ವಿಜಯನಗರ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ
Update: 2025-10-09 20:43 IST
ವಿಜಯನಗರ (ಹೊಸಪೇಟೆ) : ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ವಿಜಯನಗರ ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ವಕೀಲರ ಸಂಘದ ಸದಸ್ಯರು ನಗರದ ನ್ಯಾಯಾಲಯ ಆವರಣದಿಂದ ಕಾಲ್ನಡಿಗೆಯ ಮೂಲಕ ಪುನೀತ್ ರಾಜಕುಮಾರ ವೃತ್ತದಿಂದ ತಾಲೂಕು ದಂಡಾಧಿಕಾರಿಯ ಕಚೇರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಅವರು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಅಸಭ್ಯ ವರ್ತನೆ ತೋರಿದ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅಲ್ಲದೆ, ತಮ್ಮ ಮನವಿಯನ್ನು ತಾಲೂಕು ದಂಡಾಧಿಕಾರಿಯ ಮುಖಾಂತರ ರಾಷ್ಟ್ರಪತಿಗೆ ಮುಟ್ಟಿಸುವಂತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಪ್ರಹಲ್ಲಾದ, ಆರ್.ಶ್ರೀನಿವಾಸ್ ಮೂರ್ತಿ, ವಿ.ರವಿಕುಮಾರ್ ಮತ್ತು ಪುಂಡಲೀಕ ಪ್ರಭು ಸೇರಿದಂತೆ ಅನೇಕ ವಕೀಲರು ಭಾಗವಹಿಸಿದ್ದರು.