ಪುತ್ತಿಗೆ ಪರ್ಯಾಯಕ್ಕೆ ಜ.14ರಂದು ಹೊರೆ ಕಾಣಿಕೆ ಸಮರ್ಪಣೆ: ಎಂ.ಎನ್.ರಾಜೇಂದ್ರ ಕುಮಾರ್
ಉಡುಪಿ, ಡಿ.2: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಇಂದು ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರಿಗೆ ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿ ಮನವಿ ಮತ್ತು ಶ್ರೀಗಳಿಂದ ಅಧಿಕೃತ ಸಮಿತಿಯ ಮಹಾ ಪೋಷಕತ್ವ ಪತ್ರವನ್ನು ಮಠದ ದಿವಾನ ನಾಗರಾಜ ಆಚಾರ್ಯ ಹಸ್ತಾಂತರಿಸಿದರು.
ಅದಕ್ಕೆ ಸ್ಪಂದಿಸಿದ ಅವರು ಜ.14ರ ಮಕರ ಸಂಕ್ರಾತಿಯಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ತಮ್ಮ ಸಹಕಾರಿ ಸಂಘ ಹಾಗೂ ನವೋದಯ ಸ್ವಸಹಾಯ ಸಂಘಗಳ ಮೂಲಕ ಸುಮಾರು 5000ಕ್ಕೂ ಮೇಲ್ಪಟ್ಟ ಸದಸ್ಯರನ್ನೊಳಗೊಂಡ ಬೃಹತ್ ಹೊರೆ ಕಾಣಿಕೆಯನ್ನು ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಅರ್ಪಿಸಲಾಗುವುದು. ಅಲ್ಲದೆ ಪುತ್ತಿಗೆ ಪರ್ಯಾಯಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಂಜನ್ ಕಲ್ಕೂರ ಹಾಗೂ ಸಂಚಾಲಕ ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಭಟ್ ಕೆ., ರವೀಂದ್ರ ಆಚಾರ್ಯ, ಜಿ .ವಿ.ಆಚಾರ್ಯ ಉಪಸ್ಥಿತರಿದ್ದರು.