ಶಿರೂರು ದುರಂತ: ಲಾರಿ ಚಾಲಕನ ಪತ್ತೆಗಾಗಿ ಈಶ್ವರ ಮಲ್ಪೆ ತಂಡಕ್ಕೆ ಬುಲಾವ್
ಉಡುಪಿ: ಅಂಕೋಲಾದ ಶಿರೂರಿನಲ್ಲಿ ಮಣ್ಣು ಕುಸಿತ ದುರ್ಘಟನೆಯಲ್ಲಿ ಲಾರಿ ಸಮೇತ ನಾಪತ್ತೆಯಾಗಿದ್ದ ಚಾಲಕನ ಹುಡುಕಾಟಕ್ಕಾಗಿ ಮುಳುಗುತಜ್ಞ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಶಿರೂರಿಗೆ ತೆರಳಲಿದೆ.
ಶಿರೂರಿನಲ್ಲಿ ದುರಂತ ನಡೆದು ಇಂದಿಗೆ ಹತ್ತು ದಿನಗಳು ಕಳೆದು ಹೋಗಿದ್ದು ಈವರೆಗೆ 8 ಜನರ ಮೃತದೇಹ ಪತ್ತೆಯಾಗಿದೆ. ಭಾರತ್ ಬೆಂಝ್ ಲಾರಿ ಜೊತೆಗೆ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ವ್ಯಕ್ತಿಗಳ ಪತ್ತೆ ಇನ್ನೂ ಆಗಿಲ್ಲ.
ಇದೀಗ ಲಾರಿ ಇದೆ ಎಂದು ಶಂಕಿಸಲಾದ ಸ್ಥಳದಲ್ಲಿ ಲಾರಿ ಇರುವಿಕೆಯನ್ನು ಖಾತ್ರಿ ಪಡಿಸಲು ಮತ್ತು ಲಾರಿ ಒಳಗಡೆ ಇರುವ ಚಾಲಕ ಅರ್ಜುನ್ ನನ್ನು ಹೊರತೆಗೆಯಲು ಆಪತ್ಭಾಂಧವ ಈಶ್ವರ್ ಮಲ್ಪೆಯವರಿಗೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಂದ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಅದಕ್ಕಾಗಿ ಈಶ್ವರ್ ಮಲ್ಪೆ ಮತ್ತು ತಂಡ ಇಂದು ಮಧ್ಯರಾತ್ರಿ ಮಲ್ಪೆಯಿಂದ ಹೊರಟು ಬೆಳಗ್ಗೆ ಸುಮಾರು 7:30ಕ್ಕೆ ಶಿರೂರಿನಲ್ಲಿ ಅವಘಡ ನಡೆದ ಸ್ಥಳಕ್ಕೆ ತಲುಪಿ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ.