ನಿರ್ಮಾಣಹಂತದ ಮನೆಯಿಂದ ಬಿದ್ದು ವ್ಯಕ್ತಿ ಮೃತ್ಯು
Update: 2025-02-19 21:29 IST
ಉಡುಪಿ, ಫೆ.19: ನಿರ್ಮಾಣ ಹಂತದ ಮನೆಯ ಛಾವಣಿ ಮೇಲಿನಿಂದ ಬಿದ್ದು ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಅಂಬಲಪಾಡಿ ಕುಂಜಿಗುಡ್ಡೆ ಬಳಿ ಫೆ.17ರಂದು ನಡೆದಿದೆ.
ಮೃತರನ್ನು ಅಂಬಲಪಾಡಿಯ ಸುರೇಶ್ ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಮನೆಯ ಛಾವಣಿಯ ಮೇಲೆ ತಗಡು ಶೀಟು ಅಳವಡಿಸುವ ಕೆಲಸ ಮಾಡುತ್ತಿರುವಾಗ ಸುರೇಶ್ ಆಯತಪ್ಪಿ 30 ಅಡಿ ಎತ್ತರದಿಂದ ನೆಲದ ಮೇಲೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ರಾತ್ರಿ ವೇಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಭರತ್ ಮತ್ತು ಕಟ್ಟಡದ ಇಂಜಿನಿಯರ್ ದೀಪಕ್ ಕುಮಾರ್ ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷಾ ಕ್ರಮ ಮತ್ತು ಮುಂಜಾಗ್ರತೆ ವಹಿಸದೇ ನಿರ್ಲಕ್ಷತನ ತೋರಿರುವುದರಿಂದ ಸುರೇಶ್, ಮೃತಪಟ್ಟಿರುವು ದಾಗಿ ದೂರಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.