ಭಾರತದ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಹಿರಿಮೆ: ಡಾ.ಮೋಹನ್ ಆಳ್ವ
ಬ್ರಹ್ಮಾವರ, ಜ.28: ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮವು ಮನರಂಜನೆ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಬೇಕೆಂಬ ಸಂದೇಶವನ್ನು ನೀಡಲಾಗುತ್ತಿದೆ. ಭಾರತದಲ್ಲಿರುವಷ್ಟು ಮಾನವ ಸಂಪತ್ತು ಯಾವ ದೇಶದಲ್ಲೂ ಇಲ್ಲ. ನಮ್ಮ ದೇಶವನ್ನು ಸಾಂಸ್ಕೃತಿಕ ಚಟುವಟಿಕೆಯಿಂದಲೂ ಗುರುತಿಸಲಾಗುತ್ತಿದ್ದು, ದೇಶದ ಸಾಂಸ್ಕೃತಿಕ ಚಟುವಟಿಕೆಗೆ ಸಾಕಷ್ಟು ಹಿರಿಮೆ ಇದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದ್ದಾರೆ.
ಆಳ್ವಾಸ್ ನುಡಿಸಿರಿ ವಿರಾಸತ್ ಬ್ರಹ್ಮಾವರ ಘಟಕ ಮತ್ತು ಬ್ರಹ್ಮಾವರ ಫೌಂಡೇಶನ್ ಆಶ್ರಯದಲ್ಲಿ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಕೀರ್ತಿ ಶೇಷ ಡಾ.ಬಿ.ಬಿ.ಶೆಟ್ಟಿ ವೇದಿಕೆಯಲ್ಲಿ ಮಂಗಳವಾರ ನಡೆದ ಆಳ್ವಾಸ್ ಸಾಂಸ್ಕ್ರತಿಕ ವೈಭವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಾಗರೀಕತೆ ಬಂದು ಐದು ಸಾವಿರ ವರ್ಷಗಳಾಗಿವೆ. ಈ ನಾಗರೀಕತೆಯ ಕಾಲದಲ್ಲಿ ಸುಮಾರು 36 ಸಾವಿರ ರಾಗ ಗಳನ್ನು ಕಂಡು ಹಿಡಿಯಲಾಗಿದೆ. ಅದಕ್ಕೆ ಪೂರಕವಾಗಿ ಸಾಕಷ್ಟು ವಾದ್ಯ ಪರಿಕರಗಳನ್ನು ಕೂಡ ಕಂಡು ಹಿಡಿಯಲಾ ಗಿದೆ. ಈ ಎಲ್ಲವನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆಳ್ವಾಸ್ ನುಡಿಸಿರಿ ವಿರಾಸತ್ನ ಒಟ್ಟು 88 ಘಟಕಗಳನ್ನು ಮಾಡಿದ್ದು ಭಾರತದ ಸಾಂಸ್ಕೃತಿಕ ವೈಭವವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ, ಶಿಸ್ತು ಮತ್ತು ವಿಭಿನ್ನತೆಯು ಆಳ್ವಾಸ್ ನುಡಿಸಿರಿ ಕಾರ್ಯ ಕ್ರಮದ ಯಶಸ್ಸಿಗೆ ಕಾರಣವಾಗಿದೆ. ಸಂಸ್ಥೆಯ 35 ಸಾವಿರ ವಿದ್ಯಾರ್ಥಿಗಳಲ್ಲಿ ಆಸಕ್ತ ರನ್ನು ಶಿಸ್ತುಬದ್ದ ಕಲಾಶಿಲ್ಪಿಗಳನ್ನಾಗಿ ತಯಾರಿಸಿದ ಕೀರ್ತಿ ಮೋಹನ್ ಆಳ್ವರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ಮತ್ತು ಚಿಂತಕಿ ಡಾ.ನಿಕೇತನ, ಆರೂರು ತಿಮ್ಮಪ್ಪ ಶೆಟ್ಟಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಅಧ್ಯಕ್ಷ ಉದಯ್ ಹೆಗ್ಡೆ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಅಶೋಕ ಭಟ್, ಉದ್ಯಮಿ ಶಾಂತಾರಾಮ ಶೆಟ್ಟಿ ಬಾರಕೂರು, ಜಿಪಂ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಬಿಲ್ಲವ ಮಹಾಮಂಡಲದ ರಾಷ್ಟ್ರೀಯ ಉಪಾಧ್ಯಕ್ಷ ಬಿ. ಎನ್.ಶಂಕರ ಪೂಜಾರಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಎಚ್. ಸುದರ್ಶನ್ ಹೆಗ್ಡೆ, ಬಾರಕೂರು ಕಚ್ಚೂರು ಶ್ರೀಕ್ಷೇತ್ರದ ಗೊಕುಲ್ದಾಸ್ ಬಾರಕೂರು, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ, ಜಿ.ಎಂ.ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರಿ, ಬ್ರಹ್ಮಾವರ ಲಯನ್ಸ್ ಅಧ್ಯಕ್ಷ ಕೆ.ಸುದೇಶ್ ಹೆಗ್ಡೆ, ಎಸ್ಎಂಎಸ್ ಕೆಥೆಡ್ರಲ್ ಸಹಾಯಕ ಗುರು ಫಾ.ಡೇವಿಡ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಫೌಂಡೇಶನ್ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿ ವಂದಿಸಿದರು.