ಕುಮಾರಸ್ವಾಮಿಯವರ ಭಗವದ್ಗೀತಾ ಪಾರಾಯಣ ಮತ್ತು ಮನುವಾದಿ ರಾಜಕಾರಣ
ಹಕ್ಕುಗಳನ್ನು ಕಿತ್ತುಹಾಕಿ ಕರ್ತವ್ಯದ ಎಮರ್ಜೆನ್ಸಿ ಹೇರಲು ಮತ್ತು ಸಂವಿಧಾನವನ್ನು ಕಿತ್ತುಹಾಕಿ ಭಗವದ್ಗೀತೆಯನ್ನು ಹೇರಲು ಮೋದಿ ಸರಕಾರ ಕುಮಾರಸ್ವಾಮಿಗಳಂತಹವರನ್ನೂ ಬಳಸಿಕೊಂಡು ಪ್ರಯತ್ನಿಸುತ್ತಿರುವಾಗ ‘ನಾವು ಈ ದೇಶದ ದಮನಿತ ಜನತೆ’ ಭಗವದ್ಗೀತೆಯ ಬಗ್ಗೆ ಅಂಬೇಡ್ಕರ್ ಅವರ ಗ್ರಹಿಕೆಯನ್ನು ಅರಿಯುವುದು ಮತ್ತು ಅರಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಭಾಗ - 1
ಕರ್ನಾಟಕದ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ಬಡವರು-ಹಿಂದುಳಿದ ವರ್ಗಗಳು ಶಿಕ್ಷಣಕ್ಕೆ ನೆಚ್ಚಿಕೊಂಡಿರುವ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿರುವಾಗ ಜಾತ್ಯತೀತ ಹೆಸರಿನ ಪಕ್ಷದ ನಾಯಕ ಮತ್ತು ಮೋದಿ ಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಶಾಲಾ ಪಠ್ಯಗಳಲ್ಲಿ ‘ನಿಷ್ಕಾಮ ಕರ್ಮವನ್ನು’ ಮತ್ತು ಹುಟ್ಟಿನಿಂದಲೇ ನಿಗದಿಯಾಗುವ ‘ಸ್ವಧರ್ಮದ ಕರ್ತವ್ಯವನ್ನು ಪಾಲಿಸಲು’ ಬೋಧಿಸುವ ಭಗವದ್ಗೀತೆಯನ್ನು ಪಠ್ಯವನ್ನಾಗಿ ಸೇರಿಸಬೇಕೆಂದು ತಮ್ಮದೇ ಮಂತ್ರಿಮಂಡಲದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ಗೆ ಬಹಿರಂಗ ಪತ್ರ ಬರೆದಿದ್ದಾರೆ.
(https://x.com/hd_kumaraswamy/status/1996902120730382801/photo/1)
ಶತಶತಮಾನಗಳಿಂದ ಈ ದೇಶದಲ್ಲಿ ಮನುಧರ್ಮವು ಹಕ್ಕು ಮತ್ತು ಅಧಿಕಾರಗಳೆಲ್ಲವನ್ನೂ ಶೋಷಕ ಜಾತಿಗಳಿಗೇ ಸೀಮಿತಗೊಳಿಸಿತ್ತು ಮತ್ತು ದಲಿತ-ದಮನಿತರಿಗೆ ಯಾವುದೇ ಹಕ್ಕುಗಳಿಲ್ಲದೆ ಕೇವಲ ಶೋಷಕ ಜಾತಿಗಳ ಸೇವೆ ಮಾಡುವ ಕರ್ತವ್ಯಗಳನ್ನು ಮಾತ್ರ ಮಾಡಬೇಕೆಂದು ನಿಗದಿಗೊಳಿಸಿತ್ತು. ಅದೇ ಕಾನೂನು ಮತ್ತು ಅದೇ ಧರ್ಮವೂ ಆಗಿತ್ತು.
ಆದರೆ ಸ್ವಾತಂತ್ರ್ಯ ಹೋರಾಟ ಮತ್ತು ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಈ ದೇಶದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಈ ಎಲ್ಲಾ ದಲಿತ ಭಾರತದ ದಮನಿತ ಜನರಿಗೆ ಹಕ್ಕುಗಳನ್ನು ದೊರಕಿಸಿ 75 ವರ್ಷಗಳು ಆಗಿವೆ. ಆ ಹಕ್ಕುಗಳನ್ನು ಇನ್ನು ಈ ದೇಶದ ದಮನಿತರ ಬಹುಸಂಖ್ಯಾತರು ಅನುಭವಿಸುವ ಮುಂಚೆಯೇ ಮೋದಿ ಸರಕಾರ ಹಕ್ಕುಗಳನ್ನು ಶೋಷಕ ವರ್ಗಗಳಿಗೆ ಖಾತರಿ ಮಾಡುತ್ತಾ ದಮನಿತ ಜನರು ಹಕ್ಕುಗಳನ್ನು ಕೇಳದೆ ಕರ್ತವ್ಯಗಳಿಗೆ ಮರಳಬೇಕೆಂದು ಬೋಧಿಸಲು ಪ್ರಾರಂಭಿಸಿದೆ. ಅದಕ್ಕೆ ದಮನಿತ ಜನರಿಗೆ ಕರ್ತವ್ಯಗಳನ್ನು ಬೋಧಿಸುವ ಭಗವದ್ಗೀತೆಯನ್ನು ದೊಡ್ಡ ಮಟ್ಟದಲ್ಲಿ ಮತ್ತೆ ದೇಶದ ರಾಷ್ಟ್ರೀಯ ಗ್ರಂಥವಾಗಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ.
ಈಗ ಮೋದಿ ಸರಕಾರದ ಮಾತ್ರವಲ್ಲದೇ ಅದರ ರಾಜಕೀಯದ ಭಾಗವೂ ಆಗಿಬಿಟ್ಟಿರುವ ಕುಮಾರಸ್ವಾಮಿಯವರು ಈ ಹಿಂದೆ 2022ರಲ್ಲಿ ಬಿಜೆಪಿಯ ಸಖ್ಯವಿಲ್ಲದಿರುವಾಗ ತಾವೇ ಆಕ್ಷೇಪಿಸಿದ್ದ ಭಗವದ್ಗೀತೆಯ ಪಠ್ಯವನ್ನು ಈಗ ತಾವೇ ಶಾಲಾ ಪಠ್ಯವಾಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಗುಪ್ತ ಮನುವಾದಿಯಾಗಿದ್ದವರು ಈಗ ಮನುವಾದ ಬಹಿರಂಗ ಪ್ರಚಾರಕರಾಗಿದ್ದಾರೆ.
ಆದರೆ ಅತ್ಯಂತ ಅಮಾಯಕರ ರೀತಿ ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ ಎಂದು ಸೋಗು ಹಾಕುತ್ತಿದ್ದಾರೆ. ಇಂಥ ರಾಜಕೀಯ ಊಸರವಳ್ಳಿಗಳಿಗೆ ಸ್ಪಷ್ಟವಾಗಿ ಅರ್ಥವಾಗಲೆಂದೇ ಅಂಬೇಡ್ಕರ್ ಅವರು ‘‘Krsihna and His Gita: Philosophical Defence Of Counter Revolution’’ ಎಂಬ ವಿವರಣಾತ್ಮಕ ಲೇಖನವನ್ನೇ ಬರೆದಿದ್ದಾರೆ. ಕುಮಾರಸ್ವಾಮಿಯವರು ಅದನ್ನು ಓದಿದ ಮಾತ್ರಕ್ಕೆ ಬದಲಾಗುವುದಿಲ್ಲ. ಏಕೆಂದರೆ ಅವರದ್ದು ಶೋಷಕ ವರ್ಗಗಳ ಅವಕಾಶವಾದಿ ಸಿದ್ಧಾಂತ ಮತ್ತು ರಾಜಕಾರಣ.
