ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?: ಮನುವಾದಿಗಳ ವಿಕೃತ ವಾದಗಳು-ಚಾರಿತ್ರಿಕ ಸತ್ಯಗಳು
ಭಾಗ - 3
ಸಂವಿಧಾನ ರಚನಾ ಸಭೆ-ಎಷ್ಟು ಪ್ರಾತಿನಿಧಿಕ?
ಪೂನಾ ಒಪ್ಪಂದದ ನಂತರದಲ್ಲಿ ಮೇಲ್ಜಾತಿ ಹಿಂದೂಗಳ ಆಧಿಪತ್ಯದಲ್ಲಿ ಭಾರತವು ಸ್ವಾತಂತ್ರ್ಯ ಪಡೆದುಕೊಂಡರೆ ಅಂಥಾ ಭಾರತದಲ್ಲಿ ದಲಿತ-ದಮನಿತರ ಹಕ್ಕುಗಳನ್ನು ಪರಿರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅಂಬೇಡ್ಕರ್ ತೀರಾ ಕಳವಳವನ್ನು ಹೊಂದಿದ್ದರು. ಆದ್ದರಿಂದಲೇ ಪ್ರಾರಂಭದಲ್ಲಿ ಸವರ್ಣೀಯ ಮತ್ತು ಊಳಿಗಮಾನ್ಯ ಹಿಂದೂಗಳ ಹೆಚ್ಚಾಗಿರಬಹುದಾದ ಸಂವಿಧಾನ ರಚನಾ ಸಭೆಯೊಂದರ ಅಗತ್ಯವೇನು ಎಂಬ ಪ್ರಶ್ನೆಯೂ ಅವರನ್ನು ಕಾಡಿತ್ತು. ಹಾಗಾಗಿಯೇ ಅವರು ಸಂವಿಧಾನ ರಚನಾ ಸಭೆಯೊಂದು ಆಗುವುದಾದರೆ ಅದರಲ್ಲಿ ಎಲ್ಲಾ ಹಿಂದೂ ಬಹುಸಂಖ್ಯಾತರ ಪ್ರಮಾಣ ಶೇ.40ನ್ನು ಮೀರದಂತಿರಬೇಕೆಂದೂ ಸಲಹೆ ಮಾಡಿದ್ದರು. ಅಂಬೇಡ್ಕರ್ ಅವರು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಅನ್ನು ಉದ್ದೇಶಿಸಿ ಮಾಡಿದ ‘‘Communal Deadlock - And a Way to Solve It’’ ಎಂಬ ಭಾಷಣದಲ್ಲಿ ತಮ್ಮ ಕಲ್ಪನೆಯ ಸಂವಿಧಾನ ರಚನಾ ಸಭೆಯ ಸಂಯೋಜನೆಯನ್ನು ಅಂಬೇಡ್ಕರ್ ಮುಂದಿಟ್ಟಿದ್ದರು.
ಅದೇನೇ ಇರಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯ ಪಾತ್ರಧಾರಿ ಮತ್ತು ಪ್ರಧಾನ ಫಲಾನುಭವಿ ವರ್ಗಗಳು ಮತ್ತು ಸಮುದಾಯಗಳು ಮಾಡಿಕೊಂಡ ಒಪ್ಪಂದದಂತೆ ಹಾಗೂ ಬ್ರಿಟಿಷರ ಸಮ್ಮತಿಯೊಂದಿಗೆ 1946ರಲ್ಲಿ ಭಾರತದ ಸಂವಿಧಾನ ರಚನಾ ಸಭೆ ರೂಪುಗೊಂಡಿತು.
1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಜಾರಿಗೆ ಬಂದು 1937ರಲ್ಲಿ ನಡೆದ ಪ್ರಾಂತೀಯ ಶಾಸನ ಸಭಾ ಚುನಾವಣೆಗಳ ಕಾಲದಿಂದಲೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದವರನ್ನು ಮತ್ತು ಪದವೀಧರರನ್ನು ಮಾತ್ರ ಜವಾಬ್ದಾರಿಯುತ ಪ್ರಜೆಗಳೆಂದು ಭಾವಿಸಲಾಗುತ್ತಿತ್ತು. ಅಂದರೆ ಭಾರತದ ಶೇ.17ಕ್ಕಿಂತ ಕಡಿಮೆ ಮತದಾರರು ಮಾತ್ರ ಪ್ರಾಂತೀಯ ಸಭೆಯನ್ನು ಆಯ್ಕೆ ಮಾಡುತ್ತಿದ್ದರು. ಅವರಲ್ಲಿ ಶೇ.95 ಭಾಗ ಮೇಲ್ವರ್ಗ ಮತ್ತು ಸವರ್ಣೀಯ ಮೇಲ್ಜಾತಿಗಳೇ ಆಗಿರುತ್ತಿದ್ದರು ಎಂಬುದು ಅದರ ವರ್ಗ ಹಾಗೂ ಜಾತಿ ಆಯಾಮ.
ಅದೇ ಆಧಾರದಲ್ಲಿ 1946ರಲ್ಲಿ ಪ್ರಾಂತೀಯ ಹಾಗೂ ಕೇಂದ್ರೀಯ ಶಾಸನ ಸಭೆಗಳಿಗೆ ಚುನಾವಣೆ ನಡೆಯಿತು. ಆ ಸದಸ್ಯರೇ ಭಾವೀ ಭಾರತದ ಸಂವಿಧಾನವನ್ನು ರಚಿಸುವ 292 ಸದಸ್ಯರನ್ನು ಆಯ್ಕೆ ಮಾಡಿದರು. ಇದರ ಜೊತೆಗೆ 93 ಸದಸ್ಯರನ್ನು ರಾಜ ಸಂಸ್ಥಾನಗಳು ನೇಮಕ ಮಾಡಿದವು. ಆದರೆ ದೇಶ ವಿಭಜನೆಯಾದ ಮೇಲೆ ಮುಸ್ಲಿಮ್ ಲೀಗ್ನ ಸದಸ್ಯರು ಇಲ್ಲವಾಗಿ 299 ಸದಸ್ಯರ ಭಾರತ ಸಂವಿಧಾನ ಸಭೆ ರೂಪುಗೊಂಡಿತು. ಇದರಲ್ಲಿ 229 ಸೀಮಿತ ಮತದಾನದ ಮೂಲಕ ಆಯ್ಕೆಯಾದ ಸದಸ್ಯರು, ಉಳಿದ 70 ಜನ ರಾಜಸಂಸ್ಥಾನಗಳು ನೇಮಕ ಮಾಡಿದ ಪ್ರತಿನಿಧಿಗಳು!
ಬಲಾಢ್ಯರ ಬಹುಮತದಲ್ಲಿ ನಲುಗಿದ ದಮನಿತರ ಪ್ರಾತಿನಿಧ್ಯ
ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸಂವಿಧಾನವು ಒಪ್ಪಿಕೊಂಡ ಪ್ರಾತಿನಿಧಿಕ ಪ್ರಜಾಪ್ರಭುತ್ವವು ದಲಿತ ದಮನಿತರನ್ನು ಕೇವಲ ಸಂಖ್ಯಾತ್ಮಕವಾಗಿ ಪ್ರತಿನಿಧಿಸದೆ ಅವರ ನೈಜ ಆಸಕ್ತಿಗಳನ್ನು ಪ್ರತಿನಿಧಿಸುವಂತಾಗಬೇಕೆಂಬುದು ಅಂಬೇಡ್ಕರ್ ಅವರ ನಿರಂತರ ಹೋರಾಟವಾಗಿತ್ತು. ಸವರ್ಣೀಯರ ಹಾಗೂ ಬಲಾಢ್ಯ ಜಾತಿಗಳ ಹಂಗಿಲ್ಲದಂತೆ ಆಯ್ಕೆಯಾಗುವಂತಾದಾಗ ಮಾತ್ರ ದಲಿತ ಪ್ರತಿನಿಧಿಗಳು ನಿಜವಾಗಿ ದಲಿತರನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆಂದು ಅರ್ಥಮಾಡಿಕೊಂಡಿದ್ದ ಅಂಬೇಡ್ಕರ್ ಅವರು 1929-32ರ ದುಂಡು ಮೇಜಿನ ಪರಿಷತ್ತಿನಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಆಗ್ರಹಿಸಿದ್ದರು. ಬ್ರಿಟಿಷರು ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದರು. ಆದರೆ ಗಾಂಧಿಯವರು ಸತ್ಯಾಗ್ರಹ ಮಾಡಿ ಹೇರಿದ ಪೂನಾ ಒಪ್ಪಂದವಾಗಿ ದಲಿತರು ಸಹ ಹಿಂದೂ ವಿಭಾಗದೊಳಗೆ ಮೀಸಲಾತಿ ಪಡೆಯುವಂತಾಯಿತು.
ಈ ಆಧಾರದಲ್ಲಿ 1937ರಲ್ಲಿ ಮತ್ತು 1946ರಲ್ಲಿ ನಡೆದ ಪ್ರಾಂತಿಯ ಮತ್ತು ಕೇಂದ್ರೀಯ ಶಾಸನಾ ಸಭಾ ಚುನಾವಣೆಗಳಲ್ಲಿ ಮೊದಲ ಸುತ್ತಿನಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ದಲಿತ ಮತದಾರರು ಮಾತ್ರ ತಮ್ಮ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಎರಡನೇ ಸುತ್ತಿನಲ್ಲಿ ಆ ಕ್ಷೇತ್ರದ ಎಲ್ಲಾ ಮತದಾರರೂ ಒಟ್ಟು ಸೇರಿ ಆ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಪದ್ಧತಿ ಜಾರಿಯಾಯಿತು. ಆದರೆ ಅದರ ಫಲಿತಾಂಶಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಪ್ರತೀ ಮೀಸಲಾತಿ ಕ್ಷೇತ್ರದಲ್ಲಿ ಹೇಗೆ ಮೊದಲ ಸುತ್ತಿನಲ್ಲಿ ದಲಿತರು ಮಾತ್ರ ಮತ ಚಲಾಯಿಸಿದಾಗ ಮೊದಲ ಸ್ಥಾನ ಪಡೆದುಕೊಂಡ ದಲಿತ ಅಭ್ಯರ್ಥಿಯು, ಎರಡನೇ ಸುತ್ತಿನಲ್ಲಿ ಇಡೀ ಕ್ಷೇತ್ರದ ದಲಿತೇತರ ಮತದಾರರೂ ಒಟ್ಟು ಸೇರಿ ಮತ ಚಲಾಯಿಸಿದಾಗ ಕೊನೆಯ ಸ್ಥಾನಕ್ಕಿಳಿದು ಸೋತಿರುವುದನ್ನು ಬಯಲಿಗೆಳೆದರು.
ಹೀಗಾಗಿ ಪ್ರಜಾ ಪ್ರತಿನಿಧಿಗಳ ಚುನಾವಣೆಯಲ್ಲಿನ ಈ ಗಂಭೀರ ಲೋಪವನ್ನು ಬಗೆಹರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರು ಬಹಳವಾಗಿ ಪ್ರಯತ್ನಿಸಿದರು.
