×
Ad

ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ: ಡಿಎಚ್‌ಓ ಡಾ.ಶ್ರೀರಾಮ ರಾವ್

Update: 2025-06-15 17:22 IST

ಮಣಿಪಾಲ: ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ಭಾರತವು ಪ್ರಸ್ತುತ ವಾರ್ಷಿಕವಾಗಿ ಸುಮಾರು ಒಂದು ಮಿಲಿಯನ್ ಯೂನಿಟ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ ಎಂದು ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮ ರಾವ್ ಹೇಳಿದ್ದಾರೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಶನಿವಾರ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸ ಲಾದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಆರೋಗ್ಯವಂತ ವ್ಯಕ್ತಿಯು 18ನೇ ವಯಸ್ಸಿನಲ್ಲಿ ದಾನ ಮಾಡಲು ಪ್ರಾರಂಭಿಸಿ ವರ್ಷಕ್ಕೆ ಮೂರು ಬಾರಿ 60ನೇ ವಯಸ್ಸಿನಲ್ಲಿ ದಾನ ಮಾಡಿದರೆ, ಅವರು ಸುಮಾರು 30 ಗ್ಯಾಲರಿಗಳನ್ನು ದಾನ ಮಾಡುತ್ತಾರೆ. ಸಂಭಾವ್ಯವಾಗಿ 500ಕ್ಕೂ ಹೆಚ್ಚು ಜೀವಗಳನ್ನು ಉಳಿಸಬಹುದು. ನಾವು ನಿಯಮಿತ ಮತ್ತು ಸ್ವಯಂ ಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ ಮತ್ತು ಪರ್ಯಾಯವಿಲ್ಲ. ಆದುದರಿಂದ ಅಗತ್ಯ ವಿರುವವರಿಗೆ ಅದನ್ನು ದಾನ ಮಾಡ ಬೇಕು. ಎಲ್ಲಾ ಅರ್ಹ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ನೀಡಬೇಕೆಂದು ಹೇಳಿದರು.

ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶಪಾಲ್ ಸುವರ್ಣ ಶುಭಹಾರೈಸಿದರು. ಕೆಎಂಸಿ ಮಣಿಪಾಲದ ಡೀನ್ ಡಾ.ಅನಿಲ್ ಕೆ. ಭಟ್, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣು ಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಶ್ಯಾಮಿಲಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು, ಪ್ರೇರಕರು ಮತ್ತು ಸಂಘಟಕರನ್ನು ಸನ್ಮಾನಿಸಲಾ ಯಿತು. ‘ರಕ್ತ ನೀಡಿ, ಭರವಸೆ ನೀಡಿ: ಜೊತೆಯಾಗಿ ಜೀವ ಉಳಿಸೋಣ’ ಎಂಬ ಘೋಷವಾಕ್ಯದ ಕುರಿತು ಆಯೋಜಿಸಲಾದ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ರಕ್ತ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಡಾ.ಶಮೀ ಶಾಸ್ತ್ರಿ ವಂದಿಸಿದರು. ವಿಶ್ವೇಶ ಎನ್. ಸನ್ಮಾನಿತರ ಪಟ್ಟಿಯನ್ನು ಓದಿದರು. ಡಾ.ದೀಪ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News