ಆದರೆ ಹಕ್ಕುಗಳನ್ನು ಕಿತ್ತುಹಾಕಿ ಕರ್ತವ್ಯದ ಎಮರ್ಜೆನ್ಸಿ ಹೇರಲು ಮತ್ತು ಸಂವಿಧಾನವನ್ನು ಕಿತ್ತುಹಾಕಿ ಭಗವದ್ಗೀತೆಯನ್ನು ಹೇರಲು ಮೋದಿ ಸರಕಾರ ಕುಮಾರಸ್ವಾಮಿಗಳಂತಹವರನ್ನೂ ಬಳಸಿಕೊಂಡು ಪ್ರಯತ್ನಿಸುತ್ತಿರುವಾಗ ‘ನಾವು ಈ ದೇಶದ ದಮನಿತ ಜನತೆ’ ಭಗವದ್ಗೀತೆಯ ಬಗ್ಗೆ ಅಂಬೇಡ್ಕರ್ ಅವರ ಗ್ರಹಿಕೆಯನ್ನು ಅರಿಯುವುದು ಮತ್ತು ಅರಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ವಾಸ್ತವವಾಗಿ ಭಗವದ್ಗೀತೆಯನ್ನು ಹಿಂದೂಗಳ ಧರ್ಮಗ್ರಂಥವೆಂದು ನೋಡಬಾರದೆಂದೂ, ಅದು ಎಲ್ಲಾ ಜಾತಿ-ಧರ್ಮಗಳ ಜನರಿಗೂ ನೈತಿಕ ಮೌಲ್ಯಗಳನ್ನು ಬೋಧಿಸುವ ಸಾರ್ವತ್ರಿಕ ನೀತಿಗ್ರಂಥ ಎಂಬುದು ಭಾರತವನ್ನು ಹಿಂದೂರಾಷ್ಟ್ರ ಮಾಡಹೊರಟಿರುವ ಸಂಘಿ ಫ್ಯಾಶಿಸ್ಟರ ಸಮರ್ಥನೆ. ಆ ಸಮರ್ಥನೆಯನ್ನು ಮುಂದಿಟ್ಟುಕೊಂಡೆ ಬ್ರಾಹ್ಮಣ ಭಗವದ್ಗೀತೆಯನ್ನು ಅಬ್ರಾಹ್ಮಣ ಹಿಂದೂಗಳ ಮೇಲೂ, ಇತರ ಧರ್ಮೀಯರ ಮೇಲೂ ಹೇರಲು ಹೊರಟಿದೆ.
ಈ ಪ್ರಯತ್ನಗಳನ್ನು ಮೋದಿ ಮೊದಲ ಬಾರಿ ಪ್ರಧಾನಿಯಾದಾಗಲೇ ಪ್ರಾರಂಭಿಸಲಾಗಿತ್ತು. ಆಗ ಮೋದಿ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಬೇಕೆಂದು ಆಗ್ರಹಿಸಿದ್ದರು. ಮೋದಿಯವರಂತೂ ಅಮೆರಿಕದ ಅಧ್ಯಕ್ಷ ಒಬಾಮರಿಂದ ಹಿಡಿದು ಭಾರತಕ್ಕೆ ಅತಿಥಿಗಳಾಗಿ ಬರುತ್ತಿರುವ ಪ್ರತಿಯೊಬ್ಬರಿಗೂ ಭಗವದ್ಗೀತೆಯನ್ನು ಭಾರತದ ನೆನಪಿನಲ್ಲಿ ನೀಡಲು ಪ್ರಾರಂಭಿಸಿದ್ದಾರೆ.
ವಿಶ್ವಗುರುವಾಗಲು ಭಗವದ್ಗೀತೆಯ ಮೇಲೆ ವಿಶ್ವಸಾರವನ್ನು ಆರೋಪಿಸುವ ಬಿಜೆಪಿ ಅದಕ್ಕಾಗಿ ತಿಲಕ್, ಗಾಂಧಿ ಮತ್ತು ವಿವೇಕಾನಂದರನ್ನು ಅತ್ಯಂತ ಅವಕಾಶವಾದಿಯಾಗಿ ಬಳಸಿಕೊಳ್ಳುತ್ತಿದೆ.
ಆದರೆ, ಭಗವದ್ಗೀತೆ, ಹಿಂದೂ ಪುರಾಣಗಳು, ಸ್ಮತಿ ಮತ್ತು ಶೃತಿ, ವೇದಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರ ಹೂರಣವನ್ನು ಬಯಲು ಮಾಡಿರುವ ಅಂಬೇಡ್ಕರ್ ಅವರನ್ನು ಮಾತ್ರ ಈ ವಿಷಯದಲ್ಲಿ ನೆನೆಯಲೂ ಹೋಗುವುದಿಲ್ಲ.
ಅದಕ್ಕೆ ಕಾರಣಗಳಿವೆ.
ಭಗವದ್ಗೀತೆಯ ಬ್ರಾಹ್ಮಣ್ಯವನ್ನು ಬಯಲು ಮಾಡುವ ಅಂಬೇಡ್ಕರ್ ಕೃತಿಗಳು
ವಾಸ್ತವದಲ್ಲಿ ಹಿಂದೂ ಎಂದು ಕರೆಯಲ್ಪಡುವ ಈ ಬ್ರಾಹ್ಮಣೀಯ ಗ್ರಂಥಗಳ ಅಸಲಿ ಸಾರವನ್ನು ಅರ್ಥಮಾಡಿಕೊಳ್ಳಲು ಭಾರತೀಯರೆಲ್ಲರೂ ಕಡ್ಡಾಯವಾಗಿ ಆ ಬಗ್ಗೆ ಅಂಬೇಡ್ಕರ್ ಬರೆದಿರುವ Philosophy Of Hinduism ಮತ್ತು Revolution and Counter Revolution in Ancient India ಕೃತಿಗಳನ್ನು ಓದಲೇ ಬೇಕು.
ಅದರ ಭಾಗವಾಗಿ ಅಂಬೇಡ್ಕರ್ ಬರೆದಿರುವ ‘Krishna and His Geeta’ ಲೇಖನದಲ್ಲಿ ನಿರ್ದಿಷ್ಟವಾಗಿ ಭಗವದ್ಗೀತೆಯನ್ನು ಬರೆದ ಕಾಲ, ಅದನ್ನು ಬರೆಯುವ ಹಿಂದಿನ ಉದ್ದೇಶ-ಅಗತ್ಯ ಹಾಗೂ ಅದರಲ್ಲಿರುವ ಬೋಧನೆಗಳ ಹಿಂದಿನ ಬ್ರಾಹ್ಮಣ ಶ್ರೇಷ್ಠತೆ ಮತ್ತು ವರ್ಣಾಶ್ರಮ ರಕ್ಷಣೆಯ ಹುನ್ನಾರಗಳನ್ನು ಅಂಬೇಡ್ಕರ್ ಎಳೆಎಳೆಯಾಗಿ ಬಿಚ್ಚಿಡುತ್ತಾರೆ.
ಇವೆಲ್ಲವೂ ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳ 3ನೇ ಸಂಪುಟದಲ್ಲಿವೆ. ಅದರ ಕನ್ನಡಾನುವಾದವೂ ಕರ್ನಾಟಕ ಸರಕಾರದ ಕಣಜ ವೆಬ್ ಸೈಟಿನ ಈ ವಿಳಾಸದಲ್ಲಿ ಸಿಗುತ್ತದೆ:
https://kanaja.karnataka.gov.in/ebook/wp-content/uploads/2020/PDF/10.pdf
ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡುವುದಕ್ಕಿಂತ ಅಂಬೇಡ್ಕರ್ ಅವರ ಬರಹಗಳ ಈ ಮೂರನೇ ಸಂಪುಟದ ಅಧ್ಯಯನವನ್ನು ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಡ್ಡಾಯ ಮಾಡಬೇಕು. ಹಾಗಾಗದೆ, ಒಂದು ವೇಳೆ ಭಗವದ್ಗೀತೆಯನ್ನು ಶಾಲಾಕಾಲೇಜುಗಳಲ್ಲಿ ಪರಿಚಯಿಸುವುದೇ ಆದರೆ ಅದರ ಜೊತೆಗೆ ಕಡ್ಡಾಯವಾಗಿ ಅಂಬೇಡ್ಕರ್ ಅವರ ‘Krishna and His Geeta’ ಲೇಖನದ ಓದನ್ನೂ ಕಡ್ಡಾಯಗೊಳಿಸಬೇಕೆಂದು ಜನಚಳವಳಿಗಳು ಆಗ್ರಹಿಸಬೇಕು.