ಸಂವಿಧಾನ ರಚನಾ ಸಭೆಯಲ್ಲಿ ಏಳು ಉಪಸಮಿತಿಗಳಿದ್ದು ಅದರಲ್ಲಿ ಒಂದು ಮೈನಾರಿಟಿ ಹಕ್ಕುಗಳ ಸಮಿತಿ ಈ ವಿಷಯಕ್ಕೆ ಸಂಬಂಧಪಟ್ಟ ಸಮಿತಿಯಾಗಿತ್ತು. ಅದರಲ್ಲಿ 31 ಜನ ಸದಸ್ಯರಿದ್ದು ವಲ್ಲಭಭಾಯಿ ಪಟೇಲರು ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಅಂಬೇಡ್ಕರ್ ಅವರು ಒಂದು ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ದಲಿತ ಅಭ್ಯರ್ಥಿಯು ಶೇ.50ರಷ್ಟು ದಲಿತರ ಮತಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಪ್ರಸ್ತಾವವನ್ನು ಮುಂದಿಟ್ಟರು. ಆಗ ದಲಿತ ಪ್ರತಿನಿಧಿ ಬಹುಸಂಖ್ಯಾತ ಸವರ್ಣೀಯರ ಕೈಗೊಂಬೆಯಾಗದೆ ಕಡ್ಡಾಯವಾಗಿ ದಲಿತ ಮತದಾರರನ್ನು ಸಹ ಅನುಸರಿಸಲೇ ಬೇಕಾಗುತ್ತದೆಂಬುದು ಈ ಪ್ರಸ್ತಾವದ ಹಿಂದಿನ ಆಶಯವಾಗಿತ್ತು. ಆದರೆ ಈ ಪ್ರಸ್ತಾವವನ್ನು 31 ಸದಸ್ಯರಲ್ಲಿ 28 ಸದಸ್ಯರು ವಿರೋಧಿಸಿದ್ದರಿಂದ ಬಿದ್ದುಹೋಯಿತು.
ಆಗ ಅದಕ್ಕೆ ಬದಲಾಗಿ ಸಾರ್ವತ್ರಿಕ ಕ್ಷೇತ್ರದಲ್ಲಿ ಗೆಲ್ಲುವ ದಲಿತೇತರ ಅಭ್ಯರ್ಥಿ ಕನಿಷ್ಠ ಪಕ್ಷ ಶೇ.35ರಷ್ಟು ದಲಿತ ವೋಟುಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಮಾಡಬೇಕೆಂಬ ಆಂಬೇಡ್ಕರ್ ಅವರ ಪ್ರಸ್ತಾವವನ್ನು ಅವರ ಅನುಪಸ್ಥಿತಿಯಲ್ಲಿ ನಾಗಪ್ಪ ಎಂಬ ಸದಸ್ಯರು ಮುಂದಿಟ್ಟರು. ಆದರೆ ಈ ಪ್ರಸ್ತಾವದಿಂದ ವಲ್ಲಭ ಭಾಯಿ ಪಟೇಲರು ಕೆಂಡಾಮಂಡಲವಾದರು. ಈ ಪ್ರಸ್ತಾವವು ಗಾಂಧಿಯವರು ದಲಿತರಿಗೆ ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳದೆ ದಲಿತರು ಗಾಂಧಿಗೆ ಮಾಡುತ್ತಿರುವ ದ್ರೋಹವೆಂದು ಹೀಗೆಳೆದು ಪ್ರಸ್ತಾವವನ್ನು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಸೋಲಿಸಿದರು. (ಹೆಚ್ಚಿನ ವಿವರಗಳಿಗೆ ಆಸಕ್ತರು ರಾಜಕೀಯ ಶಾಸ್ತ್ರಜ್ಞರಾದ ವಿದ್ವಾಂಸ ಕ್ರಿಸ್ಟೋಫೆ ಜಾಫರ್ಲೆ ಅವರು ಬರೆದಿರುವ: ‘Conatining The Lower Castes: The Constituent Assembly and The Reservation Policy- Christophe Jaffrelot’ ಎಂಬ ಪ್ರಬಂಧವನ್ನು ಪರಿಶೀಲಿಸಬಹುದು)
ಇಂದು ದಲಿತ ಪ್ರಾತಿನಿಧ್ಯದ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಲೇ ಇದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರವನ್ನು ತರಲು ಕೀಲಕವಾದ ರಾಜಕೀಯ ಪ್ರಜಾತಂತ್ರವೇ ಹೀಗೆ ನಿಸ್ಸಾರ ಅಥವಾ ತಿರುಚಲ್ಪಟ್ಟ ಪ್ರಜಾತಂತ್ರವಾಗಿಬಿಟ್ಟಿರುವುದೂ ಸಹ ನಮ್ಮ ಇಂದಿನ ದುರವಸ್ಥೆಗೆ ಕಾರಣವಾಗಿದೆ.
ಸಮಾನತೆಯಿಲ್ಲದ ಸ್ವಾತಂತ್ರ್ಯದ ಸಮಸ್ಯೆ
ಅಂಬೇಡ್ಕರ್ ಅವರು 1947ರಲ್ಲಿ ಸಂವಿಧಾನ ರಚನೆ ಸಭೆಗೆ ಅರ್ಪಿಸಲು ಬರೆದ ಮನವಿ ಪತ್ರದ ರೂಪದ ಪರ್ಯಾಯ ಸಂವಿಧಾನವೇ ಆದ ‘ಸ್ಟೇಟ್ ಆಂಡ್ ಮೈನಾರಿಟೀಸ್’ ಎಂಬ ಪುಸ್ತಕದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಒಂದನ್ನು ಬಿಟ್ಟು ಮತ್ತೊಂದಿರದ ತ್ರಿವಳಿಗಳಾಗಿವೆ ಎಂಬುದನ್ನು ವಿವರಿಸುತ್ತಾರೆ. ನಮ್ಮ ಸಂವಿಧಾನವು ಸಹ ಆ ಮೂರನ್ನೂ ಏಕಕಾಲದಲ್ಲಿ ಸಾಧಿಸಬೇಕೆಂದು ಅಂಬೇಡ್ಕರ್ ಆಶಿಸಿದ್ದರು. ಸಮಾನತೆಯಿಲ್ಲದ ಸ್ವಾತಂತ್ರ್ಯ ಕೇವಲ ಉಳ್ಳವರಿಗೆ ದಕ್ಕುವ ಸ್ವಾತಂತ್ರ್ಯವಾಗಿರುತ್ತವೆ. ಮಾತ್ರವಲ್ಲ ಈವರೆಗಿನ ಎಲ್ಲಾ ಪ್ರಜಾತಂತ್ರಗಳು ಸ್ವಾತಂತ್ರ್ಯವನ್ನು ಮಾತ್ರ ನೀಡಿವೆಯೇ ಹೊರತು ಸಮಾನತೆಯನ್ನಲ್ಲ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು.
ಆದ್ದರಿಂದ ನಮ್ಮ ದೇಶದ ಸಂವಿಧಾನ ಹಾಗೆ ಮಾಡದೆ ಸಮಾನತೆಯನ್ನು ಮೂಲಭೂತ ಹಕ್ಕನ್ನಾಗಿಸಬೇಕೆಂದು ಬಯಸಿದ್ದರು. ಆ ಕಾರಣಕ್ಕೆ ದೇಶದ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕಿರುವುದು ಅಗತ್ಯ ಎಂದೂ ಪ್ರತಿಪಾದಿಸಿದ್ದರು. ಭೂಮಿಯನ್ನು ರಾಷ್ಟ್ರೀಕರಣ ಮಾಡಿ ಸಹಕಾರಿ ಕೃಷಿಯನ್ನು ಕಡ್ಡಾಯ ಮಾಡಿದರೆ ಬಡ ಜನರ ಬೆವರು ಬೆಸೆದು ಜಾತಿ ಮತ್ತು ವರ್ಗದ ಗೋಡೆಗಳು ಕುಸಿಯಬಹುದೆಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ನೀಡಿದ್ದರು ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಬಹುಸಂಖ್ಯಾತರಿಗೆ ಶೇ. 40ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಸರಕಾರದಲ್ಲಾಗಲೀ, ಶಾಸನ ಸಭೆಗಳಲ್ಲಾಗಲೀ ಇರಕೂಡದೆಂಬ ಕ್ರಾಂತಿಕಾರಿ ಪರಿಹಾರವನ್ನು ನೀಡಿದ್ದರು.
