ರಾಜ್ಯ BJP ನಾಯಕತ್ವದ ಆಯ್ಕೆ ವಿಳಂಬ ಆಗಿರೋದು ನಿಜಕ್ಕೂ ನೋವಿನ ಸಂಗತಿ: ಡಿ.ವಿ. ಸದಾನಂದ ಗೌಡ ಬೇಸರ
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ಡಿ.ವಿ ಸದಾನಂದ ಗೌಡ, ʼʼನಿಜಕ್ಕೂ ಇಷ್ಟು ವಿಳಂಬ ಆಗಿರೋದು ನೋವಿನ ಸಂಗತಿʼʼ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಖಂಡಿತವಾಗಿಯೂ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಆಯ್ಕೆ ವಿಳಂಬ ಆಗಿರೋದು ಹೌದು, ಇದು ನಮಗೆಲ್ಲ ಅತ್ಯಂತ ನೋವು ತಂದಿದೆ. ನಾನು ನಮ್ಮ ವರಿಷ್ಠರ ಬಳಿ ಮನವಿ ಮಾಡುತ್ತೇನೆ. ಇವಾಗ್ಲಾದ್ರೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಬೇಗ ಮಾಡಿ, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ವರಿಷ್ಠರು ಉತ್ತರ ಕೊಡಬೇಕು ಎಂದುʼʼ ಆಗ್ರಹ ಮಾಡಿದರು.
ʼʼನಮ್ಮನ್ನು ಹೊರಗಿಟ್ಟೇ ವರಿಷ್ಠರು ತೀರ್ಮಾನ ಮಾಡಿದ್ದಾರೆʼʼ
ʼʼಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರು ತೀರ್ಮಾನ ಮಾಡಿದ್ದಾರೆ. ಎನ್.ಡಿ.ಎ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಚಾರದ ಬಗ್ಗೆ ತೀರ್ಮಾನ ಮಾಡುವಾಗ ನಮ್ಮನ ಹೊರಗಿಡ್ತಾರೆ. ಇದು ಕರ್ನಾಟಕಕ್ಕೆ ಸೀಮಿತ ಆಗಿಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಮತ ಕ್ರೂಡೀಕರಣ ಆಗಬೇಕಿದೆ. ಹಾಗಾಗಿ ಹೈ ಲೆವೆಲ್ನಲ್ಲಿ ಚರ್ಚೆಯಾಗಲಿದೆ. ಅವರು ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆʼʼ ಎಂದು ಇದೇ ವೇಳೆ ಸದಾನಂದ ಗೌಡ ಸ್ಪಷ್ಟಪಡಿಸಿದರು.