ಅದೇನೇ ಇರಲಿ. ಮನುಧರ್ಮ ಬೋಧಿಸುವ ಹಿಂದುತ್ವ ಫ್ಯಾಶಿಸಂಗೆ ಪರ್ಯಾಯವಾಗಿ ಮಾನವೀಯ ಹಾಗೂ ಪ್ರಜಾತಾಂತ್ರಿಕ ಸಮಾಜವನ್ನು ಕಟ್ಟಲು ಹೋರಾಡುತ್ತಿರುವ ಜನಚಳವಳಿಗಳಂತೂ ಕಡ್ಡಾಯವಾಗಿ ಅದನ್ನು ಓದಲೇ ಬೇಕು. ಇದರ ಜೊತೆಗೆ ಡಿ.ಡಿ. ಕೋಸಂಬಿಯವರ ಲೇಖನಗಳನ್ನೂ ಕೂಡಿಸಿ ಓದಿದರೆ ಆಧುನಿಕ ಬ್ರಾಹ್ಮಣ್ಯದ ಹುನ್ನಾರಗಳು ಇನ್ನಷ್ಟು ಸ್ಪಷ್ಟವಾದೀತು.
ಅಮಾನವೀಯ ಮನುಧರ್ಮದ ಸಾರಸಂಗ್ರಹವೇ ಭಗವದ್ಗೀತೆ
ಅಂಬೇಡ್ಕರ್ ಅವರ ಪ್ರಕಾರ ಭಗವದ್ಗೀತೆಯಲ್ಲಿ ನೀತಿಯೂ ಇಲ್ಲ, ಧರ್ಮವೂ ಇಲ್ಲ.
ಅದು ಮನುಸ್ಮತಿಯ ಸಾರಸಂಗ್ರಹ ರೂಪ ಮಾತ್ರ.
ಅಂಬೇಡ್ಕರ್ ಅವರು ಮಹಾಭಾರತ ಹಾಗೂ ಭಗವದ್ಗೀತೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ನಂತರ ಈ ನಿಲುವಿಗೆ ಬರುತ್ತಾರೆ.
ಹಿಂದಿನ ಕಾಲದಲ್ಲಿ ಯಾವುದಾದರೂ ಧರ್ಮಶಾಸ್ತ್ರದ ಹಾಗೂ ನೀತಿಗ್ರಂಥದ ಮಹತ್ವವನ್ನೂ ಹಾಗೂ ಅದರಲ್ಲಿ ಬೋಧಿಸಿರುವ ಒಳಿತು-ಕೆಡುಕುಗಳ ನೀತಿ ಸಂಹಿತೆಯ ಮಹತ್ವವನ್ನು ಅರಿಯಲು ಅದರ ‘ಸಾಮಾಜಿಕ ಉಪಯುಕ್ತತೆ’ ಏನು ಎಂಬ ಮಾನದಂಡವನ್ನು ಮಾತ್ರ ಅನುಸರಿಸುತ್ತಿದ್ದರು.
ಆದರೆ ಆಧುನಿಕ ಪ್ರಜಾತಂತ್ರದ ಕಾಲದಲ್ಲಿ ಯಾವುದೇ ಸಿದ್ಧಾಂತ, ಧರ್ಮ ಅಥವಾ ಶಾಸ್ತ್ರಗಳ ಮಹತ್ವವನ್ನು ನ್ಯಾಯದ ಒರೆಗಲ್ಲಿನಲ್ಲಿ ಪರಿಶೀಲಿಸಿ ತೀರ್ಮಾನಿಸಬೇಕು ಎಂದು ಅಂಬೇಡ್ಕರ್ ಘೋಷಿಸುತ್ತಾರೆ.
ಇಂದಿನ ಕಾಲಘಟ್ಟದಲ್ಲಿ ನ್ಯಾಯವು ಅಮೂರ್ತವೇನಲ್ಲ. ಅದು ‘ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ’ಗಳೆಂಬ ಮೌಲ್ಯಗಳಲ್ಲಿ ಅಡಕವಾಗಿರುತ್ತದೆ. ಆ ಮೂರು ಮೌಲ್ಯಗಳಲ್ಲೂ ಪ್ರಧಾನವಾದದ್ದು ಸಮಾನತೆ, ಉಳಿದೆರಡು ಮೌಲ್ಯಗಳೂ ಅದರ ಉಪ ಉತ್ಪತ್ತಿ ಎಂದು ವಿಶ್ಲೇಷಿಸುವ ಅಂಬೇಡ್ಕರ್ ಭಗವದ್ಗೀತೆಯನ್ನು ಈ ಸಮಾನತೆಯ ಮೌಲ್ಯದ ಮೂಸೆಯಲ್ಲಿಟ್ಟು ಪರಿಶೀಲಿಸಿದಾಗ ಅದರ ಅಸಲಿ ಹೂರಣ ಬಯಲಾಗುತ್ತದೆ ಎಂದು ಹೇಳುತ್ತಾರೆ.
ಈ ನ್ಯಾಯ ಮತ್ತು ಸಮಾನತೆಯ ನಿಕಷದಲ್ಲಿಟ್ಟು ಗೀತೆಯನ್ನು ಅಧ್ಯಯನ ಮಾಡಿದರೆ ಅದು ಯಾವುದೇ ಸಾರ್ವತ್ರಿಕವಾದ, ಎಲ್ಲಾ ಕಾಲಕ್ಕೂ ಸಲ್ಲುವ ಮಾನವೀಯ ಬದುಕಿನ ಮೌಲ್ಯಗಳನ್ನು ಹೇಳುವುದಿಲ್ಲ. ಬದಲಿಗೆ ಸಮಾಜದಲ್ಲಿ ಮತ್ತೊಮ್ಮೆ ಮೇಲು ಕೀಳಿನ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಉದೇಶವನ್ನು ಹೊಂದಿದೆಯೆಂದು ಅಂಬೇಡ್ಕರ್ ಸಾಬೀತುಪಡಿಸುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಅದರಲ್ಲಿನ ಪ್ರತೀ ಬೋಧನೆಯೂ ಹಾಗೂ ಸಾಮಾಜಿಕವಾಗಿ ಅನುಸರಿಸಬೇಕೆಂದು ಹೇಳಲಾಗುವ ತತ್ವಗಳು ಇಡೀ ಸಮಾಜಕ್ಕೆ ಉಪಯುಕ್ತವಾಗುವ ಬದಲಿಗೆ ಅದು ದೈವಪುರುಷರೆಂದು ಭಾವಿಸುವ ಬ್ರಾಹ್ಮಣರ ಹಿತವನ್ನು ಮಾತ್ರ ಎತ್ತಿಹಿಡಿಯುತ್ತದೆ.
ಏಕೆಂದರೆ ಮನುಸ್ಮತಿ, ಉಪನಿಷತ್ತುಗಳನ್ನು ಹೊರತು ಪಡಿಸಿದ ವೇದಗಳು, ಅದರಲ್ಲೂ ಪುರುಷ ಸೂಕ್ತ ಇತ್ಯಾದಿಗಳು, ಪುರಾಣಗಳು ಮತ್ತು ಭಗವದ್ಗೀತೆಯಲ್ಲಿ ಹರಿಯುವುದು ಒಂದೇ ಧಾರೆ. ಅದು ವರ್ಣಾಶ್ರಮ ಧರ್ಮದ ಪ್ರತಿಪಾದನೆ.
ಆದ್ದರಿಂದ ಸಾಮಾಜಿಕ ಉಪಯುಕ್ತತೆ ಹಾಗೂ ನ್ಯಾಯ-ಸಮಾನತೆ ಎರಡೂ ಮಾನದಂಡಗಳಿಂದಲೂ ಭಗವದ್ಗೀತೆಯು ಒಂದು ಆಧುನಿಕ ಕಾಲದ ನೀತಿ ಸಂಹಿತೆಯಾಗಲು ನಾಲಾಯಕ್ಕಾಗಿದೆ ಎಂದು ಅಂಬೇಡ್ಕರ್ ಅಭಿಪ್ರಾಯ ಪಡುತ್ತಾರೆ.
ಭಗವದ್ಗೀತೆಯು ಹೇಗೆ ಮನುಸ್ಮತಿಯ ಸಾರಸಂಗ್ರಹವಷ್ಟೇ ಆಗಿದೆ ಎಂದು ಸಾಬೀತು ಪಡಿಸಲು ಅಂಬೇಡ್ಕರ್ ಕೊಟ್ಟಿರುವ ಹತ್ತಾರು ಪುರಾವೆಗಳಲ್ಲಿ ಈ ಕೆಳಗಿನ ಅಂಶಗಳು ಅತ್ಯಂತ ಮುಖ್ಯವಾಗಿವೆ:
ನೀತಿ ಶ್ಲೋಕಗಳೋ? ಅನ್ಯಾಯ-ಅಧರ್ಮದ ಕಾನೂನುಗಳೋ?
1. ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ- ಗುಣಕರ್ಮ ವಿಭಾಗಶಃ
ಚಾತುರ್ವರ್ಣ್ಯವೆಂದು ಹೆಸರಾಗಿರುವ ಗೊತ್ತುಪಾಡನ್ನು (ಅಂದರೆ ಸಮಾಜವನ್ನು ಬ್ರಾಹ್ಮಣ, ಕ್ಷತಿಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು) ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು. ಈ ಚಾತುರ್ವರ್ಣ್ಯವನ್ನೂ ನಾನೇ ಸೃಷ್ಟಿಸಿದವನು. (ಗೀತೆ ಅಧ್ಯಾಯ IV. ಶ್ಲೋಕ 13)
ಈ ಶ್ಲೋಕದ ಅಗತ್ಯ ಹಾಗೂ ಪರಿಣಾಮಗಳ ಬಗ್ಗೆ ಅಂಬೇಡ್ಕರ್ ಹೀಗೆ ವಿವರಿಸುತ್ತಾರೆ:
ಭಗವದ್ಗೀತೆ ಮತ್ತು ಮಹಾಭಾರತಗಳ ಹುಟ್ಟಿನ ಪೂರ್ವದಲ್ಲಿ ಸಮಾಜವು ಅಪ್ಪಿಕೊಂಡಿದ್ದ ಬೌದ್ಧ ಧರ್ಮ ಬ್ರಾಹ್ಮಣ್ಯವನ್ನು ಮತ್ತದರ ಮೇಲು ಕೀಳು ಸಿದ್ಧಾಂತವನ್ನು ಆಧ್ಯಾತ್ಮಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸೋಲಿಸಿ, ಸಮಾನತೆಯ ಆಶಯ ಮತ್ತು ಬದಕನ್ನು ಸೃಷ್ಟಿಸಿತ್ತು.
ಪುಷ್ಯಮಿತ್ರ ಶುಂಗನ ನೇತೃತ್ವದಲ್ಲಿ ಬ್ರಾಹ್ಮಣ್ಯದ ದಿಗ್ವಿಜಯವು ನಡೆದ ಮೇಲೆ ತತ್ವಶಾಸ್ತ್ರದಲ್ಲಿದ್ದ ಬುದ್ಧಪೂರ್ವದ ಜೈಮುನಿಯ ಪೂರ್ವ ಮೀಮಾಂಸೆ ಹಾಗೂ ಸಾಂಖ್ಯ ದರ್ಶನದಲ್ಲಿದ್ದ ಗುಣಾಧಾರಿತ ಸಮಾಜ ವಿಭಜನೆ, ದೇಹ-ಆತ್ಮಗಳ ಪ್ರತ್ಯೇಕತೆಗಳನ್ನು ಭಗದ್ಗೀತೆಯು ಮತ್ತೆ ಬಳಸಿಕೊಂಡು ಮೇಲು ಕೀಳನ್ನು ಪುನರ್ ಸ್ಥಾಪಿಸಿತು ಮತ್ತು ಈ ಕ್ರೂರ ವರ್ಣ ವಿಭಜನೆಗೆ ಬೌದ್ಧ ಪೂರ್ವದಲ್ಲಿ ಇಲ್ಲದಿದ್ದ ದೈವಿಕ ಒಪ್ಪಿಗೆಯನ್ನು ಭಗವದ್ಗೀತೆಯ ಮುಖಾಂತರ ಒದಗಿಸಿ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಯಿತು. ಹಾಗೆಯೇ ಅದರ ಜೊತೆಜೊತೆಗೆ ಕರ್ಮ ಸಿದ್ಧಾಂತ ಹಾಗೂ ಕರ್ಮಾಧಾರಿತ ಪುನರ್ಜನ್ಮ ಸಿದ್ಧಾಂತಗಳನ್ನು ಭಗವದ್ಗೀತೆ ಬಳಸಿಕೊಂಡು ಕರ್ಮಫಲದಂತೆ ಬದುಕು ಎಂಬ ಸಮ್ಮತಿಯನ್ನು ರೂಢಿಸಿತು ಎಂದು ಅಂಬೇಡ್ಕರ್ ತೋರಿಸಿಕೊಡುತ್ತಾರೆ.
