ಉಡುಪಿ: 50 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ವ್ಯಕ್ತಿಯ ರಕ್ಷಣೆ
ಉಡುಪಿ,ಮೇ.1: ರಾತ್ರಿ ಹೊತ್ತಿನಲ್ಲಿ ಐವತ್ತು ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಮಣಿಪಾಲ ಪೋಲಿಸ್ ಠಾಣೆಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಗದಗ ಮೂಲದ ಲಕ್ಷ್ಮಣ್ ಬಸವರಾಜ್ ಕೊಷ್ಟಿ ಎಂದು ಗುರುತಿಸಲಾಗಿದೆ. 80 ಬಡಗುಬೆಟ್ಟು ಶಾಂತಿನಗರದಲ್ಲಿ ಸಮಾಜ ಸೇವಕ ನಿತ್ಯಾನಂದ ಮನೆಯ ಹಿಂಭಾಗದ ರಸ್ತೆಯಲ್ಲಿ ಘಟನೆ ನಡೆದಿದೆ. ಲಕ್ಷ್ಮಣ್ ಅವರು ಟ್ಯಾಂಕ್ ಮೇಲೆ ಹತ್ತಿರುವುದು ಆತ್ಮಹತ್ಯೆಗೈಯ್ಯಲೋ, ಅಥವಾ ಮಾನಸಿಕ ಖಿನ್ನತೆಯಿಂದ ಹತ್ತಿರುವುದೋ ಎಂದು ಸ್ವಷ್ಟವಾಗಿ ತಿಳಿದುಬಂದಿಲ್ಲ.
ಸಾರ್ವಜನಿಕರು ನೀಡಿದ ದೂರಿನಂತೆ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಮಣಿಪಾಲ ಪೋಲಿಸರು ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರಾದ ಆರ್ರ್ಮುಗಂ, ಹರೀಶ್ ಶೆಟ್ಟಿಯವರು ಏಣಿ ಬಳಸಿಕೊಂಡು ಟ್ಯಾಂಕ್ ಮೇಲೆ ಹತ್ತಿ ವ್ಯಕ್ತಿಯ ಮನವೊಲಿಸಿ ಕೆಳಗೆ ಕರೆತರಲು ಅಗ್ನಿಶಾಮಕ ದಳದವರಿಗೆ ಸಾಥ್ ನೀಡಿದ್ದಾರೆ.
ಸ್ಥಳದಲ್ಲಿ ನೂರಾರು ಸಾರ್ವಜನಿಕರು ಕಾರ್ಯಚರಣೆ ಕಾಣಲು ಸೇರಿದ್ದರು. ಮಣಿಪಾಲ ಪೋಲಿಸ್ ಠಾಣೆಯ ಎಎಸ್ಐ ರಾಮಪ್ರಭು, ಶಂಕರ್, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಾರ್ಯಚರಣೆಗೆ ನೆರವಾದರು. ವಿಚಾರಣೆ ಪ್ರಗತಿಯಲ್ಲಿದೆ.