ಸಂವಿಧಾನ, ತ್ರಿವರ್ಣ ಧ್ವಜ ಒಪ್ಪದವರು ತಾಲಿಬಾನ್ಗಳು: ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸಂಘ ಪರಿವಾರವು ಸಂವಿಧಾನ ಹಾಗೂ ತ್ರಿವರ್ಣ ಧ್ವಜವನ್ನು ಒಪ್ಪುವುದಿಲ್ಲ. ಹಿಂದೆಯೇ ವಿರೋಧ ಮಾಡಿದ್ದರು. ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪದೆ ಇರುವವರು ತಾಲಿಬಾನ್ಗಳು. ಇವರಿಂದ ದೇಶ ಏನನ್ನು ನಿರೀಕ್ಷೆ ಮಾಡಲಾಗುವುದಿಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೌನವಾಗಿಯೇ ಸಂವಿಧಾನ ಬದಲಾವಣೆ ಮಾಡಬೇಕು. ಬಹಿರಂಗವಾಗಿ ಚರ್ಚೆ ಮಾಡಬಾರದು’ ಎಂದು ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಇದು ದೇಶದ್ರೋಹಿಗಳ ಒಳಸಂಚು ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಘ ಪರಿವಾರದವರು ಅಂಬೇಡ್ಕರ್ ದ್ವೇಷಿಗಳು, ಸಂವಿಧಾನ ದ್ರೋಹಿಗಳು. ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಈಗಾಗಲೇ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಈಗ ಮೋಹನ್ ಭಾಗವತ್ ರಾಮಮಂದಿರ ಉದ್ಘಾಟನೆ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಆರೆಸ್ಸೆಸ್ ನೋಂದಣಿಯಾಗದ ಅನಧಿಕೃತ ಸಂಘಟನೆ. ಕೋಟ್ಯಂತರ ರೂ.ಗಳನ್ನು ಬೇರೆ ಮೂಲಗಳಿಂದ ಖರ್ಚು ಮಾಡುತ್ತಿದ್ದಾರೆ. ಯಾವುದಕ್ಕೂ ಲೆಕ್ಕ ಇಲ್ಲ ಎಂದು ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಸಾವಿರಾರು ಜನರು ತ್ಯಾಗ ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದನ್ನು ಅಪಮಾನಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನ ಇಲ್ಲ ಎಂದರೆ ಶಿಕ್ಷಣ, ಆರೋಗ್ಯ ಎಲ್ಲವೂ ಒಂದು ವರ್ಗಕ್ಕೆ ಸೀಮಿತವಾಗಲಿದೆ. ಈ ಬಗ್ಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದು ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.
ಹಿಂದೆ ಬಿಜೆಪಿ ಸರಕಾರ ಭೂ ಸುಧಾರಣೆ ಕಾಯ್ದೆ, ಮತಾಂತರ ಕಾಯ್ದೆ ತಿದ್ದುಪಡಿ ಮಾಡಿತ್ತು, ಅದನ್ನು ಕಾಂಗ್ರೆಸ್ ಸರಕಾರ ತಿದ್ದುಪಡಿ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕರ್ನಾಟಕ ಎಲ್ಲಾ ರಾಜ್ಯಗಳಿಂತ ಮೊದಲು ಚರ್ಚೆ ಮಾಡಿದೆ. ಅದನ್ನು ಜಾರಿಗೆ ತರಬೇಕು ಎಂದು ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.
ಸಂಘ ಪರಿವಾರದ ಜೊತೆ ಸಂಪರ್ಕ ಇಟ್ಟುಕೊಂಡವರು ಸರಕಾರದಲ್ಲಿ ಈಗಲೂ ಆಯಕಟ್ಟಿನ ಜಾಗದಲ್ಲಿದ್ದಾರೆ. ಅವರನ್ನು ದೂರ ಇಡಬೇಕಿದೆ. ನಮ್ಮ ಸರಕಾರ ಗ್ಯಾರಂಟಿಯಲ್ಲಿ ಮುಳುಗಿ ಹೋಗಿದ್ದು, ಈ ವಿಚಾರಗಳ ಕುರಿತು ಪಕ್ಷ ಮತ್ತು ಸರಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಅರಾಜಕತೆ ಸೃಷ್ಟಿಸುವ ವ್ಯಕ್ತಿಗೆ ಝಡ್ ಪ್ಲಸ್ ಭದ್ರತೆ ಏಕೆ?:
‘ಆರೆಸ್ಸೆಸ್ ನ ಮೋಹನ್ ಭಾಗವತ್ ಯಾರೆಂದು ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ವ್ಯಕ್ತಿಗೆ ಜನರ ತೆರಿಗೆ ದುಡ್ಡನ್ನು ಪೋಲು ಮಾಡಿ ಭದ್ರತೆ ನೀಡಲಾಗುತ್ತಿದೆ. ಕೂಡಲೇ ಭದ್ರತೆಯನ್ನು ಹಿಂಪಡೆಯಬೇಕು’
-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