ಉಡುಪಿ: ಎರಡು ಸ್ಕೂಟರ್ಗಳು ಬೆಂಕಿಗಾಹುತಿ
Update: 2025-11-07 21:14 IST
ಉಡುಪಿ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಉಡುಪಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಶುಕ್ರವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ನಡೆದಿದೆ.
ಯಾರೋ ರಸ್ತೆ ಬದಿ ನಿಲ್ಲಿಸಿ ಹೋಗಿದ್ದ ಎರಡು ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಬೆಂಕಿಯಿಂದ ಎರಡೂ ವಾಹನಗಳು ಕೂಡ ಸಂಪೂರ್ಣ ಸುಟ್ಟು ಹೋಗಿವೆ. ದ್ವಿಚಕ್ರ ವಾಹನದ ವಾರಸುದಾರರು ಪತ್ತೆಯಾಗಿಲ್ಲ. ಘಟನೆಗೆ ಕಾರಣ ಕೂಡ ತಿಳಿದುಬಂದಿಲ್ಲ. ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.