ಆದರೆ 1950ರಲ್ಲಿ ಜಾರಿಯಾದ ಸಂವಿಧಾನದಲ್ಲಿ ಸಮಾನತೆ ಮೂಲಭೂತ ಹಕ್ಕೂ ಆಗಲಿಲ್ಲ. ಸಂಪತ್ತುಗಳ ರಾಷ್ಟ್ರೀಕರಣವೂ ಆಗಲಿಲ್ಲ. ಬದಲಿಗೆ ಭಾರತದ ಪ್ರಭುತ್ವವು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತಹ ನೀತಿಯನ್ನು ಜಾರಿಗೆ ತರಬೇಕೆಂಬ ಹಾಗೂ ಎಲ್ಲರಿಗೂ ಘನತೆಯಿಂದ ಬದುಕಲು ಬೇಕಾದಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೆಂಬ ವಿಧಿಗಳು ಪ್ರಭುತ್ವ ನಿರ್ದೇಶನಾ ತತ್ವಗಳಾಗಿ ಇಂದಿನ ಸಂವಿಧಾನದಲ್ಲಿ ಸೇರಿಕೊಂಡಿವೆ.
ಆದರೆ ಸಂವಿಧಾನದ ಆರ್ಟಿಕಲ್ 37 ಸ್ಪಷ್ಟಪಡಿಸುವಂತೆ ಪ್ರಭುತ್ವ ನಿರ್ದೇಶನಾ ತತ್ವಗಳು ಸಂವಿಧಾನದ ಆಶಯಗಳೇ ವಿನಾ ಮೂಲಭೂತ ಹಕ್ಕುಗಳಲ್ಲ. ಅದನ್ನು ಸರಕಾರಗಳು ಜಾರಿ ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಹೀಗಾಗಿ ಭಾರತದ ಸಂವಿಧಾನ ಸಭೆ ಅಂಬೇಡ್ಕರ್ ಅವರ ಮೂಲ ಆಶಯಕ್ಕೆ ಭಂಗ ತಂದು ಅದನ್ನು ಭಾರತದ ಸಂವಿಧಾನದಲ್ಲಿ ಕೇವಲ ಆಲಂಕಾರಿಕವಾಗಿ ಸೇರಿಸಿಕೊಂಡಿದೆ.
ಡಾ. ಅಂಬೇಡ್ಕರ್ ಅವರ ಕ್ರಾಂತಿಕಾರಿ ಸರ್ಜರಿಯಿಲ್ಲದೆ ಈ ದೇಶ ಉಳಿಯದು
ಅದೇನೇ ಇರಲಿ. 1950ರ ಜನವರಿ 26ರಂದು ಭಾರತವು ಒಂದು ಗಣರಾಜ್ಯವಾಗಿದೆ. ಅಷ್ಟರಮಟ್ಟಿಗೆ ಅದು ಭಾರತದ ನಾಗರಿಕತೆಯ ಇತಿಹಾಸದಲ್ಲಿ ಒಂದು ದೊಡ್ಡ ದಾಪುಗಾಲು. ಅಷ್ಟರ ಮಟ್ಟಿಗಾದರೂ ಸಾಧ್ಯವಾಗಿದ್ದು ಅಂಬೇಡ್ಕರ್ ಎಂಬ ಬೆಳಕಿನಿಂದ ಹಾಗೂ ಭಾರತದಲ್ಲಿ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದಮನಿತ ಜನತೆ ಹೋರಾಟಗಳಿಂದ ಪಡೆದುಕೊಂಡ ಜಾಗೃತಿಯಿಂದ.
ಇಂದು ಅದನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಅದಕ್ಕೆ ಕಾರಣ ರಾಜಕೀಯವಾಗಿ ಸಮಾನತೆ ಪಡೆದಿದ್ದರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆಗಳು ಹೆಚ್ಚುತ್ತಲೇ ಇದೆ. ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವ ಬ್ರಾಹ್ಮಣೀಯ ಜಾತಿ ವ್ಯವಸ್ಥೆ, ಆರ್ಥಿಕವಾಗಿ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಕಳೆದ 75 ವರ್ಷಗಳಲ್ಲಿ, ಅದರಲ್ಲೂ ಮೋದಿ ಸರ್ವಾಧಿಕಾರದ ಕಳೆದ ಎಂಟು ವರ್ಷಗಳಲ್ಲಿ ಇನ್ನಷ್ಟು ಬಲಗೊಂಡಿದೆ.
ಈ ರಾಜಕೀಯ ಸಮಾನತೆ ಮತ್ತು ರಾಜಕೀಯ ವ್ಯವಸ್ಥೆಯು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆಯನ್ನು ಮತ್ತು ಷರತ್ತನ್ನು ನಮ್ಮ ಸಂವಿಧಾನ ವಿಧಿಸಿರಲಿಲ್ಲ. ಅಂಬೇಡ್ಕರ್ ಅವರ ಈ ಆಶಯಗಳನ್ನು ಆಗಿನ ಸಂವಿಧಾನ ಸಭೆ ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಅದೇ ರಾಜಕೀಯ ವ್ಯವಸ್ಥೆಯನ್ನು ಬಳಸಿಕೊಂಡು ಬ್ರಾಹ್ಮಣ್ಯ ಹಾಗೂ ಬಂಡವಾಳಿಗರು ಗಟ್ಟಿಗೊಂಡು ಇಂದು ಫ್ಯಾಶಿಸ್ಟ್ ಸ್ವರೂಪವನ್ನು ಪಡೆದುಕೊಂಡಿದೆ.
ರೂಪಕಾರ್ಥದಲ್ಲಿ ಹೇಳುವುದಾದರೆ ಇಂದು ಸಂವಿಧಾನದ ಒಳಗಿರುವ ಅಂಬೇಡ್ಕರ್ ಮೇಲೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಂಡವಾಳಶಾಹಿಗಳು ಮತ್ತು ಹಿಂದುತ್ವವಾದಿ ಬ್ರಾಹ್ಮಣಶಾಹಿಗಳು ಮಾರಣಾಂತಿಕ ದಾಳಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ ತಾವೇ ನಿಜವಾದ ಸಂವಿಧಾನ ಮತ್ತು ಅಂಬೇಡ್ಕರ್ ಅನುಯಾಯಿಗಳೆಂದು ಧೃತರಾಷ್ಟ್ರ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ. ಎರಡರ ಉದ್ದೇಶವೂ ಅಂಬೇಡ್ಕರ್ ಆಶಯಗಳನ್ನು ಕೊಂದುಹಾಕುವುದೇ ಆಗಿದೆ. ಅದಕ್ಕಾಗಿ ಸಂವಿಧಾನದ ಮೇಲೆ ಒಳಗಿಂದಲೂ ಹೊರಗಿಂದಲೂ ಇಬ್ಬಗೆಯ ದಾಳಿ ನಡೆಸುತ್ತಿದ್ದಾರೆ.
ಹೀಗಾಗಿ ಇವತ್ತಿನ ಸಂದರ್ಭದಲ್ಲಿ ಸಂವಿಧಾನವು ಹೊರಗಿಟ್ಟ ಅಂಬೇಡ್ಕರ್ ಅನ್ನು ಸಂವಿಧಾನದೊಳಗೆ ತಂದುಕೊಳ್ಳದೆ ಸಂವಿಧಾನದೊಳಗಿರುವ ಅಂಬೇಡ್ಕರ್ ಅನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದು.