ಕಾರ್ಕಳ : ಬೃಹತ್ ಉದ್ಯೋಗ ಸಂದರ್ಶನ "ವಿಕಾಸ ಉದ್ಯೋಗ ಸೇತು"ಗೆ ಚಾಲನೆ
ಕಾರ್ಕಳ: ಕಾರ್ಕಳ ವಿಕಾಸ ಸೇವಾ ಸಂಸ್ಥೆ ಆಶ್ರಯದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಚೇರಿ 'ವಿಕಾಸ'ದ ಸಭಾಂಗಣದಲ್ಲಿ "ವಿಕಾಸ ಉದ್ಯೋಗ ಸೇತು" ಕಾರ್ಯಕ್ರಮವನ್ನು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕೆಲಸಕ್ಕಾಗಿ ಕಂಪನಿಗಳೊಂದಿಗೆ ಬೆಸೆಯುವ ಉದ್ಯೋಗ ಸೇತು ಕಾರ್ಯಕ್ರಮ ಇದಾಗಿದೆ. ಈ ಉದ್ಯೋಗ ಸಂದರ್ಶನ ಕಾರ್ಯಕ್ರಮ ಕೇವಲ ಇವತ್ತಿಗೆ ಮಾತ್ರ ಸೀಮಿತವಾಗಿರದೆ, ಪ್ರತಿ ತಿಂಗಳು ಉದ್ಯೋಗ ಸೇತು ನಿರಂತರವಾಗಿ ನಡೆಯಲಿದೆ.
ಒಬ್ಬನಿಗೆ ಉದ್ಯೋಗ ಸಿಕ್ಕಿದರೆ ಆತನಿಗೆ ಮಾತ್ರವಲ್ಲ, ಇಡೀ ಕುಟುಂಬವೇ ಚೆನ್ನಾಗಾಗುತ್ತದೆ. ಮುಂದೆಯೂ ವಿವಿಧ ಉದ್ಯೋಗಗಳಿಗೆ ನಡೆಯುವ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗಾಗಿ "ವಿಕಾಸ ಪರೀಕ್ಷಾ ಸೇತು" ಕಾರ್ಯಕ್ರಮಗಳನ್ನು ವಿಕಾಸ ಕಚೇರಿಯಲ್ಲಿ ಸಂದರ್ಭಾನುಸಾರ ನಡೆಸಲಾಗುವುದು. ವಿದ್ಯಾರ್ಥಿಗಳು ಜೀವನದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳದೆ ಆತ್ಮವಿಶ್ವಾಸದ ಮೂಲಕ ಸಂದರ್ಶನವನ್ನು ಎದುರಿಸಿ, ಹಿರಿಯರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತಾಗಲಿ. ಈ ಕಾರ್ಯಕ್ರಮದ ಮೂಲಕ ಕೆಲಸ ಪಡೆದು, ಕೆಲಸದಲ್ಲಿ ಅನುಭವ ಪಡೆಯುವಂತಾಗಲಿ. ಆ ಮೂಲಕ ನಮ್ಮ ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳ ಪರಿಕಲ್ಪನೆ ಪರಿಪೂರ್ಣಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಉದ್ಯಮಿ ಗಣೇಶ ಕಾಮತ್, ಬಿಜೆಪಿ ಮುಖ್ಯಸ್ಥ ಮಣಿರಾಜ್ ಶೆಟ್ಟಿ, ರಾಜೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಕಾರ್ಕಳ ಮಂಡಳ ಅಧ್ಯಕ್ಷ ನವೀನ್ ನಾಯ್ಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಸ್ಪೆಕ್ಟ್ರಾಮ್ ಕಂಪನಿ ಮುಖ್ಯಸ್ಥ ದಿವಾಕರ್ ಹಾಗೂ ಫಾಕ್ಸ್ಕಾನ್ ಕಂಪನಿ ಮುಖ್ಯಸ್ಥೆ ರಾಜೇಶ್ವರಿ ಉಪಸ್ಥಿತರಿದ್ದರು.