×
Ad

ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

Update: 2026-06-21 14:21 IST

ಕಾರ್ಕಳ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಸಾಧನೆ ಗಮನಾರ್ಹ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನಲ್ಲಿ ಆಡಳಿತ ಮಂಡಳಿ, ಮುಂಬಯಿನ ವಿದ್ಯಾದುರ್ಗ ಟ್ರಸ್ಟ್, ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನ, ಸಾಧಕರ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಮುಖ್ಯ. ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿರುವ ಇವತ್ತಿನ ಸಂದರ್ಭದಲ್ಲಿ ಉತ್ತಮ ಶಿಕ್ಷಣದೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಎಐ ಹೊಸ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿದ ನೃಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಮಾತನಾಡಿ, ಮುಂಡ್ಕೂರಿನಂತಹ ಗ್ರಾಮೀಣ ಭಾಗದಲ್ಲಿ ಶೇ.100 ಫಲಿತಾಂಶ ತರುತ್ತಿರುವ ವಿದ್ಯಾರ್ಥಿಗಳು ಹಾಗೂ ಈ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕ ಬಂಧುಗಳು ಅಭಿನಂದನಾರ್ಹರು ಎಂದರು. ಕಾಲೇಜಿನ ರಸ್ತೆ ಅಭಿವೃದ್ಧಿಗೆ ರೂ.5 ಲಕ್ಷ ಅನುದಾನ ಘೋಷಿಸಿದ ಭೋಜೇಗೌಡರು, ವಿದ್ಯಾರ್ಥಿಗಳ ಹೆಚ್ಚಳಕ್ಕೆ ಪೂರಕವಾಗಿ ವಸತಿ ನಿಲಯ ಪ್ರಾರಂಭಕ್ಕೂ ಇಲಾಖೆಯ ಮೂಲಕ ಸ್ಪಂದಿಸುವುದಾಗಿ ತಿಳಿಸಿದರು.

ಇದೇ ಸಂದರ್ಭ ಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು ವರ್ಗಾವಣೆಗೊಂಡ ರಂಗಸ್ವಾಮಿ ಅವರನ್ನು ಪತ್ನಿ ಅಂಬಿಕಾ ರವರ ಸಹಿತ ಸಮ್ಮಾನಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ 100% ಫಲಿತಾಂಶ ಪಡೆಯಲು ಕಾರಣರಾದ ಶಿಕ್ಷಕರನ್ನು, ಶಿಕ್ಷಕೇತರರನ್ನು, ಪದವಿಪೂರ್ವ ವಿಭಾಗದ ಶಿಕ್ಷಕ-ಶಿಕ್ಷಕೇತರರನ್ನು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಅಶಕ್ತ ವಿದ್ಯಾರ್ಥಿಗಳಿಗೆ ನೆರವು ಪ್ರದಾನ ನಡೆಯಿತು. ಮುಂಡ್ಕೂರಿನ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ, ಪಠ್ಯ ಪೂರಕ ಸಾಮಗ್ರಿ ನೀಡಲಾಯಿತು. ಕಾಲೇಜು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಹಿತಿಯುಳ್ಳ ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು.

ಆಡಳಿತ ಮಂಡಳಿಯ ಅಧ್ಯಕ್ಷ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ನಿಕಟಪೂರ್ವ ಸಂಚಾಲಕ ಡಾ. ಪಿ. ಬಾಲಕೃಷ್ಣ ಆಳ್ವ, ನಿಕಟಪೂರ್ವ ಕಾರ್ಯದರ್ಶಿ ಪಾಂಡುರಂಗ ಪ್ರಭು, ಕಜೆ ಶ್ರೀ ಮಹಾಮ್ಮಾಯಿ ದೇವಳದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎಂ. ಜಿ. ಕರ್ಕೇರ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೋರಿಬೆಟ್ಟುಗುತ್ತು ಸುರೇಂದ್ರ ಎಸ್. ಶೆಟ್ಟಿ, ಸದಸ್ಯ ಸಚ್ಚೇರಿಪೇಟೆ ನಡಿಗುತ್ತು ಜಗದೀಶ್ ಶೆಟ್ಟಿ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಜಾರಾಮ ರೈ, ಆಡಳಿತ ಮಂಡಳಿಯ ಕಾರ್ಯದರ್ಶಿ ಶರತ್ ಶೆಟ್ಟಿ, ಮುಂಡ್ಕೂರು ಕ್ಲಸ್ಟರ್ ಸಿಆರ್‌ಪಿ ಶ್ರೀಕಾಂತ ಮೂಲ್ಯ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಾಲತೇಶ್ ಇಂಗಳಕಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸವಿತಾ ಸದಾನಂದ್, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮಾಧರ ಆಚಾರ್ಯ, ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಪ್ರಕಾಶ್ ಕೆ. ಎನ್., ಸದಸ್ಯರಾದ ಅಶೋಕ್ ಶೆಟ್ಟಿ, ಮುಲ್ಲಡ್ಕಪರಾರಿ ರವೀಂದ್ರ ಶೆಟ್ಟಿ, ಅವಿಲ್ ಡಿಸೋಜಾ, ಭಾಸ್ಕರ ಶೆಟ್ಟಿ, ಜನ್ನೋಜಿ ರಾವ್, ನಳಿನಿ ಶೆಟ್ಟಿ ಅಂಗಡಿಗುತ್ತು, ಅರುಣ್ ರಾವ್, ದೇವಪ್ಪ ಸಪಳಿಗ, ಗಣೇಶ್ ರಾವ್, ಸದಾನಂದ ಪೂಜಾರಿ ಮತ್ತಿತರರಿದ್ದರು.

ಉಪನ್ಯಾಸಕಿ ಅಕ್ಷತಾ ಸಮ್ಮಾನ ಪತ್ರ ವಾಚಿಸಿದರು. ಉಪನ್ಯಾಸಕಿ ಮಾಲತಿ ಪ್ರತಿಭಾ ಪುರಸ್ಕೃತರ ವಿವರ ನೀಡಿದರು. ಶರತ್ ಶೆಟ್ಟಿ ಸ್ವಾಗತಿಸಿ, ಸವಿತಾ ಸದಾನಂದ ವಂದಿಸಿದರು. ಅಧ್ಯಾಪಕ ಪ್ರತಿನಿಧಿಗಳಾದ ಪ್ರಭಾಕರ ಶೆಟ್ಟಿ, ಪ್ರಕಾಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News