ಮೈಸೂರು ಚಿತ್ರಗಳ ಕಲಾ ಪ್ರದರ್ಶನಕ್ಕೆ ಚಾಲನೆ
ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿಯೋ, ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ್ ಜುವೆಲ್ಲರ್ಸ್ ಸಹಯೋಗದಲ್ಲಿ ಜನಪದ ಸರಣಿ ಕಲಾ ಕಾರ್ಯಾಗಾರದ 9 ಮತ್ತು 10ನೇ ಆವೃತ್ತಿ ಹಾಗೂ ಗಿಲ್ಡೆಡ್ಡಿವಿನಿಟಿ ಶೀರ್ಷಿಕೆಯ ಮೈಸೂರು ಚಿತ್ರಗಳ ಕಲಾ ಪ್ರದರ್ಶನಕ್ಕೆ ಶನಿವಾರ ಬಡಗುಪೇಟೆಯ ಗ್ಯಾಲರಿಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿ, ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದೆ. ಉಡುಪಿಯ ಪರಿಸರದಲ್ಲಿ ಈ ದೇಶೀಯ ಪರಂಪರೆಯ ಕಲೆಯನ್ನು ಪರಿಚಯಿಸುತ್ತಿರುವುದು ಜೊತೆಗೆ ಸಮಕಾಲೀನ ಸಾಧ್ಯತೆಗಳನ್ನು ಕೂಡ ಪ್ರಾಯೋಗಿಕವಾಗಿ ಸಾಧ್ಯವಾಗುವಂತೆ ನಡೆಸಿಕೊಡುತ್ತಿರುವುದು ಶ್ಲಾಘನೀಯ. ಈ ಎಲ್ಲ ದೇಶೀಯ ಚಿತ್ರ ಪರಂಪರೆಗಳ ಚಿತ್ರಸಂತೆಯೊಂದನ್ನು ಉಡುಪಿಯಲ್ಲಿ ಆಯೋಜಿಸಿದರೆ ಕಲೆ, ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರಕಬಹುದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಈಶಾ ವಾಸ್ಯ ಪ್ರತಿಷ್ಠಾನದ ವಿಶ್ವಸ್ಥ ವಿನ್ ಬನ್ನಂಜೆ ಮಾತನಾಡಿದರು. ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಪ್ರಮುಖ್ ರೈ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಮೈಸೂರು ಚಿತ್ರ ಶೈಲಿ ಹಾಗೂ ಗಂಜೀಪಾ ಚಿತ್ರಕಲೆ ಯನ್ನು ಕಲಿಸಿಕೊಡಲು ಬಂದಿರುವ ಶಶಾಂಕ್ ಭಾರಧ್ವಾಜ್ ಈ ಕಲೆಯ ವೈಶಿಷ್ಟ್ಯತೆಯನ್ನು ತಿಳಿಸಿದರು. ಈ ಎರಡೂ ಕಲೆಗಳ ಕಲಾಪ್ರದರ್ಶನವು ಜ.30ರ ತನಕ ನಡೆಯಲಿದೆ.
ಶ್ರೀರಾಮ, ಕೃಷ್ಣ, ವೆಂಕಟೇಶ, ಗಣಪತಿ, ಶಿವ ಹಾಗೂ ದೇವಿಗೆ ಸಂಬಂಧಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಅಪ ರಾಹ್ನ 3ರಿಂದ 7ರ ತನಕ ಸಾರ್ವಜನಿಕರಿಗೆ ನೋಡಲು ಮತ್ತು ಖರೀದಿಸಲು ಮುಕ್ತ ಅವಕಾಶವಿದೆ ಎಂದು ಸಂಯೋಜಕ ಡಾ.ಜನಾರ್ದನ ಹಾವಂಜೆ ತಿಳಿಸಿದ್ದಾರೆ.