2. ಸ್ವಧರ್ಮೇ ನಿಧನಂ ಶ್ರೇಯಃ- ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಸಾಯುವುದೇ ಲೇಸು
ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಫಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ. (ಅಧ್ಯಾಯ-III, ಶ್ಲೋಕ 35 )
ಒಂದೆಡೆ ವರ್ಣಾಶ್ರಮವೆಂದರೆ ಜಾತಿಪದ್ಧತಿಯಂತೆ ಜಡವಲ್ಲ. ಯಾರು ಬೇಕಾದರೂ ಯಾವವರ್ಣಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಆದರೆ ಅದಕ್ಕೆ ಬೇಕಾದಂತಹ ಗುಣವನ್ನು ರೂಢಿಸಿಕೊಳ್ಳಬೇಕಷ್ಟೆ ಎಂದು ಭಗವದ್ಗೀತೆಯನ್ನು ಮತ್ತು ಹಿಂದೂ ಧರ್ಮದ ತತ್ವಶಾಸ್ತ್ರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ತಿಲಕರಿಗೆ ಈ ಶ್ಲೋಕವನ್ನು ಉದ್ಧರಿಸಿ ಅಂಬೇಡ್ಕರ್ ಪಾಟೀ ಸವಾಲು ಹಾಕುತ್ತಾರೆ.
ಯಾರು ಯಾವ ವರ್ಣವನ್ನು ಬೇಕಾದರೂ ಸೇರಬಹುದಾಗಿದ್ದರೆ, ಆಯಾ ಧರ್ಮಗಳಲ್ಲೇ ಇದ್ದು ಸಾಯಬೇಕೆಂದು ಹೇಳುವ ಅಗತ್ಯವೇನಿತ್ತು? ಇಲ್ಲಿ ಧರ್ಮವೆಂದರೆ ಕುಲಧರ್ಮವೇ ಹೊರತು ವಿಶಾಲಾರ್ಥದಲ್ಲಿ ಬಳಸಿಲ್ಲ ಎಂದು ಅಂಬೇಡ್ಕರ್ ಇತರ ಹಲವಾರು ಶ್ಲೋಕಗಳನ್ನು ಉದ್ಧರಿಸಿ ಸಾಬೀತು ಪಡಿಸುತ್ತಾರೆ.
ಏಕೆಂದರೆ ಭಗವದ್ಗೀತೆ ಇದ್ದಕ್ಕಿದ್ದಂತೆ ಶೂನ್ಯದಲ್ಲಿ ಉದ್ಭವಿಸಿದ್ದಲ್ಲ. ಅದು ನಿರ್ದಿಷ್ಟ ಕಾಲಸಂದರ್ಭದಲ್ಲಿ ಹುಟ್ಟಿಕೊಂಡಿತು ಮತ್ತು ಆ ಸಂದರ್ಭ ಬುದ್ಧಕಾಲದಲ್ಲಿ ಸಂಭವಿಸಿದ್ದ ವರ್ಣಸಂಕರಗಳು ಮತ್ತೆ ಆಗದಂತೆ ತಡೆಯು ವುದಕ್ಕೆ ಬ್ರಾಹ್ಮಣ್ಯವು ದಾರಿಗಳನ್ನು ಹುಡುಕುತ್ತಿದ್ದ ಕಾಲ. ಅದಕ್ಕೆ ಬೇಕಾದ ಕಟ್ಟುಪಾಡುಗಳನ್ನು ದೈವಿಕ ನಿರ್ಣಯವೆಂದು ಸ್ಥಾಪಿಸುತ್ತಿದ್ದ ಬ್ರಾಹ್ಮಣ್ಯದ ಪುನರುತ್ಥಾನದ ಕಾಲ ಸಂದರ್ಭವೆಂದು ಅಂಬೇಡ್ಕರ್ ಹೇಳುತ್ತಾರೆ.