ತುಳುಕೂಟದಿಂದ ಮದರೆಂಗಿದ ರಂಗ್ ಕಾರ್ಯಕ್ರಮ
ಉಡುಪಿ, ಜು.4: ಉಡುಪಿ ತುಳುಕೂಟದ ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ ಮದರೆಂಗಿದ ರಂಗ್ ಕಾರ್ಯಕ್ರಮವನ್ನು ಶನಿವಾರ ಉಡುಪಿ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಲಯನ್ಸ್ ಬುಲೆಟಿನ್ ಆ್ಯಂಡ್ ಇನ್ಫರ್ಮೆಶನ್ ಇದರ ಮುಖ್ಯ ಸಂಪಾದಕಿ ಜಯಲಕ್ಷ್ಮೀ ಎನ್.ಅಮೀನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಪೂಜಾರಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟ ಉಪಾಧ್ಯಕ್ಷ ಭುವನ್ ಪ್ರಸಾದ್ ಹೆಗ್ಡೆ ಮಾತನಾಡಿ, ಮದರಂಗಿ ತುಳು ನಾಡಿನ ಅಲಂಕಾರಿಕಾ ಸಾಧನ. ಇದು ದೇಹವನ್ನು ತಂಪಾಗಿಡುತ್ತದೆ ಮತ್ತು ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಪ್ರಾಕೃತಿಕ ಮೆಹೆಂದಿಯ ಬದಲು ಇಂದು ರಾಸಾಯನಿಕಯುಕ್ತ ಮೆಹೆಂದಿ ಬಳಕೆ ಮಾಡಲಾಗುತ್ತಿದೆ. ಆದರೆ ಈ ಸ್ಪರ್ಧೆಯಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ತುಳುಕೂಟದ ಉಪಾಧ್ಯಕ್ಷೆ ಶೋಭಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಸುಕನ್ಯಾ ಶೇಖರ್ ಸ್ವಾಗತಿಸಿದರು. ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಯಶೋಧಾ ಕೇಶವ ಕಾರ್ಯಕ್ರಮ ನಿರೂಪಿಸಿದರು.
ಒಂದರಿಂದ 5ನೇ ತರಗತಿಯ ವರೆಗಿನ ಮಕ್ಕಳಿಗೆ ಪೀಂಪಿರಿ ಊದುವುದು, ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯು ವುದು, 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಮೆಹೆಂದಿ, ತುಳುನಾಡಿನ ಹಣ್ಣಿನ ಪರಿಚಯ ಹೇಳುವುದು, ತೆಂಗಿನ ಗರಿಯಲ್ಲಿ ಆಟದ ವಸ್ತು ತಯಾರಿಸುವುದು, ಕಾಲೇಜು ಮಕ್ಕಳಿಗೆ ಮೆಹೆಂದಿ, ಕೇಶಾಲಂಕಾರ, ಮುಂಡಾಸ್ ಕಟ್ಟುವುದು, ಹೂವು ಕಟ್ಟುವ ಮತ್ತು ತುಳು ರಸಪ್ರಶ್ನೆ, ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.