ತುಂಗಭದ್ರಾ ಜಲಾಶಯ | ‘ಅಣೆಕಟ್ಟಿಗೆ ಗೇಟ್ ಅಳವಡಿಕೆ’ ಎರಡನೇ ಬೆಳೆಗೆ ನೀರು ಇಲ್ಲ: ಸಚಿವ ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ
ಬೆಂಗಳೂರು : ಕೇಂದ್ರ ಸರಕಾರ ಹಾಗೂ ತುಂಗಭದ್ರಾ ಜಲಾಶಯದ ಮಂಡಳಿಯ ನಿರ್ಧಾರದಂತೆ ಅಣೆಕಟ್ಟೆಯ 33 ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ‘ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ’ ಸಭೆಯ ಬಳಿಕ ಮಾತನಾಡಿದ ಅವರು, ಸರಕಾರಕ್ಕೆ ರೈತರ ಹಿತ ಮುಖ್ಯ.
ಜೊತೆಗೆ ಅಣೆಕಟ್ಟೆಯ ರಕ್ಷಣೆಯೂ ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸಿ ಒಕ್ಕೊರಲಿನಿಂದ ಈ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ಎರಡನೇ ವಾರದಿಂದ ಹೊಸ 33ಗೇಟ್ ಅಳವಡಿಕೆ ಕಾರ್ಯ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಟೆಂಡರ್ನಲ್ಲಿ ಅರ್ಹತೆ ಪಡೆದಿರುವ ಗುಜರಾತ್ ಮೂಲದ ಕಂಪೆನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜೊತೆಗೆ ಕೆಲ ಕಾಲುವೆಗಳ ದುರಸ್ತಿ ಹಾಗೂ ಇನ್ನಿತರ ಅಣೆಕಟ್ಟೆಯ ಸಂಪುರ್ಣ ಸಣ್ಣ ದುರಸ್ತಿಗಳನ್ನು ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ರಾಜಕೀಯ ಮಾಡುವುದು ಸಲ್ಲ: ನಮಗೆ ರೈತರ ಹಿತ ಮುಖ್ಯ. ಜೊತೆಗೆ ಭವಿಷ್ಯದ ದೃಷ್ಟಿಯಿಂದ ಅಣೆಕಟ್ಟೆಯ ರಕ್ಷಣೆ ಬಹಳ ಮುಖ್ಯ. ಕೆಲ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಒಮ್ಮತದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಹಿಂದೆ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಸಂದರ್ಭದಲ್ಲಿ, ಬೋರ್ಡ್ನವರು ಅನುದಾನದ ಕೊಡದಿದ್ದರೂ ರಾಜ್ಯ ಸರಕಾರವೇ ಸಂಪೂರ್ಣ ಹಣ ವ್ಯಯಿಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಗೇಟ್ ಅಳವಡಿಕೆ ವೇಳೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
75 ಟಿಎಂಸಿ ನೀರು ಲಭ್ಯವಿದೆ: ಇದೀಗ ಆ ಪ್ರದೇಶದಲ್ಲಿನ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರ ವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಕೆರೆಕಟ್ಟೆ ತುಂಬಿಸಲು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ ಎಂದರು.
ರಾಜ್ಯದ ಪಾಲು 33.01 ಟಿಎಂಸಿ ಉಳಿಯಲಿದೆ. ‘105 ಟಿಎಂಸಿ ನೀರು ಸಂಗ್ರಹಿಸಲು ಅವಕಾಶ ಇತ್ತು. ಕೇಂದ್ರ ಸರಕಾರ ಮತ್ತು ಬೋರ್ಡ್ ನೀಡಿದ ಸಲಹೆಯಂತೆ ಅಣೆಕಟ್ಟೆಯ ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗಿದೆ. ಎರಡನೇ ಬೆಳೆಗೆ ಕನಿಷ್ಠ ಕರ್ನಾಟಕಕ್ಕೆ 60 ಟಿಎಂಸಿ ಬೇಕಾಗುತ್ತದೆ. ಕರ್ನಾಟಕದ ಪಾಲು 33.01 ಟಿಎಂಸಿ ನೀರು ಉಳಿಯಲಿದೆ. ಆದರೆ, ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ನೀರು ಒದಗಿಸಲು ಸಾಧ್ಯವಿಲ್ಲ’
-ಶಿವರಾಜ್ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