ಕೊಲ್ಲೂರು ದೇವಳದಲ್ಲಿ ಮಹಾನವರಾತ್ರಿ ಉತ್ಸವಕ್ಕೆ ಚಾಲನೆ
ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯಲಿರುವ ಮಹಾನವರಾತ್ರಿ ಮಹೋತ್ಸವಕ್ಕೆ ದೇವಳದ ತಂತ್ರಿ, ಅರ್ಚಕ ನಿತ್ಯಾನಂದ ಅಡಿಗ ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ಚಾಲನೆ ನೀಡಿದರು. ಬಳಿಕ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು.
ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ಸೇವಾ-ಸೌಲಭ್ಯಗಳಲ್ಲಿ ಕೊರತೆಯಾಗ ದಂತೆ ದೇವಸ್ಥಾನ ಆಡಳಿತೆ ಸಾಕಷ್ಟು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.
ನವರಾತ್ರಿಯ ಅಂಗವಾಗಿ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ನವರಾತ್ರಿಯ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿದೆ. ಅ.01 ರಂದು ಮಹಾನವಮಿಯ ಪ್ರಯುಕ್ತ ಬೆಳಿಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ ಗಂಟೆ 1.30ಕ್ಕೆ ರಥೋತ್ಸವ ಜರುಗಲಿದೆ. ಅ.2ರಂದು ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ಶ್ರೀಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ.
ನವರಾತ್ರಿಯ ಪ್ರಾರಂಭದ ದಿನದಿಂದ 8ನೇ ದಿನದವರೆಗೂ ಮೂಕಾಂಬಿಕಾ ದೇವಿಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮುಹಿಷಾಸುರಮರ್ದೀನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾ ದುರ್ಗಾ, ಚಂಡಮುಂಡ ದುರ್ಗಾ, ರಕ್ತಬೀಜಾ ದುರ್ಗಾ, ನಿಶುಂಭಾ ದುರ್ಗಾ ಪೂಜೆಗಳು ನಡೆಯುತ್ತದೆ. ಮೊದಲ ದಿನದಿಂದ 9 ನೇ ದಿನದವರೆಗೂ ಪ್ರತಿದಿನ ಸಂಜೆ ಸುಹಾಸಿನಿ ಪೂಜೆ ನಡೆಯುತ್ತದೆ. 9 ನೇ ದಿನ ಶತರುದ್ರಾಭೀಷೇಕ, ಕಲ್ಪೋಕ್ತ ಪೂಜೆ, ಶುಂಭಾ ದುರ್ಗಾ ಪೂಜೆಗಳ ಜತೆಯಲ್ಲಿ ಚಂಡಿಕಾ ಯಾಗ ನಡೆಯುತ್ತದೆ.
ಉತ್ಸವದ ಅಂಗವಾಗಿ ಪ್ರತಿ ದಿನ ಅಪರಾಹ್ನ 3 ಗಂಟೆಯಿಂದ ರಾತ್ರಿ 11.30ರ ವರೆಗೆ ಸ್ವರ್ಣಮುಖಿ ರಂಗಮಂಟಪ ದಲ್ಲಿ ದೇಶದ ವಿವಿಧ ಭಾಗದಿಂದ ಆಗಮಿಸುವ ಕಲಾ ತಂಡಗಳಿಂದ ಸೇವಾರೂಪವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ಉತ್ಸವದ ಪಾರಂಪರಿಕ ಆಚರಣೆಯ ಜೊತೆಗೆ ವಿವಿಧ ಸಾಂಸ್ಕೃತಿಕ ವೈಭವಗಳ ವಿಜ್ರಂಭಣೆಯ ಆಚರಣೆಗಳು ನಡೆಯಲಿದೆ ಎಂದು ತಿಳಿಸಿರುವ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
ಉತ್ಸವದ ದಿನಗಳಲ್ಲಿ ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಸತಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ಪ್ರತಿ ದಿವಸ ಶ್ರೀ ದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ನವರಾತ್ರಿ ಸಂಭ್ರವದ ಅಂಗವಾಗಿ ಅದ್ದೂರಿಯ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಿಗಿ ಬಂದೋಬಸ್: ಬಂದೋಬಸ್ತ್ ಹಾಗೂ ರಕ್ಷಣಾ ಕಾರ್ಯಗಳ ಕರ್ತವ್ಯ ನಿರ್ವಹಣೆಗಾಗಿ ಜಿಲ್ಲಾ ಎಸ್ಪಿ ಹರಿರಾಮ್ ಶಂರ್ಕ ಹಾಗೂ ಕುಂದಾಪುರ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ಪೊಲೀಸ್ ಹಾಗೂ ಗ್ರಹ ರಕ್ಷಕ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮೀ ಎಸ್.ರ್ಆ ಅವರ ಮಾರ್ಗ ದರ್ಶನದಲ್ಲಿ ಸಭೆ ನಡೆಸಿ ಉತ್ಸವದ ಯಶಸ್ಸಿಗಾಗಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಹಾಗೂ ಜಿಲ್ಲಾ ಗ್ರಹ ರಕ್ಷಕದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಅವರೊಂದಿಗೆ ಬಂದೋಬಸ್ತ್ ಹಾಗೂ ರಕ್ಷಣಾ ವ್ಯವಸ್ಥೆಗಳ ಕುರಿತು ಸಮಾ ಲೋಚನೆ ನಡೆಸಲಾಗಿದೆ. ಸಿಸಿ ಕ್ಯಾಮರಾ ಗುಣಮಟ್ಟ ಪರಿವೀಕ್ಷಣೆ ನಡೆಸಿ, ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.
ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹಾಗು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸ್ವರ್ಣ ಮುಖಿ ಸಭಾಭವನದಲ್ಲಿ 10 ದಿನಗಳ ಕಾಲ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ನುರಿತ ತಂಡಗಳಿಂದ ನಡೆಯಲಿರುವ ಭರತನಾಟ್ಯಂ, ಕೂಚುಪುಡಿ, ಭಕ್ತಿಗೀತೆಗಳು ಶಾಸ್ತ್ರೀಯ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಾಬು ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ್, ಸುಧಾ ಕೆ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ತುಂಬಗಿ ಮೊದಲಾದವರು ಉಪಸ್ಥಿತರಿದ್ದರು.