×
Ad

ಡಿಜಿಟಲ್ ಆ್ಯಪ್ ಆಧಾರಿತ ಆಟೋಗೆ ಸರಕಾರದ ಪರವಾನಿಗೆ ಕಡ್ಡಾಯ: ಉಡುಪಿ ಡಿಸಿ ಸ್ವರೂಪಾ

ʼಸಾಧಕ-ಬಾಧಕ ಚರ್ಚಿಸಿ ಅನುಷ್ಠಾನʼ

Update: 2026-02-02 19:55 IST

ಉಡುಪಿ, ಫೆ.2: ಉಡುಪಿ ನಗರ ವ್ಯಾಪ್ತಿಯಲ್ಲಿ ಡಿಜಿಟಲ್ ಆ್ಯಪ್ ಆಧಾರಿತ ಆಟೋರಿಕ್ಷಾಗಳಲ್ಲಿ ಸಾರ್ವಜನಿಕ ಸಾಗಾಣಿಕೆಗೆ ಸರಕಾರದ ಪರವಾನಿಗೆ ಪತ್ರ ಪಡೆಯುವುದು ಕಡ್ಡಾಯ. ಸರಿಯಾದ ಪರವಾನಿಗೆ ಹೊಂದಿದ್ದಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ, ಚಲಾಯಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ನಮ್ಮ ಯಾತ್ರಿ ಆ್ಯಪ್ ಹಾಗೂ ರ್ಯಾಪಿಡ್ ಆ್ಯಪ್ ಆಟೋ ಸಂಚಾರ ಕುರಿತು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೋಮವಾರ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ನಗರ ವ್ಯಾಪ್ತಿಯ ಮಣಿಪಾಲದಲ್ಲಿ ಡಿಜಿಟಲ್ ಆ್ಯಪ್ ಆಧಾರಿತ ಬಾಡಿಗೆ ಆಟೋಗಳ ಚಾಲನೆಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಡಿಜಿಟಲ್ ಆ್ಯಪ್ ಆಧಾರಿತ ಕೆಲವು ಸಂಸ್ಥೆಗಳು ಸೇವೆಗಳನ್ನು ಒದಗಿಸು ತ್ತಿವೆ. ಈ ಬಗ್ಗೆ ಸರಕಾರದ ಪರವಾನಿಗೆ ಸೇರಿದಂತೆ ಇತರೆಲ್ಲಾ ದಾಖಲೆಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಹಾಜರು ಪಡಿಸಿದ್ದಲ್ಲಿ ಸ್ಥಳೀಯ ಆಟೋ ಚಾಲಕರ ಯೂನಿಯನ್‌ಗಳ ಪದಾಧಿಕಾರಿಗಳು ಹಾಗೂ ಆ್ಯಪ್ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಾಧಕ- ಬಾಧಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಉಡುಪಿ ನಗರದ ವಲಯ-1ರಲ್ಲಿ ಸುಮಾರು 4000ಕ್ಕೂ ಅಧಿಕ ಆಟೋರಿಕ್ಷಾಗಳು ನೋಂದಣಿ ಮಾಡಿಕೊಂಡು ಸಂಚರಿಸುತ್ತಿವೆ. ಅಟೋ ನಿಲ್ದಾಣಗಳಲ್ಲಿ ಚಾಲಕರು ಸರತಿ ಸಾಲಿನ ಅನ್ವಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ಹಲವು ವರ್ಷಗಳಿಂದ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದ ಜಿಲ್ಲಾಧಿಕಾರಿ,ಪ್ರಸ್ತುತ ಚಾಲನೆಯಲ್ಲಿರುವ ಪ್ರತಿಯೊಂದು ಆಟೋಗಳು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಂಡು ಚಲಿಸಬೇಕು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರ ಭಾಗದಲ್ಲಿ ಜನರ ಹಾಗೂ ಪ್ರವಾಸಿಗರ ಬೇಡಿಕೆ ಮತ್ತು ಆಟೋ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಮಾಡಲು ಅವಕಾಶ ನೀಡಬೇಕು. ಆಟೋರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾ ಚಾಲಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಗಮನಹರಿಸಬೇಕು. ಡಿಜಿಟಲ್ ಆ್ಯಪ್ ಆಧಾರಿತ ಆಟೋ ಸಂಚಾರ ದಿಂದ ನಗರದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ಆಟೋ ಚಾಲನೆ ಮಾಡಿ, ಜೀವನೋಪಾಯ ನಡೆಸುತ್ತಿರುವವರಿಗೆ ಉಂಟಾಗುವ ಸಮಸ್ಯೆ ಗಳನ್ನು ಚರ್ಚಿಸಿ, ನಂತರ ಡಿಜಿಟಲ್ ಆ್ಯಪ್ ಆಟೋ ಸಂಚಾರಕ್ಕೆ ಅವಕಾಶ ನೀಡಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಡಿಜಿಟಲ್ ಆ್ಯಪ್ ಬೇಸ್ಡ್ ಅಟೋ ಸಂಚಾರವನ್ನು ಅಭಿವೃದ್ಧಿಗೊಳಿಸಿದಾಗ ಅದರಿಂದ ಇತರೆ ಆಟೋ ಚಾಲಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ವಲಯ-2 ರಲ್ಲಿ ಪರವಾನಿಗೆ ಪಡೆದು ನಗರ ವ್ಯಾಪ್ತಿಯಲ್ಲಿ ಆಟೋ ಚಾಲನೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಟೋ ನಿಲ್ದಾಣಗಳಲ್ಲಿ ಈ ಹಿಂದೆ ನೋಂದಣಿ ಹೊಂದಿದವರಿಗೆ ಮಾತ್ರ ಅವಕಾಶ ಇದೆ. ನಿಲ್ದಾಣ ಹೊಂದದೇ ಇರುವ ಅಟೋ ಚಾಲಕರು ನೋಂದಣಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಲ್ಲಿನ ಆಟೋ ದಟ್ಟಣಿಕೆ ನೋಡಿ ನಗರ ಸಭೆಯ ಪೌರಾಯುಕ್ತರೊಂದಿಗೆ ಚರ್ಚಿಸಿ ಅನುಮತಿ ನೀಡಲಾಗುವುದು ಎಂದರು.

ಸಭೆಯಲ್ಲಿ ಆಟೋರಿಕ್ಷಾ ಚಾಲಕರು, ಆ್ಯಪ್ ಬೇಸ್ಡ್ ಆಟೋ ಸಂಚಾರ ದಿಂದ ಇತರೆ ಆಟೋ ಚಾಲಕರಿಗೆ ಉಂಟಾ ಗುವ ಸಮಸ್ಯೆಗಳ ಬಗ್ಗೆ, ಆಟೋ ರಿಕ್ಷಾ ವಲಯ-1, ವಲಯ-2ರಲ್ಲಿ ಸಂಚರಿಸುವ ಕುರಿತು ಸರಳವಾಗಿ ಗುರುತಿಸಲು, ಕಲರ್ ಕೋಡಿಂಗ್ ಅಳವಡಿಕೆ ಕುರಿತು ಹಾಗೂ ಆಟೋ ನಿಲ್ದಾಣದಲ್ಲಿ ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸುವ ಬಗ್ಗೆ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಂತೋಷ್ ಶೆಟ್ಟಿ, ಆಟೋರಿಕ್ಷಾ ಯೂನಿಯನ್ ಪದಾಧಿಕಾರಿ ಗಳು, ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು, ನಮ್ಮ ಯಾತ್ರಿ ಹಾಗೂ ರ್ಯಾಪಿಡ್ ಆ್ಯಪ್ ಸಂಸ್ಥೆ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪರವಾನಿಗೆ ನೀಡಿಲ್ಲ: ಎಸ್ಪಿ

ಜಿಲ್ಲೆಯಲ್ಲಿ ಇದುವರೆಗೆ ಡಿಜಿಟಲ್ ಆ್ಯಪ್ ಆಧಾರಿತ ರಿಕ್ಷಾ ಚಲಾವಣೆಗೆ ಯಾರೂ ಅನುಮತಿಯನ್ನು ಕೋರಿಲ್ಲ. ಹಾಗೂ ಯಾರಿಗೂ ಪರವಾನಿಗೆ ಯನ್ನೂ ನೀಡಿಲ್ಲ. ಎಲ್ಲಾ ರೀತಿಯ ಪರವಾನಿಗೆಯನ್ನು ಪಡೆಯುವವರೆಗೆ ಅಟೋ ಹಾಗೂ ಬೈಕ್ ಆ್ಯಪ್ ಮೂಲಕ ನಡೆಯುತ್ತಿರುವ ಎಲ್ಲವನ್ನೂ ತಡೆಹಿಡಿಯುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News