ಇತಿಹಾಸದ ಬಲೆಗೆ ಸಿಲುಕಿದ ಭಾರತ; ಶೇಖರ ಗುಪ್ತಾ ಕಳವಳ
ಮಣಿಪಾಲ: ಭಾರತ ಇತಿಹಾಸದ ಬಲೆಯೊಳಗೆ ಸಿಲುಕಿ ಕೊಂಡಿರುವ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿರುವ ಭಾರತದ ಖ್ಯಾತನಾಮ ಹಿರಿಯ ಪತ್ರಕರ್ತ, ಸಂಪಾದಕ ಶೇಖರ ಗುಪ್ತಾ, ಸದ್ಯ ವಿಶ್ವದೊಂದಿಗೆ ಹಂಚಿಕೊಳ್ಳಬಲ್ಲ ಯಾವುದೇ ಸಕಾರಾತ್ಮಕ ಸುದ್ದಿ ದೇಶದಲ್ಲಿಲ್ಲ ಎಂದು ಹೇಳಿದ್ದಾರೆ.
ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ವತಿಯಿಂದ ಮಣಿಪಾಲದ ಹೊಟೇಲ್ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಸಭಾಂಗಣದಲ್ಲಿ ಆಯೋಜಿಸಲಾದ ಡಾ.ಎಂ.ವಿ.ಕಾಮತ್ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.
ವಿಶ್ವದಲ್ಲಿ ತನ್ನ ಮಹತ್ವದ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಭಾರತಕ್ಕೆ ಎದುರಾಗಿರುವ ಸವಾಲುಗಳ ಕುರಿತಂತೆ ವಿಷದ ವಾಗಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ಅಂಕಣಕಾರ, ಲೇಖಕ ಹಾಗೂ ಟಿವಿಗಳಲ್ಲಿ ಟಾಕ್ಶೋಗಳನ್ನು ಪ್ರಸ್ತುತ ಪಡಿಸುವ ಶೇಖರ ಗುಪ್ತಾ, ಇದಕ್ಕೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ಕ್ಷೇತ್ರದಲ್ಲಿ ಚುನಾವಣಾ ಲಾಭವನ್ನೇ ದೃಷ್ಟಿಯಲ್ಲಿಟ್ಟು ನಡೆಸುವ ಸಂಯೋಜನಯೇ ಪ್ರಮುಖ ಕಾರಣವೆಂದು ನುಡಿದರು.
ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ನಡೆದ ಆರ್ಥಿಕ ಸುಧಾರಣೆಗಳನ್ನು ವಿಶ್ಲೇಷಿಸಿದ ಗುಪ್ತಾ, ಭಾರತ ಅಂದು ಚೀನಾಕ್ಕೆ ಪ್ರಜಾಪ್ರಭುತ್ವವಾದಿ ಬದಲಿಯಾಗಿ ಗುರುತಿಸಿಕೊಂಡಿತ್ತು. ಆದರೆ ಇಂದು ಅದು ಬದಲಾಗಿದೆ. ಈಗ ಸಾಂಸ್ಕೃತಿಕ ಮೇಲುಗಾರಿಕೆಯ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತಿದೆ ಎಂದು ವಿವರಿಸಿದರು.
ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಕುರಿತಂತೆ ಕಳವಳ ವ್ಯಕ್ತಪಡಿಸಿದ ಶೇಖರ ಗುಪ್ತಾ, ದೇಶದ ವಾರ್ಷಿಕ ಪ್ರಗತಿ ದರ ಶೇ.7 ಉಳಿಸಿಕೊಳ್ಳುವ ಅಗತ್ಯವಿದೆ. ಜನಸಾಮಾನ್ಯರ ಆದಾಯದಲ್ಲಿ ಕುಸಿತ ಹಾಗೂ ಆರ್ಥಿಕ ಅಸಮಾನತೆಯ ಅಸಾಧಾರಣ ಬೆಳವಣಿಗೆ ಸಾಮಾಜಿಕವಾಗಿ ಕಂಟಕವಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದರು.
ಕಳೆದೊಂದು ದಶಕದಲ್ಲಿ ಭಾರತ ಅನುಭವಕ್ಕೆ ಬರುವ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ. ನಿರೀಕ್ಷೆಗಿಂತ ಮೊದಲೇ ‘ವಿಜಯ’ ಘೋಷಿಸುವ ಆತುರತೆಗೆ ಭಾರತ ಕಡಿವಾಣ ಹಾಕಿಕೊಳ್ಳಬೇಕಿದೆ. ಇದಕ್ಕೆ ಬದಲಾಗಿ ಧೀರ್ಘ ಕಾಲಿಕ ಯೋಜನೆ, ಗಂಭೀರವಾದ ಸ್ವಯಂ ವಿಮರ್ಶೆ, ಚಿಂತನೆ ನಡೆಸುವತ್ತ ದೇಶ ಗಮನ ಹರಿಸಬೇಕು ಎಂದರು.
ಬಡವರಿಗೆ ಸಂಪನ್ಮೂಲಗಳ ವಿತರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವ ಕುರಿತಂತೆ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಅಭಿನಂದಿಸಿದ ಸದ್ಯ ವೆಬ್ಪತ್ರಿಕೆ ‘ದಿ ಪ್ರಿಂಟ್’ನ ಸ್ಥಾಪಕ ಹಾಗೂ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶೇಖರ್ ಗುಪ್ತಾ, ಒಳಗೆ ಹಾಗೂ ಹೊರಗೆ ಭಾರತ ಬಲಿಷ್ಠವಾಗಿರಲು ಸಾಮಾಜಿಕವಾಗಿರುವ ಒಗ್ಗಟ್ಟೇ ಕಾರಣ ಎಂದರಲ್ಲದೇ ದೇಶದ ಈ ಒಗ್ಗಟ್ಟಿಗೆ ನಮ್ಮ ಸಂವಿಧಾನವೇ ಪ್ರಮುಖ ಕಾರಣವಾಗಿ ಎಂದು ಹೇಳಿದರು.
ಆದರೆ ಮೋದಿ ಸರಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ತೀವ್ರವಾಗಿ ಟೀಕಿಸಿದ ಅವರು, ಇದೊಂದು ಅನಗತ್ಯವಾದ ಪ್ರಚೋದನೆಯಾಗಿದೆ. ಸದ್ಯಕ್ಕೆ ದೇಶಕ್ಕೆ ಅಗತ್ಯವಾಗಿರುವುದು ಗುಣಮಟ್ಟದ ಸಾರ್ವಜನಿಕ ಶಿಕ್ಷಣ ಎಂದರಲ್ಲದೇ ಈಗಿನ ಸ್ಥಿತಿಯನ್ನು ಆಘಾತಕಾರಿ ಎಂಬಷ್ಟು ಕಳಪೆಯಾಗಿದೆ ಎಂದು ಬಣ್ಣಿಸಿದರು.
ಎಂಐಸಿಯ ನಿರ್ದೇಶಕಿ ಡಾ.ಪದ್ಮಾ ರಾಣಿ ಹಾಗೂ ಮಾಹೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.