ವಿಎಒಗಳ ಬೇಡಿಕೆ ಸಚಿವ ಸಂಪುಟದಲ್ಲಿ ನಿರ್ಧಾರ: ಮಂಜುನಾಥ ಭಂಡಾರಿ
Update: 2025-02-11 18:24 IST
ಉಡುಪಿ: ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ(ವಿಎಒ)ಗಳ ಬೇಡಿಕೆ ಬಗ್ಗೆ ಕಂದಾಯ ಸಚಿವರು ಹಾಗೂ ಪಿಡಿಓಗಳ ಬೇಡಿಕೆ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸರಕಾರ ಬೇರೆ ಬೇರೆ ಇಲಾಖೆಗಳ ಬಗ್ಗೆ ಬೇರೆ ಬೇರೆ ನಿಲುವು ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಉದಯಗಿರಿ ಪ್ರಕರಣದಂತಹ ಘಟನೆ ಗಳು ಆಗುವುದು ತಪ್ಪು. ನ್ಯಾಯ ಸಿಗದಿದ್ದರೆ ಕಾರ್ಯಾಂಗ ನ್ಯಾಯಾಂಗದ ಮೊರೆ ಹೋಗಬಹುದು. ಹಂತ ಹಂತಗಳಲ್ಲಿ ನ್ಯಾಯ ಕೇಳುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಆ ಅವಕಾಶ ಸಂವಿಧಾನ ನಮಗೆ ನೀಡಿದೆ. ಅದು ಬಿಟ್ಟು ಕಾನೂನು ಕೈಗೆ ತೆಗೆದು ಕೊಳ್ಳುವುದು ಸರಿಯಲ್ಲ ಎಂದರು.