ಅತ್ತೂರು ಬಾಸಿಲಿಕಾ ಸಮರ್ಪಣೆಯ ದಶಮಾನೋತ್ಸವದ ಸಂಭ್ರಮ

Update: 2026-08-10 18:34 IST

ಕಾರ್ಕಳ: ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಬಡವರ ನಿರ್ಗತಿಕರ ಹಾಗೂ ತುಳಿತಕ್ಕೆ ಒಳಪಟ್ಟ ಕಷ್ಟಕಾ ರ್ಪಣ್ಯಗಳನ್ನು ಅರಿತುಕೊಂಡು ಅವರ ಬಾಳಿನಲ್ಲಿ ಸಂತೋಷವನ್ನು ತರಲು ಕಾರಣವಾದಾಗ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದ್ದಾರೆ.

ಕಾರ್ಕಳದ ಸಂತ ಲಾರೆನ್ಸರ ಬಾಸಿಲಿಕದ ಸಮರ್ಪಣೆಯ ದಶಮಾನೋತ್ಸವ ಹಾಗೂ ಪಾಲಕ ಸಂತರ ಹಬ್ಬದ ಪ್ರಯುಕ್ತ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ಧರ್ಮಸಭೆಯ ಸಂಪತ್ತನ್ನು ಬಡವರಿಗೆ ಹಾಗೂ ನಿರ್ಗತಕರಿಗೆ ಹಂಚಿದ ಸಂತ ಲಾರೆನ್ಸರು ನಮಗೆಲ್ಲರಿಗೂ ಆದರ್ಶಪ್ರಾಯರು. ಅವರು ಬೋಧಿಸಿದ ಹಾಗೂ ಜೀವಿಸಿದ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯಲ್ಲಿ ಪ್ರವಚನವನ್ನು ನೀಡಿದರು. ಉಡುಪಿ ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ಮೊ.ಫ್ರಾನ್ಸಿಸ್ ಲುವಿಸ್, ಧರ್ಮ ಪ್ರಾಂತ್ಯದ ಚಾನ್ಸಲರ್ ವಂ.ಸ್ಟೀವನ್ ಡಿಸೋಜ, ಅನೇಕ ಧರ್ಮ ಗುರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಆರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರನ್ನು ಬಾಸಿಲಿಕದ ಪ್ರಧಾನ ಪ್ರವೇಶ ದ್ವಾರದ ಬಳಿ ಅದ್ದೂರಿ ಯಾಗಿ ಸ್ವಾಗತಿಸಲಾಯಿತು. ಇದರ ನಂತರ ಕ್ರಿಸ್ತ ಕೃಪ ಕಟ್ಟಡದ ಆಶೀರ್ವಚನ ಹಾಗೂ ನೂತನವಾಗಿ ನಿರ್ಮಿಸಲಾಗುತ್ತಿರುವ ಬಲಿಪೀಠದ ಶಂಕುಸ್ಥಾಪನೆಯನ್ನು ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಯಿತು.

ಬಲಿಪೂಜೆಯ ನಂತರ ನಡೆದ ದಶಮಾನೋತ್ಸವದ ಆಚರಣೆಯಲ್ಲಿ ಕ್ರಿಸ್ತಕೃಪ ಕಟ್ಟಡದ ರಚನೆಯಲ್ಲಿ ಶ್ರಮವಹಿಸಿದ ಹಾಗೂ ಬಾಸಿಲಿಕದಲ್ಲಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿರುವ ವಂ.ಅಲ್ಬನ್ ಡಿಸೋಜ, ವಂ. ಜಾರ್ಜ್ ಡಿಸೋಜ ಹಾಗೂ ವಂ.ರೋಮನ್ ಮಸ್ಕರೇನಸ್ ಹಾಗೂ ನಿವೃತ್ತ ಮತ್ತು ಹಾಲಿ ಧರ್ಮಧ್ಯಕ್ಷರನ್ನು ಬಾಸಿಲಿಕದ ಪರವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತಿ ವಂ. ಮೊನ್ಸಿಂಜರ್ ಫ್ರಾನ್ಸಿಸ್ ಲುವಿಸ್, ಪಾಲನಾ ಆಯೋಗಗಳ ಸಂಯೋಜಕ ರೀಟಾ ಲೋಬೊ ಉಪಸ್ಥಿತರಿದ್ದರು.

ಬಾಸಿಲಿಕದ ನಿರ್ದೇಶಕ ವಂ.ಆಲ್ಬನ್ ಡಿಸೋಜ ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ ದಶಮಾನೋತ್ಸವ ವರದಿಯನ್ನು ವಾಚಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ವಂದೀಶ್ ಮಥಾಯಸ್ ವಂದಿಸಿದರು. ವಿಲ್ಸನ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News