿ ರವಿಕುಮಾರ್ ಹೇಳಿದ್ದೇನು?
ಎನ್.ರವಿಕುಮಾರ್
ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕಾಂಗ್ರೆಸ್ ಕೂಡ ಸಭಾಪತಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದೆ. ಈ ಬೆನ್ನಲ್ಲೇ ತಮ್ಮ ವಿರುದ್ಧದ ಆರೋಪಕ್ಕೆ ಎನ್.ರವಿಕುಮಾರ್ ಪ್ರತಿಕ್ರಿಯಿಸಿದ್ದು,ʼಸರಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನಾನು ಯಾವುದೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಂಎಲ್ಸಿ ರವಿಕುಮಾರ್ ಹೇಳಿದ್ದೇನು?
ಈ ಸಂಬಂಧ ಮಾಧ್ಯಮ ಪ್ರಟಕನೆ ನೀಡಿರುವ ಅವರು, ಕೆಲ ದೃಶ್ಯ, ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನಾನು ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂದು ಪ್ರಚಾರ ಮಾಡುತ್ತಿರುವುದು ನನಗೆ ಆಘಾತವನ್ನುಂಟು ಮಾಡಿದೆ.
"ಮಹಾದೇವಪುರ ಕ್ಷೇತ್ರದ ಕಾಡುಗೋಡಿಯ ದಲಿತ ಕುಟುಂಬಗಳು ಹಲವಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆಯುತ್ತಿರುವುದನ್ನು ಖಂಡಿಸಿ ಜೂ.30ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ನಾನು ಸೇರಿದಂತೆ ಇತರೆ ದಲಿತ ನಾಯಕರು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆಯ ಮುಂದೆ ನಾವು ಪ್ರತಿಭಟನೆ ಮಾಡಿದ್ದೆವು. ಈ ಸಮಸ್ಯೆ ಬಗ್ಗೆ ಸರಕಾರದ ಗಮನಕ್ಕೆ ತರಲು ಸಿಎಂ ಅವರು ಸಹ ಭೇಟಿಗೆ ಸಿಗುತ್ತಿಲ್ಲ, ಸಿಎಸ್ ಅವರು ಕೂಡ ಸಿಗುತ್ತಿಲ್ಲ, ಹೀಗಾಗಿ ಸಿಎಸ್ ಅವರು ಬ್ಯುಸಿ ಇರುತ್ತಾರೆ ಅನ್ನುವುದನ್ನು ಬಿಟ್ಟು ಅವರ ವಿರುದ್ದ ಯಾವುದೇ ಒಂದು ಶಬ್ದವೂ ಅವಹೇಳನಕಾರಿಯಾಗಿ ಮಾತನಾಡಿಲ್ಲ" ಎಂದು ಹೇಳಿದ್ದಾರೆ.
"ಈ ಪ್ರತಿಭಟನೆ ಸಂದರ್ಭದಲ್ಲಿ ಸಿಎಸ್ ಅವರ ವಿರುದ್ಧ ಯಾವುದೇ ಭಾಷಣ ಮಾಡಿಲ್ಲ ಹಾಗೂ ನಾನು ಮಾಧ್ಯಮಗಳೊಂದಿಗೆ ಕೂಡ ಮಾತನಾಡಿಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಪ್ರಶ್ನೆಯೇ ಈ ವಿಷಯದಲ್ಲಿ ಉದ್ಭವಿಸುವುದಿಲ್ಲ" ಎಂದು ತಿಳಿಸಿದ್ದಾರೆ.
ʼನನ್ನ ಬಗ್ಗೆ ಹರಡುತ್ತಿರುವ ವರದಿಯು ಸಂಪೂರ್ಣವಾಗಿ ಆಧಾರರಹಿತ, ದಾರಿತಪ್ಪಿಸುವ, ದುರುದ್ದೇಶಪೂರಿತ ಮತ್ತು ದೂಷಣೆಯಿಂದ ಕೂಡಿದೆ. ಸಿಎಸ್ ಅವರು ಸರಕಾರದ ಕೆಲಸದಲ್ಲಿ ಬ್ಯುಸಿ ಇರುತ್ತಾರೆ ಎಂದು ಹೇಳಿದ್ದೇನೆ ಬಿಟ್ಟು, ಮುಖ್ಯ ಕಾರ್ಯದರ್ಶಿಯ ವಿರುದ್ಧ ಯಾವುದೇ ಅವಹೇಳನಕಾರಿಯಾಗಿ ಮಾತನಾಡಿಲ್ಲ, ಈ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆʼ ಎಂದು ಹೇಳಿದ್ದಾರೆ.