ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸರಕಾರಕ್ಕೆ ಸಲ್ಲಿಕೆ; ಮಾತೃಭಾಷೆ ಕಡ್ಡಾಯ ಬೋಧನೆಗೆ ಶಿಫಾರಸು
ಬೆಂಗಳೂರು: ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲ ಮಾದರಿಯ ಶಾಲೆಗಳು 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಸೇರಿದಂತೆ ಹಲವು ಶಿಫಾರಸುಗಳ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಅಂತಿಮ ವರದಿ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ.
ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಶಿಕ್ಷಣ ಆಯೋಗದ ಅಧ್ಯಕ್ಷ ಪ್ರೊ.ಸುಖದೇವ್ ಥಾರೋಟ್ ಅವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಅಂತಿಮ ವರದಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ, ಎಂ.ಸಿ.ಸುಧಾಕರ್, ಭೈರತಿ ಸುರೇಶ್, ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ, ಮುಖ್ಯಮಂತಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆಯಲ್ಲಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಅನ್ನು ರದ್ದುಗೊಳಿಸಿ ಎಸ್ಇಪಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ತಿಳಿಸಿತ್ತು. ಆನಂತರ ಅಧಿಕಾರಕ್ಕೆ ಬಂದ ತಕ್ಷಣ 2023 ಅಕ್ಟೋಬರ್ನಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಶಿಕ್ಷಣ ತಜ್ಞ ಪ್ರೊ.ಸುಖದೇವ್ ಥಾರೋಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಿತ್ತು. ಈಗ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಮಾದರಿಯ ಶಾಲೆಗಳು 5ನೆ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ಹೆಚ್ಚು ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೆ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ತಿಳಿಸಿದೆ.
ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃಭಾಷೆ ಜತೆಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದ್ದು, ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷ ನೀತಿ ಅವಶ್ಯಕತೆ ಇಲ್ಲವೆಂದು ತಿಳಿಸಿದಂತಾಗಿದೆ.
ಇದೇ ರೀತಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಎಂಬ ರೀತಿಯಲ್ಲಿ ವಿಭಾಗ ಮಾಡಿಕೊಂಡು ಪ್ರತಿ ವಿಭಾಗದಲ್ಲೂ ಶಿಫಾರಸುಗಳನ್ನು ಸರಕಾರಕ್ಕೆ ನೀಡಿದೆ.
ಸಮಿತಿ ಕಾರ್ಯವೈಖರಿ:
ಸಮಿತಿಯು 12 ಸದಸ್ಯರು ಮತ್ತು 6 ವಿಷಯ ತಜ್ಞರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ತನ್ನ ಕಾರ್ಯಾರಂಭ ಮಾಡಿತು. ಪ್ರಾಥಮಿಕ, ಉನ್ನತ ಶಿಕ್ಷಣ ಹೀಗೆ 35 ಕಾರ್ಯಪಡೆಗಳನ್ನು ರಚಿಸಿತು. 379 ವಿಷಯ ತಜ್ಞರು ಸೇರಿ 132 ಸಭೆಗಳು, ವಿಚಾರ ಸಂಕಿರಣಗಳು ನಡೆಸಿದವು. ಇವು 2,775 ಮಾನವ ದಿನಗಳಿಗೆ ಸಮನಾಗಿದೆ.2024ರಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿತು. ಇದು ಪದವಿ ಶಿಕ್ಷಣದ ಬಹು ಪ್ರವೇಶ ಮತ್ತು ನಿರ್ಗಮನಕ್ಕೆ ಸಂಬಂಸಿದ್ದಾಗಿತ್ತು.
ಆಯೋಗದ ಅಂತಿಮ ವರದಿ ಮೂರು ಸಂಪುಟಗಳಲ್ಲಿದೆ. ಶಾಲಾ ಶಿಕ್ಷಣ 560 ಪುಟ, ಉನ್ನತ ಶಿಕ್ಷಣದ್ದು, 455 ಪುಟ ಹಾಗೂ ಸಂಪುಟ ೩ ಸುಮಾರು 450 ಪುಟಗಳನ್ನು ಹೊಂದಿದೆ. ಇದರಲ್ಲಿ ಸಂಪುಟ-1-2ಈ ರೀತಿ ಗುರುತಿಸಿದೆ. ಒಟ್ಟಾರೆ ವರದಿಯು 2,197 ಪುಟಗಳಿಂದ ಕೂಡಿದೆ. ಇದು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳುವಳಿಕೆಯ ಆಧಾರದ ಮೇಲೆ ರೂಪಿಸಲಾಗಿದೆ.
