ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ: ಕೃಷಿ ಇಲಾಖೆ
ಉಡುಪಿ, ಜು.28: ಕೇಂದ್ರ ಸರಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿ ಸದೇ ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಕಂಡು ಬಂದಿರುವುದಿಲ್ಲ ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರಸಗೊಬ್ಬರ ಕೊರತೆಗೆ ಮೂಲ ಕಾರಣ: ಪ್ರಸಕ್ತ ಸಾಲಿನಲ್ಲಿ ಮಾತ್ರ ಆರಂಭಿಕ ಶುಲ್ಕ ಪರಿಗಣಿಸಿ, ಕೇಂದ್ರ ಸರಕಾರರಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಜರುಗಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಬಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬ ರದ ಕಡಿಮೆ ಹಂಚಿಕೆ ಮಾಡಿರುವುದು ಈ ಬಾರಿ ಕೊರತೆಗೆ ಮೂಲ ಕಾರಣವಾಗಿದೆ ಎಂದು ಅದು ವಿವರಿಸಿದೆ.
ರಾಜ್ಯದ ಬೆಳೆ ಪದ್ಧತಿಯನ್ನು ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರಕಾರಕ್ಕೆ 12.95 ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರಕಾರದಿಂದ 11.17 ಲಕ್ಷ ಮೆ.ಟನ್ ಹಂಚಿಕೆ ನಿಗದಿಪಡಿಸಲಾಗಿತ್ತು. ಎಪ್ರಿಲ್ ತಿಂಗಳಿ ನಿಂದ ಜುಲೈ ವರೆಗೆ 3.02ಲಕ್ಷ ಮೆ.ಟನ್ ಡಿ.ಎ.ಪಿ ರಸಗೊಬ್ಬರದ ಬೇಡಿಕೆ ಇದ್ದು, ಕೇಂದ್ರ ಸರಕಾರದಿಂದ ಇಲ್ಲಿಯ ವರೆಗೆ 2.21 ಲಕ್ಷ ಮೆ.ಟನ್ ಸರಬರಾಜಾಗಿದೆ. ಹೀಗಾಗಿ ಇನ್ನೂ 81,000 ಮೆ.ಟನ್ ಸರಬರಾಜು ಬಾಕಿ ಇರುತ್ತದೆ.
ರಾಜ್ಯದಲ್ಲಿ ಡಿಎಪಿ ಕೊರತೆ ಕಂಡು ಬಂದಾಗ ಕೃಷಿ ಸಚಿವರ ನಿರ್ದೇಶನ ದಂತೆ ಪರ್ಯಾಯ ರಸಗೊಬ್ಬರ ಗಳ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಿ, ಪ್ರಸ್ತುತ, ಡಿ.ಎ.ಪಿ. ರಸಗೊಬ್ಬರದ ಕೊರತೆಯನ್ನು ನೀಗಿಸಲಾಗಿದೆ. ಎಪ್ರಿಲ್ನಿಂದ ಜುಲೈ ತಿಂಗಳವರೆಗೆ 6.80ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, ಕೇಂದ್ರ ಸರಕಾರ ಇಲ್ಲಿಯವರೆಗೆ 5.35 ಲಕ್ಷ ಮೆ.ಟನ್ ಸರಬರಾಜು ಮಾಡಿದೆ. ಇನ್ನೂ 1.45 ಲಕ್ಷ ಮೆ.ಟನ್ ಸರಬರಾಜು ಬಾಕಿ ಇರುತ್ತದೆ.
ಆರು ಬಾರಿ ಮನವಿ: ಕೇಂದ್ರಸರಕಾರ ಇಲ್ಲಿಯವರೆಗೆ ಸರಬರಾಜು ಮಾಡಿರುವ ರಸಗೊಬ್ಬರ ವನ್ನು ಸಮರ್ಪಕವಾಗಿ ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಮಾಡಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಭಾಯಿಸಲಾಗಿದೆ. ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆಯಿಂದ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಆರು ಬಾರಿ ಪತ್ರ ಗಳನ್ನು ಬರೆದು ಹಂಚಿಕೆಗೆ ಅನುಗುಣವಾಗಿ ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ.
