ಕರ್ನಾಟಕ ಅಭಿವೃದ್ಧಿ ಮಾದರಿ ಒಂದಿದೆಯೇ?

Update: 2023-08-22 07:18 GMT

ರವಿವಾರ ಬೆಂಗಳೂರಿನಲ್ಲಿ ನಡೆದ ಚಿಂತನಾ ಸಮಾವೇಶ ಇಂತಹ ಒಂದು ಮಹತ್ವಾಕಾಂಕ್ಷೆಯ ಬ್ಯಾನರ್‌ನೊಂದಿಗೆ ಆರಂಭವಾಯಿತು. ಬಹುತೇಕ ಭಾಷಣಕಾರರು ಸಂವೇದನಾಪೂರ್ಣವಾಗಿ ಮಾತಾಡಿದರು. ಆದರೆ ದಿಕ್ಸೂಚಿ ಮಾತಾಡಿದ ನಾರಾಯಣ್ ಅವರ ಉಲ್ಲೇಖಗಳು, ಡಾ. ಸ್ವಾತಿ ಶಿವಾನಂದ್, ಡಾ. ಹಿಮಾಂಶು, ಸಚಿವ ಕೃಷ್ಣಭೈರೇಗೌಡ ಮತ್ತು ಕೊಟ್ಟ ಶಂಕರ್ ಈ ಮಾದರಿಯ ಹುಡುಕಾಟದ ಸಂಕೀರ್ಣತೆಯನ್ನು ಹೆಚ್ಚು ಸ್ಪಷ್ಟವಾಗಿ ಮುಂದಿಟ್ಟರು.

ಕರ್ನಾಟಕದ ಮಾದರಿ ಎಂಬುದು ಕೇವಲ ಅಭಿವೃದ್ಧಿ ಮೀಮಾಂಸೆಯ ಮಾದರಿ ಅಷ್ಟೇ ಅಲ್ಲ, ಅದು ಸಂಸ್ಕೃತಿ, ಸಹಬಾಳ್ವೆಗಳ ಆಯಾಮಗಳಲ್ಲೂ ಇರಬೇಕು ಎಂಬುದು ಸಮಾವೇಶದಲ್ಲೂ ವ್ಯಕ್ತವಾಯಿತು.

ಈ ಸಮಾವೇಶ ಒಂದು ದೀರ್ಘಕಾಲೀನ ವ್ಯವಸ್ಥಿತ ಚರ್ಚೆಯನ್ನು ಉದ್ಘಾಟಿಸಿದೆ ಎಂದು ಭಾವಿಸಿ ನಾನು ಈ ಟಿಪ್ಪಣಿಗಳನ್ನು ದಾಖಲಿಸುತ್ತಿದ್ದೇನೆ

ಕರ್ನಾಟಕವೆಂಬ ಭಿತ್ತಿಯೊಂದು ಅದರ ಸಾಮಾಜಿಕ, ಸಾಂಸ್ಕೃತಿಕ ಛಾಪಿನ ಸಹಿತ ಚರಿತ್ರೆಯಲ್ಲಿತ್ತೇ? ಈ ಚಾರಿತ್ರಿಕ ವಂಶವಾಹಿ ಇದ್ದರೆ ಕರ್ನಾಟಕದ ಮಾದರಿಗೊಂದು ಆಳ ಬೇರಿನ ಪುರಾವೆ ದಕ್ಕುತ್ತದೆ.

೧. ಕರ್ನಾಟಕವೆಂದು ನಾವೀಗ ಭಾವಿಸುವ ಭೂ ಪ್ರದೇಶ ಕಳೆದ ಒಂದೂವರೆ ಶತಮಾನದ ಸೃಷ್ಟಿ. ಅದರಲ್ಲೂ ಆಡಳಿತಾತ್ಮಕವಾಗಿ ೧೯೫೬ರಲ್ಲಿ ಸೃಷ್ಟಿಯಾದದ್ದು. ೧೭-೧೮ನೇ ಶತಮಾನದಲ್ಲಿ ಇಂಥಾ ಒಂದು ಕಲ್ಪನೆ ಇತ್ತೇ? ಅದಕ್ಕೂ ಹಿಂದಿನ ಚರಿತ್ರೆಯ ಕುರಿತು ನಮಗೆ ಸ್ಪಷ್ಟವಾಗಿ ದಾಖಲಾತಿ ನಡೆದು ಸಿಕ್ಕಿದ್ದೂ ೧೯ನೇ ಶತಮಾನದ ಉತ್ತರಾರ್ಧದಿಂದ. ಅರ್ಥಾತ್ ಈ ಜನಪದಕ್ಕೆ ಚರಿತ್ರೆಯ ಒಂದು ದಾಖಲಾತಿಯ ಅಭಾವದ ಅಜ್ಞಾನ ಇತ್ತು.