ಹಿಂದಿ ಭಾಷೆ ಕೈಬಿಟ್ಟ ಆಯೋಗ..!
ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದ್ದು, ಪ್ರಥಮ: ಕನ್ನಡ, ದ್ವಿತೀಯ: ಆಂಗ್ಲ ಭಾಷೆ ಮತ್ತು ತೃತೀಯ: ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ.
ತೃತೀಯ ಭಾಷೆ ಇರುವುದಿಲ್ಲ. ಇನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಂಗ್ಲಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ.
ವಿಭಾಗವಾರು ಪ್ರಮುಖ ಶಿಫಾರಸುಗಳು
► ಶಾಲಾ ಶಿಕ್ಷಣ
- ಸಂವಿಧಾನಿಕ ಮೌಲ್ಯ ಶಿಕ್ಷಣ ಕಡ್ಡಾಯ ವಿಷಯವಾಗಿ ಕಲಿಸಿ
- 2 ವರ್ಷ ಪೂರ್ವ ಪ್ರಾಥಮಿಕ, 8 ವರ್ಷ ಪ್ರಾಥಮಿಕ, 4 ವರ್ಷ ಮಧ್ಯಮಿಕ ಶಿಕ್ಷಣ
- ಆರ್ಟಿಇ 4-18 ವಯೋಮಾನಕ್ಕೆ ವಿಸ್ತರಿಸುವುದು
- ಎನ್ಸಿಇಆರ್ಟಿ ಪಠ್ಯಪುಸ್ತಕದ ಅವಲಂಬನೆ ಕೊನೆಗೊಳಿಸಿ
- ಗುತ್ತಿಗೆ ಅತಿಥಿ ಶಿಕ್ಷಕರ ನೇಮಕ ನಿಲ್ಲಿಸಿ
► ಉನ್ನತ ಶಿಕ್ಷಣ
- ಎನ್ಇಪಿ 2020 ಪೂರ್ವದ ಪುನರ್ ಪ್ರವೇಶ ನೀತಿ ಮುಂದುವರಿಸಿ
- ಪಿಯು ಕಾಲೇಜುಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ಪರಿಚಯಿಸಿ
- 3 ವರ್ಷದ ಪದವಿ ರಾಜ್ಯಗಳಲ್ಲಿ 2 ವರ್ಷದಲ್ಲಿ ಸಂಶೋಧನೆಗೆ ಒತ್ತು ನೀಡುವ 2 ವರ್ಷದ ಪಿಜಿ ಪದವಿ ಇರಲಿ
- ಖಾಸಗಿ ಸಂಸ್ಥೆಗಳ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ
- ವಿವಿ ನೇಮಕಾತಿಗಳನ್ನು ಕೆಇಎ ಮೂಲಕವೇ ಮಾಡಿ
► ವೃತ್ತಿಪರ ಶಿಕ್ಷಣ
- ಕನ್ನಡದಲ್ಲಿ ಕೃಷಿ ಪಠ್ಯಪುಸ್ತಕ ಅಭಿವೃದ್ಧಿ ಪಡಿಸಿ
- ಉದ್ಯೋಗ ಆಧಾರಿತ ಶಿಕ್ಷಣ ಹೆಚ್ಚುಗೊಳಿಸಿ
- ಇಂಜಿನಿಯರಿಂಗ್ನಲ್ಲಿ ಎಐ, ಎಂಎಲ್, ಡಿಎಸ್ ಪರಿಚಯಿಸಿ
- ಕೃಷಿ ವಿಜ್ಞಾನದಲ್ಲಿ ಹೊಸ ಕೋರ್ಸ್ ಪರಿಚಯಿಸಿ
- ಶಾಲಾ ವ್ಯವಸ್ಥೆಯಲ್ಲಿ ಕೃಷಿ ಶಿಕ್ಷಣ ನೀಡಿ
- ಅಂತಾರಾಷ್ಟ್ರೀಯ ಇಂಟರ್ಶಿಪ್ ಉತ್ತೇಜಿಸಿ