×
Ad

ಜಲಮಾಲಿನ್ಯ ಮಾಡುವ ವಸತಿ ಸಮುಚ್ಚಯಗಳ ಮಾಲಕರ ವಿರುದ್ಧ ಕ್ರಮ: ಉಡುಪಿ ಡಿಸಿ ಸ್ವರೂಪ ಟಿ.ಕೆ ಎಚ್ಚರಿಕೆ

Update: 2026-05-21 21:40 IST

ಉಡುಪಿ, ಮೇ 21: ವಸತಿ ಹಾಗೂ ಬಹು ಮಹಡಿ ವಸತಿ ಸಮುಚ್ಛಯ ಗಳು ಕೊಳಚೆ ಹಾಗೂ ತ್ಯಾಜ್ಯ ನೀರುಗಳನ್ನು ಶುದ್ದೀಕರಣ ಮಾಡದೇ ತೋಡುಗಳ ಮೂಲಕ ನದಿಗೆ ಬಿಟ್ಟು ಜಲಮಾಲಿನ್ಯ ಉಂಟುಮಾಡಿದರೆ ಅಂತಹ ವಸತಿ ಸಮುಚ್ಛಯಗಳ ಮಾಲಕರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸಂಬಂಧಿತ ರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಲತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯಗಳು, ತ್ಯಾಜ್ಯ ನಿರ್ವಹಣಾ ಘಟಕಗಳ ಇರುವಿಕೆ, ಅವುಗಳ ನಿರ್ವಹಣೆ, ತ್ಯಾಜ್ಯ ನಿರ್ವಹಣಾ ಘಟಕ ಇಲ್ಲದೇ ಇರುವುದು, ಕಲುಷಿತ ನೀರುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದೇ ತೋಡುಗಳಿಗೆ ಬಿಟ್ಟು ಇಂದ್ರಾಳಿ ನದಿ ಮೂಲಗಳಿಗೆ ಬಿಡುವುದರ ಬಗ್ಗೆ ಸವಿಸ್ತಾರವಾದ ಸರ್ವೇ ಕಾರ್ಯ ಗಳನ್ನು ಮಣಿಪಾಲ ಎಂಐಟಿ ಸಂಸ್ಥೆಯ ವತಿಯಿಂದ ಕೈಗೊಂಡಿದ್ದು, ಕೆಲವು ವಸತಿ ಹಾಗೂ ಸಮುಚ್ಛಯಗಳು ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ಡ್ರೋನ್ ಸರ್ವೇಗಳಲ್ಲಿ ಕಂಡುಬಂದಿದೆ. ಇವುಗಳ ಬಗ್ಗೆ ಮಾಲಕರು ಎಚ್ಚರ ವಹಿಸ ಬೇಕಾಗಿದೆ. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಲಾಗುವುದು ಎಂದರು.

ನಗರಸಭಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳು ಕೆಲವು ಅಪಾಟ್ಮೆರ್ಂಟ್‌ ಗಳಲ್ಲಿ ಮಾತ್ರ ಇವೆ. ಆದರೂ ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಕೆಲವು ಅಪಾಟ್ಮೆರ್ಂಟ್‌ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಜಲ ಮೂಲಗನ್ನು ಸೇರಿ ಸಂಪೂರ್ಣ ಕಲ್ಮಶವಾ ಗಿಸುತ್ತಿದೆ ಎಂದ ಅವರು, ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಇತರ ಕಡೆಗಳಲ್ಲಿ ಮರುಬಳಕೆಗೆ ಮುಂದಾಗಬೇಕು ಎಂದರು.

ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್‌ಗಳ ಬಳಕೆಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗ ಬೇಕು. ಸಕ್ಕಿಂಗ್ ಯಂತ್ರಗಳ ಬಳಕೆ ಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು ಎಂದ ಅವರು, ತ್ಯಾಜ್ಯ ನೀರನ್ನು ನದಿ ತೋಡುಗಳಿಗೆ ಬಿಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳಿಂದ ಕೆಲ ಬಾವಿಗಳ ನೀರು ಸಹ ಕಲುಷಿತಗೊಂಡಿವೆ ಹಾಗೂ ನದಿಯ ನೀರು ಸಹ ಮಾಲಿನ್ಯವಾಗುತ್ತಿದೆ. ಹೀಗಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಇಂದ್ರಾಳಿ ನದಿಯ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೆ ವಿವಿಧ ಹಂತಗಳ ಸ್ಟ್ರೆಚ್ ಮಾಡುವುದರೊಂದಿಗೆ ಅವುಗಳ ನಿರ್ವಹಣೆ, ಜನಸಾಮಾನ್ಯ ರಿಗೆ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊ ಳ್ಳಲು ಕಟ್ಟಡ ನಿರ್ಮಾಣ ಸಂಸ್ಥೆಗಳು, ಎನ್‌ಜಿಓಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ನಗರಸಭೆಗೆ ವಹಿಸಬೇಕು.

ನದಿ ದಂಡೆಗಳ ಸ್ವಚ್ಛತೆಗೆ, ಕಲುಷಿತ ಹಾಗೂ ತ್ಯಾಜ್ಯ ನೀರು ಸೇರಿ ಮಾಲಿನ್ಯವಾಗದಂತೆ ಕ್ರಮವಹಿಸುವುದರಿಂದ ನದಿ ನೀರು ಶುದ್ಧವಾಗಿರುತ್ತದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಫಿಲ್ಟರ್ ಮಾಡಿ ಬಳಸಿಕೊಳ್ಳಬಹುದಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಂಐಟಿಯ ಸಹಾಯಕ ನಿರ್ದೇಶಕ ಡಾ.ರಾಘವೇಂದ್ರ ಹೊಳ್ಳ, ಶಿಲ್ಪಾ ಭಟ್, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News