×
Ad

ಸ್ಪೀಕರ್ ವಿರುದ್ಧ ಯಶಪಾಲ್ ಆರೋಪ: ಪ್ರಸಾದ್‌ರಾಜ್ ಖಂಡನೆ

Update: 2025-12-17 21:47 IST

ಉಡುಪಿ ಡಿ.17: ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಾಡಿರುವ ಆರೋಪಗಳನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಶಾಸಕರಾಗಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರಲ್ಲಿ ಕೋಮು ಭಾವನೆ ಕೆರಳಿಸುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಅಭಿವೃದ್ಧಿಯ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವ ಬದಲು ಸಣ್ಣ ವಿಷಯವನ್ನು ದೊಡ್ಡದು ಮಾಡಿ ವಿವಾದಗೊಳಿಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು.

ಹರಿಕಥೆ ಎಂಬುದು ಶ್ರೇಷ್ಠ ಕಲೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಅದನ್ನು ಅನಗತ್ಯವಾಗಿ ಸುದೀರ್ಘ ಮಾತನಾಡು ವವರಿಗೆ ಎಲ್ಲರೂ ಬಳಸುತ್ತಾರೆ. ಆದರೆ ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಶಾಸಕರು ಧರ್ಮ ಹಾಗೂ ಸಂಪ್ರದಾಯವನ್ನು ಗುರಾಣಿಯಾಗಿ ಬಳಸುತ್ತಿರುವುದು ಖಂಡನೀಯ ಎಂದರು.

ಸದನದ ಘನತೆ ಹಾಗೂ ಸಮಯವನ್ನು ಕಾಪಾಡುವುದು ಸಭಾಧ್ಯಕ್ಷರ ಕರ್ತವ್ಯ. ನೇರವಾಗಿ ವಿಷಯಕ್ಕೆ ಬನ್ನಿ ಎಂದು ಹೇಳುವುದು ಸಂಸದೀಯ ಶಿಸ್ತಿನ ಭಾಗವಾಗಿದೆಯೇ ಹೊರತು ಸಂಪ್ರದಾಯಕ್ಕೆ ಮಾಡಿದ ಅವಮಾನವಲ್ಲ ಎಂದು ಕಾಂಚನ್, ಖಾದರ್ ನಡೆಯನ್ನು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕುಶಲ ಶೆಟ್ಟಿ, ಕೆ.ಟಿ.ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News