ಕಟಪಾಡಿ ವೆಹಿಕಲ್ ಓವರ್ಪಾಸ್ ಕಾಮಗಾರಿ : ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ
ಸಾಂದರ್ಭಿಕ ಚಿತ್ರ
ಉಡುಪಿ, ನ.12: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೂತನವಾಗಿ ನಿರ್ಮಾಣ ಗೊಳ್ಳಲಿರುವ ಕಟಪಾಡಿ ವೆಹಿಕಲ್ ಓವರ್ಪಾಸ್ ಕಾಮಗಾರಿಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ)(2)(5)ರನ್ವಯ ರಾ.ಹೆ. 66ರ ಕಟಪಾಡಿ ಜಂಕ್ಷನ್ ನಲ್ಲಿ ವೆಹಿಕಲ್ ಓವರ್ಪಾಸ್ ಕಾಮಗಾರಿ ಪೂರ್ಣ ಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಕಂಡಂತೆ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಇನ್ನು ಮುಂದೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಘನ ಹಾಗೂ ಇತರೆ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗದಿಪಡಿಸಿದ ಟ್ರ್ಯಾಕ್ನಲ್ಲಿ ಸಾಗಬೇಕು. ಅದೇ ರೀತಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಘನ ಹಾಗೂ ಇತರ ಸರಕು ಸಾಗಾಟ ವಾಹನಗಳು ಸಹ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗದಿಪಡಿಸಿದ ಟ್ರ್ಯಾಕ್ನಲ್ಲಿ ಸಾಗಬೇಕು.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುವ ಎಕ್ಸ್ಪ್ರೆಸ್ ಹಾಗೂ ಶಟಲ್ ಬಸ್ಗಳು, ಇತರ ಖಾಸಗಿ ವಾಹನಗಳು ಮತ್ತು ಸಾರ್ವಜನಿಕ ವಾಹನಗಳು ಕಲ್ಲಾಪು ಮೂಲಕ ಕಟಪಾಡಿ ಪೇಟೆಗೆ ಬಂದು ಜನರನ್ನು ಇಳಿಸಿ/ ಹತ್ತಿಸಿಕೊಂಡು ಫಾರೆಸ್ಟ್ ಗೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 66ನ್ನು ಸೇರಬೇಕು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು/ ಟ್ರಕ್ ಗಳು ಮೂಡುಬೆಳ್ಳೆ- ದೆಂದೂರುಕಟ್ಟೆ- ಅಲೆವೂರು ಮಾರ್ಗವಾಗಿ ಉಡುಪಿಯತ್ತ ಸಂಚರಿಸಬೇಕು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ದ್ವಿಚಕ್ರ, ತ್ರಿಚಕ್ರ ಮತ್ತು ಲಘು ವಾಹನಗಳು ಉಡುಪಿ-ಮಂಗಳೂರು ಸರ್ವಿಸ್ ರಸ್ತೆಯಲ್ಲಿ ಸಾಗಿ ಮುಂದೆ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು-ಉಡುಪಿ ರಸ್ತೆ ಸೇರಲು ತೆರೆಯುವ ಮೀಡಿಯನ್ನಲ್ಲಿ ಹೆದ್ದಾರಿ ಪ್ರವೇಶಿಸಿ, ಉಡುಪಿಗೆ ತೆರಳಬೇಕು.
ಮಟ್ಟು ಕಡೆಯಿಂದ ಉಡುಪಿ ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕ ಫಾರೆಸ್ಟ್ ಗೇಟ್ ಬಳಿ ತಲುಪಿ ಮಂಗಳೂರು-ಉಡುಪಿ ಹೆದ್ದಾರಿಯನ್ನು ಸೇರಿ ಉಡುಪಿ ಕಡೆಗೆ ತೆರಳಬೇಕು.
ಮಟ್ಟು ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕವಾಗಿ ಫಾರೆಸ್ಟ್ ಗೇಟ್ ಬಳಿ ತಲುಪಿ ಇಲ್ಲಿ ತೆರೆದಿರುವ ಮೀಡಿಯನ್ ಮೂಲಕ ಉಡುಪಿ-ಮಂಗಳೂರು ಹೆದ್ದಾರಿ ಸರ್ವಿಸ್ ರಸ್ತೆಯನ್ನು ಸೇರಿ ಮಂಗಳೂರು ಕಡೆಗೆ ತೆರಳಬೇಕು.
ಮಂಗಳೂರು ವಿಮಾನ ನಿಲ್ದಾಣಕ್ಕೆ ತುರ್ತು ಹೋಗುವ ವಾಹನಗಳು ಕಟಪಾಡಿ ಮಾರ್ಗವನ್ನು ಹೊರತುಪಡಿಸಿ ಬೇರೆ ರಸ್ತೆ/ ಮಾರ್ಗದಲ್ಲಿ ಸಾಗುವುದಕ್ಕೆ ಪ್ರಾಶಸ್ತ್ಯ ನೀಡಬೇಕು.
ಕಾಮಗಾರಿ ನಡೆಯುವ ಸ್ಥಳದಿಂದ ಮಂಗಳೂರು ರಸ್ತೆ, ಉಡುಪಿ ರಸ್ತೆ, ಮಟ್ಟು ರಸ್ತೆ ಹಾಗೂ ಶಿರ್ವ ರಸ್ತೆಯಲ್ಲಿ 100ಮೀ. ದೂರದವರೆಗೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.