×
Ad

ತುಮಕೂರು ಪಿಎಸ್‌ಐ ಲೋಕಾಯುಕ್ತ ಬಲೆಗೆ

Update: 2026-02-01 00:10 IST

ತುಮಕೂರು : ಠಾಣೆಯ ವಶದಲ್ಲಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.

ವಾಹನ ಬಿಡುಗಡೆಗೆ ಒಟ್ಟು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಚೇತನ್, ಮೊದಲ ಹಂತವಾಗಿ 40 ಸಾವಿರ ರೂ. ಪಡೆಯಲು ಸೂಚಿಸಿದ್ದರೆಂದು ಆರೋಪಿಸಲಾಗಿದೆ. ಈ ಹಣವನ್ನು ನೇರವಾಗಿ ತಮ್ಮ ಕೈಗೆ ನೀಡುವ ಬದಲು, ಕ್ಯಾತ್ಸಂದ್ರ ಸಮೀಪದ ಹೋಟೆಲ್‌ನ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹನ ಮಾಲಕರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಪಿಎಸ್‌ಐ ಚೇತನ್ ಅವರ ಲಂಚದ ಬೇಡಿಕೆಯಿಂದ ಬೇಸತ್ತ ವಾಹನ ಮಾಲಕರು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಯೋಜಿತ ಕಾರ್ಯಾಚರಣೆ ರೂಪಿಸಿದ್ದರು.

ಶುಕ್ರವಾರ ರಾತ್ರಿ ಕ್ಯಾತ್ಸಂದ್ರದ ಹೋಟೆಲ್‌ನಲ್ಲಿ ಹೋಟೆಲ್ ಸಿಬ್ಬಂದಿ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನಡೆಸಿದ ವಿಚಾರಣೆಯಲ್ಲಿ, ಹಣ ಪಿಎಸ್‌ಐ ಚೇತನ್ ಸೂಚನೆಯ ಮೇರೆಗೆ ಪಡೆಯಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ಮಾಹಿತಿಯ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಮುಂದಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News