‘ಸ್ಥಗಿತಗೊಂಡಿರುವ ಸಿದ್ಧಾಪುರ ಏತ ನೀರಾವರಿ ಯೋಜನೆ ಪುನರಾರಂಭಿಸಿ’
ಸಚಿವ ರಾಮಲಿಂಗಾರೆಡ್ಡಿಗೆ ಸಂಸದ ಬಿ.ವೈ.ರಾಘವೇಂದ್ರ ಮನವಿ
ಬೈಂದೂರು, ಜೂ.29:: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ರೈತರ ಹಿತರಕ್ಷಣೆ ಹಾಗೂ ಕೃಷಿ ಭೂಮಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಬೆಂಗಳೂರಿನಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರಾಜಕೀಯ ದುರುದ್ದೇಶ ಹಾಗೂ ತಪ್ಪು ಮಾಹಿತಿಗಳಿಂದಾಗಿ ಇದೀಗ ಅರ್ಧಕ್ಕೆ ಸ್ಥಗಿತಗೊಂಡಿರುವ ಬೈಂದೂರಿನ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಈ ಹಿಂದೆ ಅನುಮೋದನೆಯಾದ ರೀತಿಯಲ್ಲಿಯೇ ತಕ್ಷಣವೇ ಮುಂದುವರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಂಸದರು ಸಚಿವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ಶೇ. 56ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯು ತಜ್ಞರ ತಂಡದ ವರದಿಯ ಆಧಾರದ ಮೇಲೆಯೇ ಅನುಮೋದನೆಗೊಂಡು ಕಾರ್ಯಾರಂಭವಾಗಿತ್ತು ಎಂದು ಬಿ.ವೈ. ರಾಘವೇಂದ್ರ ಅವರು ಸಚಿವರಿಗೆ ವಿವರಿಸಿದರು.
ವರಾಹಿ ನದಿಯಲ್ಲಿ ಸದ್ಯ 3,000 ಕ್ಯೂಸೆಕ್ಸ್ ನೀರಿನ ಹರಿವಿದ್ದು, ಈ ಯೋಜನೆಗೆ ಕೇವಲ 66 ಕ್ಯೂಸೆಕ್ಸ್ ನೀರು ಮಾತ್ರ ಆವಶ್ಯಕತೆಯಿದೆ. ಇದರಿಂದ ಇತರ ಯಾವುದೇ ಯೋಜನೆಗಳಿಗೆ ತೊಂದರೆಯಾಗದಿದ್ದರೂ, ಖಾಸಗಿ ಕಿರು ಜಲವಿದ್ಯುತ್ ಘಟಕದ ಮಾಲಕರಿಗೆ ಅನುಕೂಲ ಮಾಡಿ ಕೊಡುವ ಸಲುವಾಗಿ ತಪ್ಪು ಮಾಹಿತಿ ನೀಡಿ ಕಾಮಗಾರಿಗೆ ತಡೆಯನ್ನು ಒಡ್ಡಲಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.
ಮುಖ್ಯಮಂತ್ರಿಗಳಿಂದ ಒಪ್ಪಿಗೆ: ಇದೇ ವಿಷಯದಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದಾಗ ಅವರು ಕಾಮಗಾರಿ ಪುನರಾರಂಭಿಸಲು ಆದೇಶ ನೀಡಿರುವುದನ್ನು ಸಚಿವರ ಗಮನಕ್ಕೆ ತಂದ ಸಂಸದರು, ಕರಾವಳಿ ಭಾಗದ 7-8 ಗ್ರಾಮಗಳ ಸುಮಾರು 1,200 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಈ ಯೋಜನೆಯನ್ನು ರೈತರ ಹಿತದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.