ಕೊಲ್ಹಾರ : ಒಡೆದು ಹೋದ ಕಾಲುವೆ; ಬೆಳೆದ ಅಪಾರ ಬೆಳೆ ನಾಶ
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕೊಲ್ಹಾರ/ವಿಜಯಪುರ: ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದಲ್ಲಿ ಮುಳವಾಡ 1ನೇ ಹಂತದ ದೊಡ್ಡ ಕಾಲುವೆ ಒಡೆದು ಹೋಗಿ, ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ವಿತರಿಸಬೇಕು. ಜೊತೆಗೆ ನಾನಾ ಕಡೆ ಬಿರುಕು ಬಿಟ್ಟಿರುವ ಕಾಲುವೆಗಳನ್ನು ಶೀಘ್ರ ದುರಸ್ತಿ ಮಾಡಬೇಕು, ಮೇಲಿನ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಬೆಳೆದ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಇದಕ್ಕೆ ಹೊಣೆಗಾರರಾದ ಕೆಬಿಜೆಎನ್ಎಲ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮುಳವಾಡ 1ನೇ ಹಂತದ ಕಾಲುವೆ ಒಡೆದು ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕರವೇ ತಾಲೂಕಾ ಅಧ್ಯಕ್ಷ ರವಿ ಗೂಳಸಂಗಿ ಒತ್ತಾಯಿಸಿದರು.
ಕಾಲುವೆ ಒಡೆದು ನಾಶವಾಗಿರುವ ರೈತರ ಜಮೀನಿಗಳಿಗೆ ತಕ್ಷಣ ಪರಿಹಾರ ವಿತರಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಸಂಬಂಧಿಸಿದ ಮೇಲಾಧಿಕಾರಿಗಳು ಕಾಲುವೆ ಸ್ಥಿತಿಗತಿಯ ಬಗ್ಗೆ ಸೂಕ್ತ ಗಮನಹರಿಸಬೇಕು ಎಂದು ರೈತ ಮಹೇಶ್ ಪಾಟೀಲ್ ಹೇಳಿದರು.