ಸರಕಾರಿ ಆದೇಶಗಳಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ: ಡಾ.ಪುರುಷೋತ್ತಮ ಬಿಳಿಮಲೆ
ತುಮಕೂರು,ಜ.02: ಕನ್ನಡವನ್ನು ಕೇವಲ ಸರಕಾರಿ ಆದೇಶಗಳ ಮೂಲಕ ಉಳಿಸಲು ಸಾಧ್ಯವಿಲ್ಲ. ಅದು ಹೃದಯದ ಭಾಷೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಬಳಕೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,ಕನ್ನಡ ಎಂದರೆ ಕೇವಲ ಭಾಷೆ ಅಲ್ಲ ಅದು ಒಂದು ಸಂಸ್ಕೃತಿ. ಕೇವಲ ಬಲವಂತವಾಗಿ ಆದೇಶ ಅಥವಾ ಅನುಷ್ಠಾನದ ಒತ್ತಾಯದಿಂದ ಉಳಿಸಬಹುದೆಂಬುದು ಸುಳ್ಳು. ಕನ್ನಡ ಹೃದಯದ ಭಾಷೆಯಾದಲ್ಲಿ ಮಾತ್ರ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂವಹನ ನಡೆಸಲು ಭಾಷೆ ಅತ್ಯುತ್ತಮ ಸೇತುವೆಯಾಗಿ ಕೆಲಸ ಮಾಡಬೇಕು. ಆಡಳಿತದಲ್ಲಿ ಕನ್ನಡದ ಅನುಷ್ಠಾನವು ಕೇವಲ ಸಾಂಪ್ರದಾಯಿಕ ಕೆಲಸವಲ್ಲ, ಅದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವಾಗಿದೆ. ಸ್ವಭಾಷೆಯನ್ನು ಗೌರವಿಸುತ್ತಲೇ ಅನ್ಯ ಭಾಷೆಗಳನ್ನು ಕಲಿಯುವುದು ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದ ಅವರು, 1956ರ ಏಕೀಕರಣದ ನಂತರ ಕನ್ನಡ ಪರವಾಗಿ 3ಸಾವಿರಕ್ಕೂ ಹೆಚ್ಚು ಸರಕಾರಿ ಆದೇಶಗಳು ಹೊರಬಿದ್ದಿವೆ. ಆದರೆ, ವಾಸ್ತವದಲ್ಲಿ ಶೇ.10ರಷ್ಟು ಆದೇಶಗಳೂ ಸರಿಯಾಗಿ ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ವರದಿಯೊಂದನ್ನು ಉಲ್ಲೇಖಿಸಿದ ಅವರು, 2001ರ ಜನಗಣತಿಯಲ್ಲಿದ್ದ ಸುಮಾರು 254 ಭಾಷೆಗಳು ಇಂದು ಅಸ್ತಿತ್ವ ಕಳೆದುಕೊಂಡಿವೆ. ಕನ್ನಡಕ್ಕೂ ಇಂತಹ ಸ್ಥಿತಿ ಬರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡ ಅನುಷ್ಠಾನದಲ್ಲಿ ವಿಫಲರಾಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ, ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಭಾಷೆ ಅನುಷ್ಠಾನದಲ್ಲಿ ಲೋಪವೆಸಗುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕಾನೂನುಗಳಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು ಸದ್ಯದಲ್ಲೇ ಕಾನೂನು ಜಾರಿಗೊಳ್ಳಲಿದೆ ಎಂದರು.
ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹಾ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತುಮಕೂರು ಉಪ ವಿಭಾಗಾಧಿಕಾರಿ ನಹೀದಾ , ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.