ಭಟ್ಕಳ: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ ವಿದೇಶ ಅಥವಾ ರಾಜ್ಯದ ಹೊರಗೆ ವಾಸಿಸುತ್ತಿರುವ ಮತದಾರರ ಪರವಾಗಿ ಅವರ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ನೋಟಿಸ್‌ಗೆ ಉತ್ತರಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ಮಜ್ಲಿಸ್‌ ಇಸ್ಲಾಹ್‌ ವ ತಂಝೀಮ್‌ ಭಟ್ಕಳದ ಪ್ರಧಾನ ಕಾರ್ಯದರ್ಶಿ ಅಝೀಝುರ್ರಹ್ಮಾನ್‌ ರುಕ್ನುದ್ದೀನ್‌ ನದ್ವಿ ಒತ್ತಾಯಿಸಿದರು.

ಈ ಕುರಿತು ತಂಝೀಮ್‌ನ ನಿಯೋಗವು ಕಾರವಾರಕ್ಕೆ ತೆರಳಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಭಟ್ಕಳದ ಹೆಚ್ಚಿನ ಸಂಖ್ಯೆಯ ಮತದಾರರು ವಿದೇಶ ಹಾಗೂ ಕರ್ನಾಟಕದ ಹೊರರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆಯಡಿ ಇಂತಹ ಮತದಾರರಿಗೆ ನೋಟಿಸ್‌ ಜಾರಿಯಾದಲ್ಲಿ ನಿಗದಿತ ಅವಧಿಯೊಳಗೆ ಸ್ವತಃ ಹಾಜರಾಗಿ ಉತ್ತರಿಸುವಂತೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸು ವಂತೆ ಸೂಚಿಸಲಾಗುತ್ತಿದೆ. ಆದರೆ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಟ್ಕಳದ ಮತದಾರರಿಗೆ ಕಡಿಮೆ ಅವಧಿಯಲ್ಲಿ ಭಟ್ಕಳಕ್ಕೆ ಆಗಮಿಸಿ ಸಂಬಂಧಿಸಿದ ಕಚೇರಿಗಳಿಗೆ ಹಾಜರಾಗುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ಅವರು ಆ. 27ರಂದು ಹೊರಡಿಸಿರುವ ಮಾರ್ಗಸೂಚಿಯನ್ನು ಉಲ್ಲೇಖಿ ಸಿದ ಅಝೀಝುರ್ರಹ್ಮಾನ್‌, ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರ ಪರವಾಗಿ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಚುನಾವಣಾ ನೋಂದಣಾ ಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಮುಂದೆ ಹಾಜರಾಗಿ ಅಗತ್ಯ ದಾಖಲೆಗಳು ಮತ್ತು ಉತ್ತರಗಳನ್ನು ಸಲ್ಲಿಸಲು ಅಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕದಲ್ಲಿಯೂ, ವಿಶೇಷವಾಗಿ ಭಟ್ಕಳದ ಮತದಾರರಿಗೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ಹೊರಡಿಸಿರುವ ಮಾರ್ಗಸೂಚಿಯ ಪ್ರತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ ನಿಯೋಗ, ಈ ಕುರಿತು ತನ್ನ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನೂ ನೀಡಿತು.

ಭೌಗೋಳಿಕ ಅಂತರದಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳ ಬೇಕು. ವಿದೇಶ ಅಥವಾ ಹೊರರಾಜ್ಯದಲ್ಲಿ ವಾಸಿಸುವ ಮತದಾರರ ಪರವಾಗಿ ಅವರ ವಯಸ್ಕ ಕುಟುಂಬದ ಸದಸ್ಯರು ಎಸ್‌ಐಆರ್‌ ನೋಟಿಸ್‌ಗೆ ಉತ್ತರಿಸಲು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುವುದರಿಂದ ಎಲ್ಲ ಅರ್ಹ ಮತದಾರರಿಗೂ ನ್ಯಾಯಯುತ ಹಾಗೂ ಸಮಾನ ಅವಕಾಶ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು. ನಿಯೋಗದಲ್ಲಿ ವಕೀಲ ಇಮ್ರಾನ್‌ ಲಂಕಾ, ಅಬ್ದುಲ್‌ ಮಾಜಿದ್‌ ರುಕ್ನುದ್ದೀನ್‌, ಆದಂ ಪಣಂಬೂರು ಸೇರಿದಂತೆ ತಂಝೀಮ್‌ನ ಪದಾಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor