×
Ad

ಕಾರ್ಕಳದಲ್ಲಿ ಮುಂದುವರಿದ ಗಾಳಿ-ಸಿಡಿಲು ಪ್ರತಾಪ: 20ಕ್ಕೂ ಅಧಿಕ ಮನೆಗಳಿಗೆ ಹಾನಿ; ಲಕ್ಷಾಂತರ ರೂ. ನಷ್ಟ

Update: 2026-05-14 21:18 IST

ಉಡುಪಿ, ಮೇ 14: ಮಳೆಯ ಬಿರುಸು ಕಡಿಮೆ ಇದ್ದರೂ, ಮುಂಗಾರು ಪೂರ್ವ ಮಳೆಯೊಂದಿಗೆ ಬರುವ ಬಲವಾದ ಗಾಳಿ ಹಾಗೂ ಗುಡುಗು-ಸಿಡಿಲು ತಮ್ಮ ಪ್ರತಾಪ ತೋರುವ ಮೂಲಕ ಕಾರ್ಕಳ ತಾಲೂಕಿನಾದ್ಯಂತ 20ಕ್ಕೂ ಅಧಿಕ ಮನೆಗಳಿಗೆ ದೊಡ್ಡ ಪ್ರಮಾಣದ ಹಾನಿ ಯನ್ನುಂಟು ಮಾಡಿವೆ.

ಸಾಧಾರಣವಾಗಿ ಮೇ ತಿಂಗಳ ಕೊನೆಯ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಜೋರಾಗಿ ಸುರಿಯುತ್ತಿವೆ. ಆದರೆ ಈ ಬಾರಿ ಮಳೆಯ ಪ್ರಮಾಣ ಹಿಂದಿನಷ್ಟಿಲ್ಲದಿದ್ದರೂ, ಗಾಳಿಯಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ತೋಟಗಾ ರಿಕಾ ಬೆಳೆಗಳಿಗೆ, ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗುತ್ತಿವೆ.

ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಜಯ ಸಾಲ್ಯಾನ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಹಾಗೂ ಮನೆಯಲ್ಲಿದ್ದ ಇಲೆಕ್ಟ್ರಿಕ್ ಉಪಕರಣಗಳಿಗೆ ಹಾನಿಯಾಗಿವೆ. ಜಯ ಸಾಲ್ಯಾನ್ ಅವರ ತಲೆಗೆ ಸಿಡಿಲು ಬಡಿದು ಅವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ತಿಳಿಸಿದ್ದಾರೆ. ಸಿಡಿಲು ಬಡಿದುದರಿಂದ ಜಯ ಸಾಲ್ಯಾನ್‌ರ ಮನೆಗೆ 50 ಸಾವಿರದಷ್ಟು ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಅಲ್ಲದೇ ಕಾರ್ಕಳ ತಾಲೂಕು ಈದು ಗ್ರಾಮದ ಸುಂದರ ಪೂಜಾರಿ ಅವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 35,000ರೂ., ಪಳ್ಳಿ ಗ್ರಾಮದ ಮಹೇಶ್ ಅವರ ಮನೆಗೆ 30ಸಾವಿರ ಹಾಗೂ ಮುದ್ರಾಡಿ ಗ್ರಾಮದ ಸುಜಾತಾ ಸೇರಿಗಾರ್ತಿ ಎಂಬವರ ಮನೆಗೆ ಸಿಡಿಲು ಬಡಿದು 30,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ನಿನ್ನೆ ಸಂಜೆ ಬೀಸಿದ ಭಾರೀ ಗಾಳಿಗೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಗೋಪಾಲ ಆಚಾರಿ, ತೃಪ್ತಿ ಹೆಗ್ಡೆ ಎಂಬವರ ತೋಟಗಾರಿಕಾ ಬೆಳೆಗೆ ಅಪಾರ ಹಾನಿ ಸಂಭವಿಸಿದೆ. ಇದರೊಂದಿಗೆ ಅಲ್ಬಾಡಿ ಗ್ರಾಮದ ಲಿಸ್ಸಿ ರಾಜು ಅವರ ಮನೆಯ ತೋಟಕ್ಕೂ ಬಿರುಗಾಳಿಯಿಂದ ಅಪಾರ ನಷ್ಟವಾಗಿದೆ. ಪ್ರಾಥಮಿಕ ವರದಿಗಳಂತೆ 1.5 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಉಡುಪಿಯ ಕಡೆಕಾರು ಗ್ರಾಮದ ನೇತ್ರಾವತಿ, ಕೃಷ್ಣ ಮೆಂಡನ್, ಕೊರಂಗ್ರಪಾಡಿಯ ಗುಂಡು ಶೆಟ್ಟಿ, ಹೆರ್ಗಾ ಗ್ರಾಮದ ಗಣಪತಿ ನಾಯಕ್, ಪೆರ್ಡೂರು ಗ್ರಾಮದ ಸರಸ್ವತಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿ ಉಂಟಾಗಿದೆ.ಒಟ್ಟಾರೆಯಾಗಿ ಒಂದೂವರೆ ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ.

ಬುದವಾರ ಸಂಜೆ ಬೀಸಿದ ಗಾಳಿಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಚಂದ್ರಯ್ಯ ಆಚಾರಿ, ಕೃಷ್ಣಯ್ಯ ಜೋಗಿ, ಆನಂದ ಕೊರಗ, ಬಸವರಾಜ್, ಸುಜಾತ, ಅಮ್ಮಣ್ಣಿ, ಸಾಣೂರು ಗ್ರಾಮದ ಆಲ್ವಿನ್ ಪಿಂಟೊ, ನೂರಾಳ್ ಬೆಟ್ಟುನ ಎಲ್ಕುರ ಮೇರ, ಕಾಪು ತಾಲೂಕು ಕುರ್ಕಾಲು ಗ್ರಾಮದ ವಸಂತ ಅವರ ಮನೆಗಳ ಮೇಲೆ ಮರ ಬಿದ್ದು ಲಕ್ಷಾಂತರ ರೂ.ನಷ್ಟವಾಗಿದೆ. ಈ ಎಲ್ಲಾ ಪ್ರಕರಣಗಳಿಂದ ಆರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ, ಬೈಂದೂರಿನಲ್ಲಿ ಮಳೆ

ಕುಂದಾಪುರ: ಈ ಬಾರಿ ಮಳೆಯ ಕೊರತೆ ಅನುಭವಿಸುತಿದ್ದ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಇಂದು ಅಪರಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗಿರುವ ವರದಿ ಬಂದಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ತೇವಾಂಶ ಭರಿತ ಮೋಡದ ಕಾರಣ ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಗುರುವಾರ ಸಂಜೆ ಗಾಳಿ ಸಹಿತ ಮಳೆ ಸುರಿದಿದೆ. ಇದರಿಂದ ಅನೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News