೨. ೧೯೫೬ರಲ್ಲಿ ಈ ರಾಜ್ಯ ಏಕೀಕೃತವಾದಾಗಲೂ ಅದು ನಿಜಾಮಶಾಹಿ, ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನಗಳ ಏಕೀಕರಣದ ಮೂಲಕ ಸೃಷ್ಟಿಯಾಯಿತಷ್ಟೇ.

ನಾಲ್ವಡಿಯವರ ಮಾದರಿಯೊಂದು ಗಟ್ಟಿಯಾಗಿ ದಕ್ಕಿದ ಕಾರಣ ಕರ್ನಾಟಕವೆಂಬ ಈ ರಾಜ್ಯಕ್ಕೆ ಒಂದು ಗುರಿ ನಿಷಾನೆ ಇತ್ತು. ಆದರೆ ಉಳಿದ ಭಾಗಗಳಲ್ಲಿ ಅದೇ ಕಾಲಕ್ಕೆ ಸಮಾನಾಂತರವಾಗಿ ಅಭಿವೃದ್ಧಿ ನಡೆದಿದ್ದರೆ ಅದರ ಸ್ವರೂಪಗಳೇನು ಎಂಬ ಬಗ್ಗೆ ಹೆಚ್ಚಿನ ತೌಲನಿಕ ಚರ್ಚೆ ಆಗಿಲ್ಲ.

೩. ೧೯೫೬ರ ಪೂರ್ವದಲ್ಲಿ ಬಳ್ಳಾರಿ ಬಲು ದೊಡ್ಡ ಹೂಡಿಕೆಯ ತಾಣವಾಗಿತ್ತು, ದಾವಣಗೆರೆ ದೊಡ್ಡ ಔದ್ಯಮಿಕ ಕೇಂದ್ರವಾಗಿತ್ತು, ಬೀದರ್, ಬೆಳಗಾವಿ, ಹುಬ್ಬಳ್ಳಿ, ಕೋಲಾರ, ಮಂಗಳೂರು ಅಪಾರ ಆರ್ಥಿಕ, ಶೈಕ್ಷಣಿಕ ಚಟುವಟಿಕೆಗಳ ಬಿರುಸು ಹೊಂದಿದ್ದ ಕೇಂದ್ರಗಳಾಗಿದ್ದವು. ಇವುಗಳ ರೂಪುರೇಶೆ ಹೇಗಿತ್ತು?

೪. ೧೯೫೬ರ ನಂತರ ದಕ್ಕಿದ ಅರಸು ಯುಗದಲ್ಲಿ ಕರ್ನಾಟಕದ ಮಾದರಿಯೊಂದು ಅತ್ಯಂತ ಸ್ಪಷ್ಟವಾದ ಬುನಾದಿ ಹೊಂದಿದ್ದು ಕಾಣುತ್ತದೆ. ಕೈಗಾರಿಕಾ ವಸಾಹತುಗಳ ನಿರ್ಮಾಣ, ಮೀಸಲಾತಿ, ನೀರಾವರಿ, ಹೀಗೆ ಇದರ ಹತ್ತಾರು ಉದಾಹರಣೆ ದೊರಕುತ್ತದೆ.

೫. ಕರ್ನಾಟಕದ ಮಾದರಿಯೆಂಬುದು ಪ್ರಾದೇಶಿಕ ಅಸ್ಮಿತೆಗಳ ಛಾಪು ಹೊಂದಿದ ನಿಶಾನಿಯೆಂಬ ಮಾತಿನಿಂದ ಹೊರಟರೆ ತದನಂತರದ ವಿದ್ಯಮಾನಗಳು ಈ ಬುನಾದಿಯನ್ನು ಎಷ್ಟು ಛಿದ್ರಗೊಳಿಸಿವೆ ಅಥವಾ ಅದರಿಂದ ಎಷ್ಟು ದೂರ ಹೋಗಿದೆ ಎಂಬುದು ಚರ್ಚೆಯಾಗಬೇಕಿದೆ

