ಜ.4: ಉಡುಪಿಯಲ್ಲಿ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವ
ಉಡುಪಿ, ಜ.2: ಉಡುಪಿಯ ರಂಜನಿ ಮೆಮೋರಿಯಲ್, ಸೈ ಆರ್ಟ್ ಸರ್ವಿಸಸ್ ಅಮೇರಿಕ, ಮಣಿ ಕೃಷ್ಣಸ್ವಾಮಿ ಅಕಾಡೆಮಿ, ರಾಗಧನ ಉಡುಪಿ, ಸರಿಗಮ ಭಾರತಿ ಸಂಗೀತ ಶಾಲೆ ಪರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಾದ ಊತ್ತುಕ್ಕಾಡು ವೆಂಕಟ ಕವಿ ಅವರ ಆರಾಧನೋತ್ಸವನ್ನು ಇದೇ ಜ.4ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದೆ.
ಜ.4ರ ರವಿವಾರ ಅಪರಾಹ್ನ 1:00ರಿಂದ ರಾತ್ರಿ 8:00ಗಂಟೆಯವೆರೆಗೆ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುವುದು ಎಂದು ರಂಜನಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಪ್ರೊ.ವಿ.ಅರವಿಂದ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಊತ್ತುಕ್ಕಾಡು ವೆಂಕಟ ಕವಿ ಅವರ ಕೃತಿಗಳನ್ನು ಜನಪ್ರಿಯಗೊಳಿಸುವ ಯೋಜನೆಯನ್ನು ಅವಿರತವಾಗಿ ನಾಡಿನ ವಿವಿದೆಡೆ ಆಯೋಜಿಸಿಕೊಂಡು ಬರುತ್ತಿರುವ ಸಂಗೀತ ಸಾಮ್ರಾಟ್ ಚಿತ್ರವೀಣಾ ಎನ್ ರವಿಕಿರಣ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಉಡುಪಿ -ದಕ್ಷಿಣ ಕನ್ನಡ ಜಿಲ್ಲೆಗಳ 21 ಯುವ ಕಲಾವಿದರು ಮತ್ತು ಅಮೆರಿಕದಲ್ಲಿ ನೆಲೆಸಿರುವ 8 ಮಂದಿ ಯುವ ಕಲಾವಿದರು ಉತ್ತುಕ್ಕಾಡು ವೆಂಕಟಕವಿ ಅವರ ಕೃತಿಗಳನ್ನು ಪ್ರಸ್ತುತ ಪಡಿಸುವರು ಎಂದರು.
ಸಂಜೆ 4:30ರಿಂದ ಊತ್ತುಕ್ಕಾಡು ಅವರ ಸುಪ್ರಸಿದ್ದ ಸಪ್ತರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ. ಬಳಿಕ ನಡೆಯಲಿರುವ ಸರಳ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರವೀಣಾ ಕಲಾವಿದ ಎನ್. ರವಿಕಿರಣ್ ಅವರನ್ನು ಗೌರವಿಸಲಾಗುವುದು. ಕೊನೆಯಲ್ಲಿ ಚಿತ್ರವೀಣಾ ಎನ್ ರವಿಕಿರಣ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಎನ್.ರವಿಕಿರಣ್ ಅವರಿಗೆ ವಯಲಿನ್ನಲ್ಲಿ ಸಂಜಯ್ ಸುರೇಶ್ ಹಾಗೂ ಮೃದಂಗದಲ್ಲಿ ತುಮಕೂರು ಬಿ ರವಿಶಂಕರ್ ಸಹಕರಿಸಲಿರುವರು ಎಂದು ವಿ.ಅರವಿಂದ ಹೆಬ್ಬಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್, ಶ್ರೀವಿಭು ರಾವ್, ರಾಗಧನ ಸಂಸ್ಥೆಯ ಅಧ್ಯಕ್ಷ ಡಾ. ಕಿರಣ್ ಹೆಬ್ಬಾರ್, ಖಜಾಂಚಿ ಪ್ರೊ ಕೆ ಸದಾಶಿವ ರಾವ್, ಸರಿಗಮ ಭಾರತಿ ಸಂಸ್ಥೆಯ ಅಧ್ಯಕ್ಷೆ ಉಮಾಶಂಕರಿ ಉಪಸ್ಥಿತರಿದ್ದರು.