ಉಡುಪಿ, ಸೆ.7: ಪ್ರಥಮ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಸಚಿವ ಸಂಪುಟದ ಮುಂದೆ ಮಂಡಿಸಲು ಕರಾವಳಿ ಭಾಗದಲ್ಲಿ ಹಮ್ಮಿಕೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ನೀಲಿನಕ್ಷೆಯನ್ನು ಕ್ರೋಡೀಕರಿಸಬೇಕಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪಕ್ಷದ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಗ್ರಾಮಾಂತರಗಳಲ್ಲಿ ಯುವ ಶಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ ಜೋಡೊ ದಂತಹ ಸಂಘಟನೆ ಅತೀ ಮುಖ್ಯ ಸರಕಾರ ಈ ಸಂಘಟನೆಗೆ ಪ್ರತೀ ವರ್ಷ 10ಲಕ್ಷದವರೆಗೆ ಅನುದಾನವನ್ನು ನೀಡಿ ಯುವಕರನ್ನು ಸಮಾಜ ಸೇವೆ ಹಾಗೂ ಸಂಸ್ಕೃತದ ಚಟುವಟಿಕೆಗಳಿಗೆ ತೊಡಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುತ್ತದೆ. ಗ್ರಾಮೀಣ ಭಾಗದ ಯುವಕರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಂಡು ಉದ್ಯೋಗ ಹಾಗೂ ಉದ್ಯಮದ ಹೊಸ ಅವಕಾಶಗಳೊಂದಿಗೆ ಸಂಪರ್ಕ ಹೊಂದಲು ಇದು ಉತ್ತಮ ವೇದಿಕೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ದೂಷಣೆ ಮಾಡುತ್ತಾ ಬಿಜೆಪಿ ತನ್ನ ಆಡಳಿತದ ರಾಜ್ಯಗಳಲ್ಲಿ ಆ ಯೋಜನೆಯನ್ನು ಜಾರಿಗೊಳಿಸುತ್ತಿದೆ. ರಾಜ್ಯದಲ್ಲಿ ಗ್ಯ್ಜಾಂಟಿಗಳ ಬಗ್ಗೆ ಜನರಲ್ಲಿ ಸಂಶಯದ ಬೀಜ ಬಿತ್ತುವುದೇ ಬಿಜೆಪಿಯ ಉದ್ದೇಶವಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ಪೂರಕವಾದ ಈ ಯೋಜನೆಗಳು ಗ್ರಾಮಗಳಿಗೆ ತಲುಪಲು ಗ್ರಾಮಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಬೇಕಾಗಿದೆ ಎಂದರು.

ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ದಿನೇಶ್ ಮಳವಳ್ಳಿ, ಹರೀಶ್ ಕಿಣಿ, ರೋಶನಿ ಒಲಿವರಾ, ದಿನೇಶ್ ಪುತ್ರನ್, ಮೀನಾಕ್ಷಿ ಮಾಧವ ಬನ್ನಂಜೆ, ಹರಿಪ್ರಸಾದ್ ರೈ, ಬ್ಲಾಕ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್ ಗೋಪಿನಾಥ್ ಭಟ್, ವೈ.ಸುಕುಮಾರ್, ಸಂತೋಷ್ ಕುಲಾಲ್, ಸುಭೋದ ರಾವ್ ಕಾರ್ಕಳ, ಮದನ್ ಕುಮಾರ್, ಮಹಾಬಲ ಕುಂದರ್, ನವೀನ್ ಚಂದ್ರ ಸುವರ್ಣ, ಆನಂದ ಪೂಜಾರಿ ಬೈಂದೂರ್, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಗೋಪಾಲ ಬಂಗೇರ ಕೋಟ, ರೋಶನ್ ಶೆಟ್ಟಿ, ಜಯ ಕುಮಾರ್, ಲಕ್ಷೀಶ ಶೆಟ್ಟಿ, ಅಶೋಕ್ ಕುಮಾರ್ ಎರ್ಮಾಳ್, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.

ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿದರು. ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor