ಪಾದಚಾರಿ ರಸ್ತೆಯಲ್ಲಿ ತಡೆಬೇಲಿಯಾದ ಪ್ರಚಾರ ಫಲಕ
Update: 2025-02-15 17:56 IST
ಉಡುಪಿ, ಫೆ.15: ನಗರದ ಕವಿ ಮುದಣ್ಣ ಮಾರ್ಗ, ನಗರಸಭೆ ಕಛೇರಿ ಎದುರುಗಡೆ, ಪಾದಚಾರಿ ರಸ್ತೆಗೆ ಅಡ್ಡವಾಗಿ ಧಾರ್ಮಿಕ ಹಾಗೂ ಇಲಾಖೆಯ ಕಾರ್ಯಕ್ರಮದ ಪ್ರಚಾರ ಫಲಕವನ್ನು ಅಳವಡಿಸಲಾಗಿದ್ದು, ಈ ಮೂಲಕ ಪಾದಚಾರಿಗಳು ನಡೆಯಲು ತಡೆಯೊಡ್ಡಿದಂತಾಗಿದೆ.
ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪಾದಚಾರಿ ರಸ್ತೆಯನ್ನು ಬಿಟ್ಟು, ಸದಾ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಮೀಪದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫಲಕ ಅಡ್ಡವಾಗಿರುವುದರಿಂದ, ಬಸ್ ಬರುವುದು ಕಾಣದಂತಾಗಿದೆ.
ತಕ್ಷಣ ನಗರಸಭೆ ಅಧಿಕಾರಿಗಳು, ಪ್ರಚಾರ ಫಲಕವನ್ನು ಆಯಾಕಟ್ಟಿನ ಸ್ಥಳದಲ್ಲಿ ಸುರಕ್ಷಿತ ವಿಧಾನದಲ್ಲಿ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ಆಗ್ರಹಪಡಿಸಿದ್ದಾರೆ.