ವಾಲ್ಮೀಕಿ ನಿಗಮದ ಹಗರಣ : 5 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
PC : Enforcement Directorate
ಬೆಂಗಳೂರು, ಆ.27 : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ) ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನೆಕ್ಕುಂಟಿ ನಾಗರಾಜ್, ಚಂದ್ರಮೋಹನ್, ಗೋಲಪಲ್ಲಿ ಕಿಶೋರ್ ರೆಡ್ಡಿ ಮತ್ತು ಎಟಕೇರಿ ಸತ್ಯನಾರಾಯಣ ಅವರಿಗೆ ಸೇರಿದ 4.45 ಕೋಟಿ ರೂ. ಮೌಲ್ಯದ ಭೂಮಿ, ಫ್ಲಾಟ್ಗಳು ಮತ್ತು ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಇದ್ದ 50 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಈ.ಡಿ ಪ್ರಕಟನೆ ತಿಳಿಸಿದೆ.
ಕಳೆದ ವರ್ಷ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಉದ್ಯೋಗಿ ಚಂದ್ರಶೇಖರ್ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಹಗರಣ ಬೆಳಕಿಗೆ ಬಂದಿತ್ತು.
ಇದಾದ ನಂತರ ರಾಜ್ಯ ಪೊಲೀಸರು ಮತ್ತು ಸಿಬಿಐ ತನಿಖೆ ಪ್ರಾರಂಭಿಸಿದವು. ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಕೂಡ ತನಿಖೆ ಕೈಗೆತ್ತಿಕೊಂಡಿತ್ತು.