ಯುವಪೀಳಿಗೆಯಲ್ಲಿ ಓದುವ ಹವ್ಯಾಸ ಬೆಳೆಸೋಣ: ಫಕೀರ್ ಮುಹಮ್ಮದ್
ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಪಡುಬಿದ್ರೆ, ನ.16: ನಮ್ಮ ಇಂದಿನ ಯುವ ಪೀಳಿಗೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸೋಣ, ಕನ್ನಡದ ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಇಂಗ್ಲಿಷ್ನ್ನು ಕಲಿಯೋಣ ಎಂದು ಸಾಹಿತಿ, ಕಥೆೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಕರೆ ನೀಡಿದ್ದಾರೆ.
ಹೆಜಮಾಡಿಯ ಬಿಲ್ಲವರ ಸಂಘದ ಸಭಾ ಭವನದಲ್ಲಿ ಎರಡು ದಿನಗಳ ಕಾಲ ನಡೆದ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯನ್ನು ವಹಿಸಿದ್ದ ಅವರು, ಶನಿವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶವಾದ ಹೆಜಮಾಡಿಯಲ್ಲಿ ಹಮ್ಮಿಕೊಂಡ ಸಮ್ಮೇಳನದ ಸಂಯೋಜನೆ ಯಶಸ್ವಿಯಾಗಿದೆ. ಸಾಹಿತ್ಯದ ಅಭಿಮಾನ ಇಲ್ಲಿನ ಜನತೆಯಲ್ಲಿ ಇನ್ನೂ ಹಸಿರಾಗಿದೆ. ಸಾಹಿತ್ಯವನ್ನು ಬೆಳೆಸುವಲ್ಲಿ ಜವಾಬ್ದಾರಿಗಳು ಇನ್ನೂ ಇದೆ. ಸಾಹಿತ್ಯ ವೇದಿಕೆಯ ಸ್ಥಾಪನೆಯಾಗಬೇಕು. ಇಂದಿನ ಜನಾಂಗದಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದವರು ಹೇಳಿದರು.
ಹಿರಿಯ ಸಾಹಿತಿ ಮನೋರಮಾ ಹೆಜಮಾಡಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಪ್ರೀತಿಪ್ರದವಾದ ಸಾಹಿತ್ಯ ದಾಸ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯ ಸಮ್ಮೇಳನಗಳು ವಿವಿಧ ಗೋಷ್ಠಿಗಳ ಮೂಲಕ ಎಲ್ಲರನ್ನೂ ಸಾಹಿತ್ಯ ರಂಗದಲ್ಲಿ ಜೀವಂತವಾಗಿರಿಸಿವೆ ಎಂದರು.
ಈ ಸಂದರ್ಭ ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ದಾಸ್ ಹೆಜಮಾಡಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ದಯಾನಂದ ಹೆಜಮಾಡಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಮಂಜುಳಾ ಶೆಟ್ಟಿ, ನೀಲಾನಂದ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ :
ಸಾಧಕ ಸಂಸ್ಥೆಯಾದ ಹೆಜಮಾಡಿ ಬಿಲ್ಲವರ ಸಂಘ, ಸಾಧಕರಾದ ಗಣೇಶ್ ರಾವ್ ಎಲ್ಲೂರು (ರಂಗಭೂಮಿ), ಉಚ್ಚಿಲ ಬಾಲಕೃಷ್ಣ ಪೂಜಾರಿ (ಮಾಧ್ಯಮ), ನಿವೃತ್ತ ಮೆಸ್ಕಾಂ ಅಧಿಕಾರಿ ಎಚ್.ಪರಮೇಶ್ವರ, ವಿ.ಕೆ.ಹೆಜಮಾಡಿ (ಶಿಕ್ಷಣ), ಓಂದಾಸ್ ಕಣ್ಣಂಗಾರ್ ಹೆಜಮಾಡಿ (ಹೊರನಾಡು ಕನ್ನಡ ಸೇವೆ) ಹಾಗೂ ಶಾಂತಾ ಸೇರಿಗಾರ್ ಪಡುಬೆಳ್ಳೆ (ತುಳು ಅಧ್ಯಯನ) ಇವರನ್ನು ಸಮ್ಮಾನಿಸಲಾಯಿತು. ಓಂದಾಸ್ ಕಣ್ಣಂಗಾರ್, ಎಚ್.ಪರಮೇಶ್ವರ್ ಸನ್ಮಾನಕ್ಕುತ್ತರಿಸಿ ಮಾತನಾಡಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಶ್ವೇಶತೀರ್ಥ ಮಹಾ ವಿದ್ಯಾಲಯ ಪಾಜಕ (ಪ್ರಥಮ), ತೃಷಾ ಕಾಲೇಜು ಕಟಪಾಡಿ (ದ್ವಿತೀಯ), ಸೈಂಟ್ ಮೇರೀಸ್ ಪದವಿ ಕಾಲೇಜು, ಕಾಪು ಪ್ರಥಮ ದರ್ಜೆ ಕಾಲೇಜು, ಎಂಎಸ್ಆರ್ಎಸ್ ಶಿರ್ವ (ತೃತೀಯ) ಬಹುಮಾನಗಳನ್ನು ಪಡೆದಿದ್ದು, ಬಹುಮಾನ ವಿತರಿಸಲಾ ಯಿತು.
ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ಹೆಜಮಾಡಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿಯವರನ್ನು ಕಸಾಪ ಕಾಪು ವತಿಯಿಂದ ಗೌರವಿಸಲಾಯಿತು. ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜತೆ ಕಾರ್ಯದರ್ಶಿ ಕೃಷ್ಣಕುಮಾರ್ ಮಟ್ಟು ಸ್ವಾಗತಿಸಿದರು. ಅನಂತ ಮೂಡಿತ್ತಾಯರು ಮನೋರಮಾ ಹೆಜಮಾಡಿಯವರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್ ವಂದಿಸಿದರು.
ವಿಚಾರಗೋಷ್ಠಿಯಲ್ಲಿ ಉಡುಪಿ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಕಥಾ ಸ್ವಾರಸ್ಯ ವಿಷಯದಲ್ಲಿ ವಿಚಾರ ಮಂಡಿಸಿದರು.
ವಿಚಾರಗೋಷ್ಠಿ ಕವಿಗೋಷ್ಠಿ :
ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತ ಕವಯತ್ರಿ ಫಾತಿಮಾ ರಲಿಯಾ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾಷೆಯಲ್ಲಿ ವಸುಂದರಾ ಕೆ.ಟಿ. ಕಾಪು, ಶೃತಿಕಾ ಎರ್ಮಾಳು, ತುಳು ಭಾಷೆಯಲ್ಲಿ ಜೆನೆಟ್ ಜೆ. ಅಮ್ಮಣ್ಣ ಪಾಂಗಾಳಗುಡ್ಡೆ, ಓಂದಾಸ್ ಕಣ್ಣಂಗಾರ್ ಹೆಜಮಾಡಿ, ಬ್ಯಾರಿ ಭಾಷೆಯಲ್ಲಿ ಹಮೀದ್ ಪಡುಬಿದ್ರೆ, ಕೊರಗ ಭಾಷೆಯಲ್ಲಿ ಸತೀಶ್ ಪಡುಬಿದ್ರೆ, ಕೊಂಕಣಿ ಭಾಷೆಯಲ್ಲಿ ಗೀತಾ ವಾಗ್ಲೆ ಬಂಟಕಲ್ಲು ಸ್ವರಚಿತ ಕವನ ವಾಚಿಸಿದರು. ಯಶೋಧಾ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು.