ಹಠಾತ್ ವಾಯು ದಾಳಿ; ತತ್ತರಿಸಿ ಮೂರ್ಛೆ ಬಿದ್ದ ವಿದ್ಯಾರ್ಥಿಗಳು: ತೆಂಕನಿಡಿಯೂರು ಕಾಲೇಜಿನಲ್ಲಿ ಅಣುಕು ಪ್ರದರ್ಶನ
ಉಡುಪಿ, ಮೇ 21: ಅಕಸ್ಮಾತ್ ಆಗಿ ನಡೆದ ವಾಯು ದಾಳಿಯಿಂದ ತತ್ತರಿಸಿ ಮೂರ್ಛೆ ಬಿದ್ದ ವಿದ್ಯಾರ್ಥಿಗಳು, ಸುತ್ತಮುತ್ತ ಅವಾಕ್ಕಾಗಿ ನಿಂತು ನೋಡುತ್ತಿರುವ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮೂಹ, ದಾಳಿಯಲ್ಲಿ ಗಾಯ ಗೊಂಡ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಗಾಯಾಳು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ಗೃಹರಕ್ಷಕರು, ಬೆಂಕಿ ಆರಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು.
ಇದು ಇಂದು ಬೆಳಗ್ಗೆ ನಗರದ ತೆಂಕನಿಡಿಯೂರು ಕಾಲೇಜಿನಲ್ಲಿ ಕಂಡು ಬಂದ ವಿವಿಧ ದೃಶ್ಯಾವಳಿಗಳು. ಬೆಳಗ್ಗೆ ಮನೆಯಿಂದ ಕಾಲೇಜಿಗೆ ಬಂದು, ತಮ್ಮ ಪಾಡಿಗೆ ತಾವು ಓದಿ ಕೊಂಡಿರಬೇಕಾದರೆ ಹಠಾತ್ತಾಗಿ ವಾಯುದಾಳಿ ನಡೆದರೆ ಮಕ್ಕಳ ಪರಿಸ್ಥಿತಿ ಹೇಗಾಗಿರಬೇಡ?
ಒಂದು ತುರ್ತು ಸಂದರ್ಭದ ಸಮಯದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ನಡೆದ ಅಣಕು ಕಾರ್ಯಾಚರಣೆಯಲ್ಲಿ ಕಂಡುಬಂದ ವಿವಿಧ ದೃಶ್ಯಾವಳಿಗಳು ಇವು....
ಜಿಲ್ಲೆಯ ಅಗ್ನಿಶಾಮಕ ಇಲಾಖೆ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಪೌರರಕ್ಷಕ ದಳ, ಲಯನ್ಸ್ ಕ್ಲಬ್ ಉಡುಪಿ, ರೆಡ್ ಕ್ರಾಸ್ ಘಟಕ, ಹಳೆ ವಿದ್ಯಾರ್ಥಿ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿ ಯೂರು ಉಡುಪಿ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ತೆಂಕನಿಡಿಯೂರು ಕಾಲೇಜು ಆವರಣದಲ್ಲಿ ವೈಮಾನಿಕ ದಾಳಿ ಮತ್ತು ದೀಪಗಳನ್ನು ನಂದಿಸುವ ಕುರಿತು ಅಣಕು ಪ್ರದರ್ಶನದ ತುಣುಕುಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಜಿಲ್ಲೆಯ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಈ ಅಣಕು ಪ್ರದರ್ಶನ ನಡೆದಿದ್ದು, ಆಕಸ್ಮಿಕ ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಯನ್ನು ಕೈಗೊಳ್ಳಲಾಯಿತು.
ಅಣಕು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಇತ್ತೀಚೆಗೆ ಉಡುಪಿಯಲ್ಲಿ ನಡೆದ ಅಗ್ನಿ ಅವಘಡದ ಸಂದರ್ಭದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲ ಇಲಾಖೆಗಳು ಒಟ್ಟುಗೂಡಿ ಎರಡು ಗಂಟೆಯ ಅವಧಿಯಲ್ಲಿ ಬೆಂಕಿ ಯನ್ನು ನಂದಿಸಿದವು. ಆದರೂ ಅಪಾರ ಪ್ರಮಾಣದ ಹಾನಿ ಸಂಭವಿಸಿತು. ಇಂತಹ ಅಣಕು ಕಾರ್ಯಕ್ರಮಗಳನ್ನು ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುವ ಜೊತೆಗೆ ಆಕಸ್ಮಿಕ ಪರಿಸ್ಥಿತಿಗಳನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ಬಗ್ಗೆ ಪ್ರಾಯೋಗಿಕ ಅನುಭವ ಸಿಗು ತ್ತದೆ ಮತ್ತು ಜನರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಬೇಕಾದ ಯೋಜನೆಗಳನ್ನು ರೂಪಿಸಲು ಸಹಾಯ ವಾಗುತ್ತದೆ ಎಂದರು.
ನಿಜ ಜೀವನದಲ್ಲಿ ಅವಘಡಗಳಾಗುವ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ಕೆಲವರು ರೀಲ್ಸ್ಗಳನ್ನು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಾ ರಕ್ಷಣಾ ಕಾರ್ಯಗಳಲ್ಲಿ ತೊಡಕುಂಟು ಮಾಡುತ್ತಾರೆ. ನಮ್ಮ ರಕ್ಷಣಾ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವವನ್ನು ಉಳಿಸಲು ಹರಸಾಹಸ ಪಡುತ್ತಿರುತ್ತಾರೆ. ಇಂತ ವಿಷಮ ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ಗಳನ್ನು ಮಾಡುವ ಬಗ್ಗೆ ಅಣಕು ಕಾರ್ಯಾಚರಣೆಗಳಿಂದ ಪ್ರಾಯೋಗಿಕವಾದ ಜ್ಞಾನ ದೊರೆಯುತ್ತದೆ. ವಿವಿಧ ಇಲಾಖೆಗಳು ಯಾವ ರೀತಿ ಸಮನ್ವಯದಿಂದ ಕಾರ್ಯ ನಿರ್ವಸುತ್ತವೆ ಎನ್ನುವ ಅರಿವಾಗುತ್ತದೆ ಎಂದ ಜಿಲ್ಲಾಧಿಕಾರಿ, ಈ ಅಣಕು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ರೋಷನ್ ಶೆಟ್ಟಿ, ಸೆಕೆಂಡ್ ಇನ್ ಕಮಾಂಡೆಂಟ್ ಕೆ.ಸಿ ರಾಜೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗಟ ಕರ, ಪೌರ ರಕ್ಷಣಾ ದಳದ ಕಮಾಂಡಿಂಗ್ ಆಫೀಸರ್ ಡಾ. ವಿಜಯೇಂದ್ರ ರಾವ್, ರೆಡ್ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ಎನ್, ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಕಿಣಿ, ತೆಂಕ ನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಮೊದಲಾದವರು ಉಪಸ್ಥಿತರಿದ್ದರು. ಗೃಹರಕ್ಷಕ ದಳ ಸಿಬ್ಬಂದಿ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.