ಕಾರವಾರ: ಐಎನ್‌ಎಸ್ ಮಾಲ್ವನ್ ಯುದ್ಧನೌಕೆ ಲೋಕಾರ್ಪಣೆ

Update: 2026-07-22 14:39 IST

ಕಾರವಾರ: ಭಾರತೀಯ ನೌಕಾಪಡೆಯ ಬಲವರ್ಧನೆಗೆ ಮತ್ತೊಂದು ಮೈಲಿಗಲ್ಲಾಗಿ 'ಐಎನ್‌ಎಸ್ ಮಾಲ್ವನ್' ಯುದ್ಧನೌಕೆಯು ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಂಡಿತು. ಮಾಹೆ ವರ್ಗದ ಎರಡನೇ ಆ್ಯಂಟಿ-ಸಬ್‌ಮರಿನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ ಆಗಿರುವ ಈ ನೌಕೆಯನ್ನು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಬುಧವಾರ ನೌಕಾಪಡೆಗೆ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡ ಈ ಯುದ್ಧನೌಕೆಯು ಕರಾವಳಿ ಕಣ್ಗಾವಲು, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ ಹಾಗೂ ಸಮುದ್ರ ಭದ್ರತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ. ಜೊತೆಗೆ, ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯಲ್ಲಿ ಮೂರು ಸೇನಾ ಪಡೆಗಳ ಸಮನ್ವಯತೆ ಹೆಚ್ಚಲಿದ್ದು, ಸುರಕ್ಷಿತ ಕಡಲ ವ್ಯಾಪಾರಕ್ಕೆ ಇದು ಪೂರಕವಾಗಲಿದೆ ಎಂದರು.

ಕಾರವಾರದ ನೌಕಾನೆಲೆಯಲ್ಲಿ ಇದೇ ಮೊದಲ ಬಾರಿಗೆ ಯುದ್ಧನೌಕೆಯೊಂದರ ಲೋಕಾರ್ಪಣೆ ನೆರವೇರಿರುವುದು ವಿಶೇಷವಾಗಿದ್ದು, ಪಶ್ಚಿಮ ನೌಕಾ ಕಮಾಂಡ್‌ನ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್ ಅವರು ಇದನ್ನು 'ಆತ್ಮನಿರ್ಭರ ಭಾರತ' ಪರಿಕಲ್ಪನೆಗೆ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ನೌಕೆಯಲ್ಲಿ ಶೇ. 80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳನ್ನು ಬಳಸಲಾಗಿದೆ. 78.8 ಮೀಟರ್ ಉದ್ದ ಹಾಗೂ 1,150 ಟನ್ ತೂಕ ಹೊಂದಿರುವ ಈ ನೌಕೆಯು 30 ಎಂಎಂ ನೇವಲ್ ಗನ್, ಟಾರ್ಪಿಡೊ ಲಾಂಚರ್‌ಗಳು, ರಾಕೆಟ್ ಲಾಂಚರ್‌ಗಳು, 'ಅಭಯ್' ಸೋನಾರ್ ಹಾಗೂ ಬಿಇಎಲ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಯುದ್ಧ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದೆ.

ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ 'ಮಾಲ್ವನ್' ಹೆಸರಿಡಲಾದ ಈ ನೌಕೆಯು ಛತ್ರಪತಿ ಶಿವಾಜಿ ಮಹಾರಾಜರ ಕಡಲ ಪರಂಪರೆಗೆ ಗೌರವ ಸಲ್ಲಿಸುತ್ತದೆ. ನೌಕೆಯ ಚಿಹ್ನೆಯಲ್ಲಿ ಧೈರ್ಯ ಮತ್ತು ಚುರುಕುತನದ ಸಂಕೇತವಾದ 'ಬಾಘ್ ನಖ್' (ಹುಲಿಯ ಉಗುರು) ಬಳಸಲಾಗಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನೌಕೆಯ ಕಮಾಂಡರ್ ಪ್ರವೀಣಕುಮಾರ್ ತಿವಾರಿ, ಕೊಚ್ಚಿ ಶಿಪ್‌ಯಾರ್ಡ್‌ನ ವ್ಯವಸ್ಥಾಪಕ ಜೋಸ್ ವಿ.ಜೆ ಸೇರಿದಂತೆ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



 


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News