×
Ad

ಮುರ್ಡೇಶ್ವರ-ಕಾಚಿಗುಡಾ ರೈಲು ಕುಮಟಾಕ್ಕೆ ವಿಸ್ತರಣೆ; ಸಂಸದ ಕಾಗೇರಿ ಉದ್ಘಾಟನೆ

Update: 2026-06-20 21:47 IST

ಉಡುಪಿ, ಜೂ.20: ಕೊಂಕಣ ರೈಲ್ವೆಯ ಮುರ್ಡೇಶ್ವರ-ಕಾಚಿಗುಡಾ ಎಕ್ಸ್‌ಪ್ರೆಸ್ ರೈಲನ್ನು ಕುಮಟಾದವರೆಗೆ ವಿಸತರಿಸಲಾಗಿದ್ದು, ಅದರ ಉದ್ಘಾಟನೆ ಇಂದು ಬೆಳಗ್ಗೆ ಕುಮಟಾ ರೈಲು ನಿಲ್ದಾಣದಲ್ಲಿ ನಡೆಯಿತು.

ಕಾಚಿಗುಡ-ಮುರ್ಡೇಶ್ವರ-ಕಾಚಿಗುಡಾ ರೈಲು ವಾರಕ್ಕೆರಡು ಬಾರಿ ಸಂಚರಿಸುತಿದ್ದು, ಅದನ್ನು ಕುಮಟಾವರೆಗೆ ವಿಸ್ತರಿಸಲಾಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕುಮಟಾ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ಈ ರೈಲನ್ನು ಉದ್ಘಾಟಿಸಿದರು.

ಇದರೊಂದಿಗೆ ಕುಮಟಾ, ಗೋಕರ್ಣ, ಮುರ್ಡೇಶ್ವರ ಹಾಗೂ ಭಟ್ಕಳ ರೈಲು ನಿಲ್ದಾಣಗಳಲ್ಲಿ ಒದಗಿಸಿರುವ ಪ್ರಯಾ ಣಿಕರ ಸೌಲಭ್ಯಗಳನ್ನು ಸಹ ಸಂಸದ ಕಾಗೇರಿ ಉದ್ಘಾಟಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸುವುದು, ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾರವಾರದ ಶಾಸಕ ದಿನಕರ ಕೆ.ಶೆಟ್ಟಿ, ಉತ್ತರ ಕನ್ನಡದ ವಿಧಾನಪರಿಷತ್ ಸದಸ್ಯರಾದ ಕಾರವಾರದ ಗಣಪತಿ ಡಿ.ಉಳ್ವೇಕರ್, ಯಲ್ಲಾಪುರದ ಶಾಂತರಾಮ ಸಿದ್ಧಿ, ಶಿರಸಿಯ ಶಾಸಕ ಭೀಮಣ್ಣ ನಾಯ್ಕ್, ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಎಂಡಿ ಸಂತೋಷ್‌ಕುಮಾರ್ ಝಾ, ಕಾರವಾರದ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಇಂದು ಉದ್ಘಾಟನೆಗೊಂಡ ವಿವಿಧ ಸೌಲಭ್ಯಗಳಲ್ಲಿ ಕುಮಟಾ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂನ ನಂ.2ರ ಉನ್ನತೀಕರಮ, ಗೋಕರ್ಣ ರೋಡ್ ನಿಲ್ದಾಣದಲ್ಲೂ ಪ್ಲಾಟ್‌ಫಾರಂ ನಂ.1ರ ಉನ್ನತೀಕರಣ, ಮುರ್ಡೇಶ್ವರದಲ್ಲಿ ಬಯೋಟಾಯ್ಲೆಟ್ ಸೌಲಭ್ಯ, ಭಟ್ಕಳದಲ್ಲಿ ಪ್ಲಾಟ್‌ಫಾರಂ ನಂ.2ರ ಉನ್ನತೀಕರಣ ಸೇರಿವೆ.

ಮುರ್ಡೆಶ್ವರ ಕಾಚಿಗುಡ ರೈಲು ಸಂಚಾರವನ್ನು ಕುಮಟಾವರೆಗೆ ವಿಸ್ತರಿಸುವ ಮೂಲಕ ಕರ್ನಾಟಕ ಮತ್ತು ತೆಲಂಗಾಣ ನಡುವೆ ರೈಲು ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ. ಕುಮಟಾದಿಂದ ತಿರುಪತಿಗೆ ನೇರ ಸಂಪರ್ಕ ದೊರೆಯುವಂತಾಗಿದೆ. ಇದು ಇಲ್ಲಿನ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್‌ಕುಮಾರ್ ಝಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News