ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಕೋಟ: ಜೂನ್ ಮೊದಲ ವಾರ ಪ್ರಥಮ ಹಂತದ ಲೋಕಾರ್ಪಣೆ ಭರವಸೆ
ಉಡುಪಿ, ಮೇ 14: ಕಳೆದ ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಇದೀಗ ಅಂತಿಮ ಹಂತ ತಲುಪುತ್ತಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದರು.
ಮೇಲ್ಸೇತುವೆ ಕಾಮಗಾರಿ ಕುರಿತು ಉಲ್ಲೇಖಿಸಿದ ಕೋಟ, ಅಂಬಲಪಾಡಿ ಯಲ್ಲಿ ವಾಹನ ದಟ್ಟಣೆಯ ಒತ್ತಡ ಮತ್ತು ಟ್ರಾಫಿಕ್ ಸಮಸ್ಯೆಯಿಂದ ನಿರಂತರವಾಗಿ ನಡೆಯುತಿದ್ದ ಅಫಘಾತಗಳು ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ತಪ್ಪಿಸಲು ಈ ಕಾಮಗಾರಿ ನಡೆಸಲಾಗುತಿದ್ದು, ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾದರೆ ವಾಹನ ದಟ್ಟಣೆಯ ಸಮಸ್ಯೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ ಎಂದರು.
ಮೇ ಅಂತ್ಯದ ಒಳಗೆ ಮೇಲ್ಸೇತುವೆ ಪ್ರಥಮ ಹಂತದ ಕಾಮಗಾರಿ ಮುಗಿಸುವ ಪ್ರಯತ್ನ ಮಾಡುತ್ತಿದ್ದರೂ ತಾಂತ್ರಿಕ ಕಾರಣದಿಂದ ಜೂನ್ ಮೊದಲ ವಾರದಲ್ಲಿ ಮೇಲ್ಸೇತುವೆಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಈ ಕಾಮಗಾರಿಯನ್ನು ಕ್ಲಪ್ತ ಸಮಯದಲ್ಲಿ ಮುಗಿಸುವ ಪ್ರಯತ್ನ ನಡೆಯುತ್ತಿದ್ದು, ಸಹಜವಾಗಿ ಜನರ ಮತ್ತು ಪ್ರಯಾಣಿಕರ ಒತ್ತಡದಿಂದ ಮುಗಿಯುವ ಹಂತಕ್ಕೆ ಬಂದಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮೇಲ್ಸೆತುವೆ ಭೇಟಿಯ ವೇಳೆ ಸಂಸದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ ನವೀನ್ ಅಲ್ಲದೇ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.