ವಿಜಯನಗರ | ಕನಕದಾಸರು ಸಾಮಾಜಿಕ ಅಸಮಾನತೆಯ ವಿರುದ್ಧ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದರು : ಕವಿತಾ ಎಸ್.ಮನ್ನಿಕೇರಿ
ವಿಜಯನಗರ(ಹೊಸಪೇಟೆ) : ಮಹಾನ್ ಕವಿ, ದಾರ್ಶನಿಕ ಹಾಗೂ ಹರಿದಾಸ ಪರಂಪರೆಯ ಪ್ರಸಿದ್ಧ ಸಂಗೀತಗಾರರಾದ ಶ್ರೀಕನಕದಾಸರ ಪುತ್ಥಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾಲಾರ್ಪಣೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು.
ದಾಸ ಶ್ರೇಷ್ಠ ಕನಕದಾಸರು ಸರ್ವ ಜನಾಂಗದ ಶಾಂತಿಯತೋಟವಿದ್ದಂತೆ ಸಮಾಜ ಇರಬೇಕೆಂದು ಇಚ್ಛೆಪಟ್ಟವರು. ಸಾಮಾಜಿಕ ಅಸಮಾನತೆಯ ವಿರುದ್ಧ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿದವರು. ಕನಕದಾಸರು ಸಂತನಾಗಿ ಸಾಹಿತ್ಯಗಳನ್ನು, ದಾರ್ಶನಿಕ ಕಾವ್ಯಗಳನ್ನು ರೂಪಿಸುತ್ತಾ, ಅದರ ಜೊತೆಗೆ 78 ಗ್ರಾಮಗಳನ್ನು ಆಡಳಿತ ಮಾಡುತ್ತಿದ್ದರು ಎಂಬುದು ವಿಶೇಷ ಎಂದರು.
ಕನಕದಾಸರು ಭಕ್ತಿಯ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದರು. ಕನಕದಾಸರ ಜೀವನ ಮತ್ತು ಕಾವ್ಯಗಳು ನಮ್ಮನ್ನು ಸತ್ಪಥದಲ್ಲಿ ನಡೆಸುತ್ತವೆ. ಏಕತೆ ಮತ್ತು ದಯೆ ನಮ್ಮ ಜೀವನದ ಪ್ರಮುಖ ಅಂಶಗಳಾಗಿರಬೇಕು ಎಂಬುದನ್ನು ತೋರಿಸುತ್ತವೆ. ಅವರು ತಮ್ಮ ಕಾವ್ಯಗಳಲ್ಲಿ ಮಾನವತೆ, ಧರ್ಮ, ನ್ಯಾಯ, ಮತ್ತು ಶ್ರದ್ಧೆಗಳನ್ನು ಪ್ರೋತ್ಸಾಹಿಸಿದ್ದಾರೆ. ಕನಕದಾಸರು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ಕನ್ನಡದಲ್ಲಿ ಕೀರ್ತನೆಗಳು, ಸಾಹಿತ್ಯಗಳು ಹಾಗೂ ದಾರ್ಶನಿಕ ಕಾವ್ಯಗಳು ರೂಪಿಸಿದ್ದಾರೆ. ಈ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕನಕದಾಸರ ಸಾಹಿತ್ಯಗಳನ್ನು ಓದುತ್ತಾ ಆಧ್ಯಾತ್ಮ ಚಿಂತನೆಗಳು ಬೆಳೆಸಿಕೊಳ್ಳಬೇಕು. ಎಂದರು.
ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ಕನಕದಾಸರು ಕರ್ನಾಟಕದ ಪ್ರಸಿದ್ಧ ಸಂತ, ಕವಿ, ಮತ್ತು ದಾರ್ಶನಿಕರು. ಅವರ ಜೀವನ ಮತ್ತು ಸಾಹಿತ್ಯವು ಜೀವನಕ್ಕೆ ಪ್ರೇರಣಾದಾಯಕವಾಗಿದೆ. ಇವರ ಆದರ್ಶ ಮಾತುಗಳು ನಮ್ಮ ಜೀವನವನ್ನು ಮಾರ್ಗದರ್ಶನ ಮಾಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಪೊಲೀಸ್ ವರಿಷ್ಟಾಧಿಕಾರಿಗಳಾದ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ ರಂಗಣ್ಣವರ್ ಹಾಗೂ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕುರುಬ ಸಮುದಾಯದ ಮುಖಂಡರಾದ ಅಯ್ಯಾಳಿ ತಿಮ್ಮಪ್ಪ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿದ್ದರು.