×
Ad

ಕಲೆ ಬೆಳವಣಿಗೆಯಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯ: ಸೋದೆ ಶ್ರೀ

Update: 2023-10-08 18:02 IST

ಉಡುಪಿ, ಅ.8: ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ. ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ. ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ ಎಂದು ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಜರಗಿದ ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕಲಾಸಾಧಕ ಪ್ರಶಸ್ತಿಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ಕೀರ್ತಿಶೇಷ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರ ಕುರಿತು ಮಾತನಾಡಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನವೂ ಸೇರಿದಂತೆ ಎಲ್ಲ ಕಲೆಗಳನ್ನು ಸದ್ದಿಲ್ಲದೆ ಪ್ರೋ ಬಂದವರು. ಅವರು ಮಾಡಿದ ಸತ್ಕಾರ್ಯಗಳಿಂದಾಗಿ ಅವರ ನೆನಪು ಈಗಲೂ ನಮ್ಮ ನಡುವೆ ಜೀವಂತವಾಗಿದೆ ಎಂದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಸರ್ಪಂಗಳ ಯಕ್ಷೋತ್ಸವದ ಆಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ.ಶೈಲಜಾ ಎಸ್., ಡಾ. ನರೇಂದ್ರ ಶೆಣೆ, ಅನಿರುದ್ಧ, ಆವಂತಿಕಾ ಉಪಸ್ಥಿತರಿದ್ದರು. ಬಳಿಕ ತೆಂಕುತಿಟ್ಟಿನ ಕಲಾವಿದರಿಂದ ಸಹಸ್ರಕರ ಯಕ್ಷಗಾನ ಪ್ರದರ್ಶನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News