ಕೆಸರಿನ ರಾಡಿಯಾದ ಪಂಚಗಂಗಾವಳಿ ನದಿ ತೀರದ ರಿಂಗ್ ರೋಡ್ ಸಂಪೂರ್ಣ ಹದಗೆಟ್ಟ ರಸ್ತೆ; ಸುಗಮ ಸಂಚಾರಕ್ಕೆ ಅಡ್ಡಿ
ಕುಂದಾಪುರ, ಆ.22: ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ತನಕ ಪಂಚಗಂಗಾವಳಿ ನದಿ ತೀರದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಮಾರು 1.4 ಕಿ. ಮೀ. ಉದ್ದದ ರಿಂಗ್ ರೋಡ್ ಸಂಪೂರ್ಣ ಹದ ಗೆಟ್ಟಿದ್ದು, ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.
ಗಂಗೊಳ್ಳಿಯಲ್ಲಿ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 1.4 ಕಿ.ಮೀ ಉದ್ದದ ರಿಂಗ್ ರೋಡ್ ರಾಡಿಯಾಗಿದ್ದು ವಾಹನ ಹಾಗೂ ಜನರ ಸಂಚಾರವೇ ದುಸ್ತರವೆನಿಸಿದೆ. 5 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರಿಂಗ್ ರೋಡ್ನ ದುರಸ್ಥಿ ಕಾಮಗಾರಿ ಈವರೆಗೆ ನಡೆಯದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಮಣ್ಣಿನ ರಸ್ತೆಯಾಗಿರುವುದರಿಂದ ರಸ್ತೆಯ ವಿವಿಧ ಕಡೆಗಳಲ್ಲಿ ನೀರು ನಿಂತು ಹೊಂಡ ಗುಂಡಿಗಳು ನಿರ್ಮಾಣವಾಗಿ ರಸ್ತೆ ಸಂಪೂರ್ಣ ಕೆಸರುಮಯ ವಾಗಿದೆ. ಹೀಗಾಗಿ ರಸ್ತೆಯ ಮೇಲೆ ಸಂಚರಿಸುವುದು ಕಷ್ಟಕರವಾಗಿದ್ದು, ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಹುಗಿದುಹೋಗುತ್ತಿವೆ. ರಿಕ್ಷಾದವರು ಈ ರಸ್ತೆ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.
ಸುಮಾರು 6 ಮೀಟರ್ ಅಗಲದ ಈ ರಸ್ತೆ ದಿನಗಳೆದಂತೆ ಕಿರಿದಾಗುತ್ತಿದ್ದು ಹೋಗುಹೋಗುತ್ತಿದ್ದಂತೆ ರಸ್ತೆಯ ಅಗಲ 3 ಮೀಟರ್ಗೆ ಇಳಿದಿದೆ. ಹೀಗಾಗಿ ಎರಡು ವಾಹನಗಳು ಒಂದೇ ಬಾರಿಗೆ ಸಂಚರಿಸುವುದು ಕಷ್ಟವಾಗುತ್ತಿದೆ. ರಸ್ತೆಯ ಬದಿಯಲ್ಲಿರುವ ಮರ ಗಿಡಗಳು ರಸ್ತೆಗೆ ವಾಲಿಕೊಂಡಿದ್ದು ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ.
ಇನ್ನೊಂದೆಡೆ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದರಿಂದ ಮಳೆ ನೀರು ಎಲ್ಲೆಡೆ ನಿಂತು ಮನೆಗಳಿಗೆ ನುಗ್ಗುತ್ತಿದೆ. ಮ್ಯಾಂಗನೀಸ್ ರಸ್ತೆ ವಠಾರ ಹಾಗೂ ತಾರೀಮನೆ ಪರಿಸರದಲ್ಲಿ ಭಾರಿ ಪ್ರಮಾಣ ದಲ್ಲಿ ಮಳೆ ನೀರು ನಿಂತಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಹಾಗೆಯೇ ಸುತ್ತಮುತ್ತಲಿನ ತಗ್ಗು ಪ್ರದೇಶದ ಮನೆಗಳಿಗೂ ಮಳೆ ನೀರು ನುಗ್ಗುತ್ತಿದೆ. ಹೀಗಾಗಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಜನರ ಬವಣೆ ತೀರಿಸಲು ರಿಂಗ್ರೋಡ್
ಪಂಚಗಂಗಾವಳಿ ನದಿ ತೀರಕ್ಕೆ ಹೊಂದಿಕೊಂಡಿರುವ ದಾಕುಹಿತ್ಲು, ಗುಡ್ಡೆಕೇರಿ, ತಾರಿಮನೆ ಪರಿಸರದ ಜನರು ಸಂಪರ್ಕ ರಸ್ತೆಯಿಲ್ಲದೆ ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು. ಸುಮಾರು 20ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಗಂಗೊಳ್ಳಿ ಗ್ರಾಮಕ್ಕೆ ಪರ್ಯಾಯ ರಸ್ತೆ ಇರಲಿಲ್ಲ. ಮನೆಗೆ ಬೇಕಾಗುವ ದಿನಸಿ ಸಾಮಾನು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಈ ಭಾಗದ ಜನರು ಪಡುತ್ತಿದ್ದ ಬವಣೆ ಹೇಳ ತೀರದು.
ಮನೆ ಕಟ್ಟಿಕೊಳ್ಳಲು ಕಲ್ಲು, ಮಣ್ಣು ಮತ್ತಿತರ ಸಾಮಾಗ್ರಿಗಳನ್ನು ಸಾಗಿಸಲು ಸಂಪರ್ಕ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಜನರು ಸುಮಾರು 1-2 ಕಿ.ಮೀ ತನಕ ಸಾಮಾನುಗಳನ್ನು ತಲೆ ಮೇಲೆ ಹೊತ್ತುಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತ್ತು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಸಾಗಬೇಕಾದರೆ ರೋಗಿಯನ್ನು ಹೊತ್ತುಕೊಂಡು ಮುಖ್ಯರಸ್ತೆಯ ತನಕ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
‘ಗಂಗೊಳ್ಳಿ ಗ್ರಾಮಸ್ಥರ ಬಹುಬೇಡಿಕೆಯ ರಿಂಗ್ ರೋಡ್ ಸಂಪೂರ್ಣವಾಗಿ ಕೆಸರುಮಯವಾಗಿದ್ದು, ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ವಾಹನಗಳು ಕೆಸರಿನಲ್ಲಿ ಹುಗಿದುಕೊಳ್ಳುತ್ತಿದ್ದು, ತುರ್ತು ಸಂದರ್ಭದಲ್ಲಿ ರಿಕ್ಷಾ ಮತ್ತಿತರ ವಾಹನಗಳು ಈ ರಸ್ತೆ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿವೆ. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದ ಗಂಗೊಳ್ಳಿಯ ದಾಕುಹಿತ್ಲು, ಗುಡ್ಡೆಕೇರಿ, ತಾರಿಮನೆ ಪರಿಸರದ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು, ರಸ್ತೆ ದುರಸ್ಥಿಪಡಿಸಿ ಶಾಶ್ವತ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಬೇಕು.
-ಸುರೇಂದ್ರ ಖಾರ್ವಿ, ಮಾಜಿ ತಾಪಂ ಸದಸ್ಯ ಗಂಗೊಳ್ಳಿ