ರಾಜ್ಯದ ಕೃಷಿ ಸಚಿವರು ಕೇಂದ್ರ ಸರಕಾರದ ರಸಗೊಬ್ಬರ ಖಾತೆ ಸಚಿವರಿಗೆ ಅಗತ್ಯವಿರುವ ಡಿ.ಎ.ಪಿ. ರಸಗೊಬ್ಬರದ ಪೂರೈಕೆಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಕೃಷಿ ಸಚಿವರೇ ಖುದ್ದಾಗಿ ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಜುಲೈ 7ರಂದು ಭೇಟಿ ಮಾಡಿ ಕೇಂದ್ರ ಸರಕಾರದಿಂದ ಸಕಾಲದಲ್ಲಿ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರದ ಕಡಿಮೆ ಪೂರೈಕೆಯನ್ನು ಮನಗಂಡು, ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ರಸಗೊಬ್ಬರ ಖಾತೆ ಸಚಿವರಿಗೆ, ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಜುಲೈ 17 ಮತ್ತು 25ರಂದು ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರ ಸರಕಾರದಿಂದ ಹಂಚಿಕೆಗನುಗುಣವಾಗಿ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡದಿ ರುವುದರಿಂದ ರಾಜ್ಯದಲ್ಲಿ ಅಲ್ಲಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಕಂಡು ಬಂದಿರುತ್ತದೆ. ಈ ಸಂಬಂಧ ರೈತರು ವಿವಿಧ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರದ ಪೂರೈಕೆ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಯೂರಿಯಾ ಬೇಡಿಕೆಗೆ ಕಾರಣಗಳು:ರಾಜ್ಯದಲ್ಲಿ ಮುಂಗಾರು ಹಂಗಾಮಿ ನಲ್ಲಿ ಮುಂಚಿತವಾಗಿ ಉತ್ತಮ ಮಳೆಯಾಗಿದ್ದು, ಸಾಮಾನ್ಯ ಅವಧಿಗಿಂತ ಮುಂಚೆ ಬಿತ್ತನೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಬಿತ್ತನೆ ವಿಸ್ತೀರ್ಣ ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಹೆಚ್ಚಾಗಿದೆ. ಹೆಚ್ಚು ರಸಗೊಬ್ಬರ ಅವಶ್ಯವಿರುವ ಮುಸುಕಿನ ಜೋಳದ ವಿಸ್ತೀರ್ಣವು ಅಂದಾಜು 2.00ಲಕ್ಷ ಹೆಕ್ಟೇರ್ನಷ್ಟು ಗಣನೀಯವಾಗಿ ಹೆಚ್ಚಳವಾಗಿದೆ.
ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಅಂದಾಜು 13,000 ಹೆಕ್ಟೇರ್ ಪ್ರದೇಶದಲ್ಲಿ ಮರುಬಿತ್ತನೆ ಕೈಗೊಳ್ಳಲಾಗಿದೆ. ತುಂಗಭದ್ರಾ, ಕೃಷ್ಣಾ, ಕಾವೇರಿ ಇತ್ಯಾದಿ ಪ್ರಮುಖ ಜಲಾಶಯಗಳಿಂದ ಅವಧಿಗಿಂತ ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಬಿಟ್ಟಿರುವುದರಿಂದ ಮುಂಚಿತವಾಗಿ ನಾಟಿ ನಡೆದಿರು ವುದರಿಂದ ಯೂರಿಯಾ ಮತ್ತು ರಸಗೊಬ್ಬರ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಇಲಾಖೆ ವಿವರಿಸಿದೆ.
ಇಲಾಖೆಯ ಅಧಿಕಾರಿಗಳು ಪ್ರತಿ ಮಂಗಳವಾರ ಕೇಂದ್ರ ಸರಕಾರದಿಂದ ನಡೆಯುವ ವೀಡಿಯೊ ಸಂವಾದ ದಲ್ಲಿ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ. ಅಲ್ಲದೇ, ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದಲ್ಲಿ ಅವಶ್ಯವಿರುವ ರಸಗೊಬ್ಬರ ಪೂರೈಕೆಗೆ ಅವಶ್ಯ ಕ್ರಮ ವಹಿಸುತ್ತಿದ್ದಾರೆ.
ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ನ್ಯಾನೋ ರಸಗೊಬ್ಬರ ಬಳಕೆಗೆ ಇಲಾಖೆಯಿಂದ ವ್ಯಾಪಕ ಪ್ರಚಾರ ನೀಡಿ ಅರಿವು ಮೂಡಿಸಲಾಗುತ್ತಿದೆ. ಬೆಳೆ, ಮಣ್ಣು, ಮಾನವ, ಜಾನುವಾರು ಮತ್ತು ಪರಿಸರದ ಆರೋಗ್ಯದ ದೃಷ್ಠಿಯಿಂದ ಯೂರಿಯಾ ಬಳಕೆಯನ್ನು ಕಡಿತಗೊಳಿಸಲು ರೈತರಲ್ಲಿ ಮನವಿ ಮಾಡಲಾಗಿದೆ.
ಆರಂಭಿಕ ಶುಲ್ಕ ಪರಿಗಣಿಸದೆ ಕೊರತೆಯಾಗಿರುವ 81,000 ಮೆ.ಟನ್ ಡಿ.ಎ.ಪಿ. ಮತ್ತು 1,45,000 ಮೆ.ಟನ್. ಯೂರಿಯಾ ರಸಗೊಬ್ಬರವನ್ನು ಕೇಂದ್ರ ಸರಕಾರ ಪೂರೈಸಿದಲ್ಲಿ ರೈತರ ಬವಣೆ ನೀಗಿಸಬಹು ದಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಜರುಗಿಸಬೇಕಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.