೬. ಅರಸು ಆಡಳಿತ ಕಳೆದು ಅರ್ಧ ಶತಮಾನವೇ ಆಗಿರುವ ಕಾರಣ ಈ ಕಾಲಘಟ್ಟದ ವಿಶ್ಲೇಷಣೆಯನ್ನು ಯಾವ ಸೂಚಿಗಳ ಮೂಲಕ ಮಾಡಬೇಕು? ಚರಿತ್ರೆಯ ಹೊಳಹುಗಳು ಮತ್ತೆ ಪುನರುಜ್ಜೀವನಗೊಳಸುವಷ್ಟು ಸಜೀವವಾಗಿವೆಯೇ?

ಎರಡು ಮೂರು ಉದಾಹರಣೆಗಳನ್ನು ನೀಡಬಯಸುವೆ.

೧. ಅರಸು ಹವಣಿಸಿದ ಸಾಮಾಜಿಕ ನ್ಯಾಯದ ಕಟ್ಟಡದ ಬಗ್ಗೆ ತೀವ್ರ ಬೇಗುದಿ ಹೊಂದಿದ್ದ ಮೇಲ್ಜಾತಿಗಳು ಜನತಾ ಪಕ್ಷದ ರೂಪದಲ್ಲಿ ಅವತರಿಸಿ ವೆಂಕಟಸ್ವಾಮಿ ವರದಿಯನ್ನು ತಿರಸ್ಕರಿಸುವುದರೊಂದಿಗೆ ಆರಂಭವಾದ ಈ ಪ್ರತಿ ಕ್ರಾಂತಿ ಭಾಜಪದ ಬೇರೂರುವಿಕೆಯೊಂದಿಗೆ ತಾರ್ಕಿಕ ಅಂತ್ಯ ತಲುಪಿದೆ. ಇಡಬ್ಲ್ಯುಎಸ್ ಮೀಸಲಾತಿ ಇದರ ಎವರೆಸ್ಟ್. ಮೇಲ್ಜಾತಿ ನಿಗಮಗಳು ಇದರ ಬಾಂದು ಕಲ್ಲುಗಳು.

೨. ಜಾಗತೀಕರಣ ಉದ್ಘಾಟನೆಯಾದ ಬಳಿಕ ಬಂದಿರುವ ಆತ್ಯಂತಿಕ ಬದಲಾವಣೆಗಳು ಪಕ್ಷಾತೀತ ಒಪ್ಪಿಗೆ ಪಡೆದಿರುವುದನ್ನು ಗಮನಿಸಬೇಕು. ಉದಾ: ಜಿಎಸ್‌ಟಿಯಂತಹ ತೆರಿಗೆ ಪದ್ಧತಿ ಸಂಪೂರ್ಣ ಕೇಂದ್ರೀಕೃತ ಹೇರುವಿಕೆ. ಇದೇ ರೀತಿ ಹೂಡಿಕೆ, ಕೈಗಾರಿಕೀಕರಣ, ಶಿಕ್ಷಣ, ಆರೋಗ್ಯ ಎಲ್ಲದರಲ್ಲೂ ಕೇಂದ್ರೀಕೃತ ಮಾದರಿಯ ಅನುಷ್ಠಾನದ ತುರಸಿನಲ್ಲಿ ದೇಶವಷ್ಟೇ ಅಲ್ಲ ನಮ್ಮ ರಾಜ್ಯವೂ ಮುಳುಗಿದೆ.

೩. ಈ ಒಂದು ದೇಶ ಮತ್ತು ಸಕಲಾತಿ ಒಂದೇ ಮಾದರಿಯ ಧಾವಂತವನ್ನು ತಿರಸ್ಕರಿಸದೇ ಪ್ರಾದೇಶಿಕತೆಯ ಮಾದರಿಯೊಂದು ಭಿನ್ನವಾಗಿ ಅಸ್ತಿತ್ವ ಛಾಪಿಸಲು ಸಾಧ್ಯವೇ?

೪. ಜಾಗತೀಕರಣ ಆರ್ಥಿಕ ನೀತಿ ಲಾಯಿಜ್ ಫೇರ್ (ಎಲ್ಲವೂ ಅದರಷ್ಟಕ್ಕೇ ನಿರ್ವಹಿಸಿಕೊಳ್ಳುತ್ತೆ ಎಂಬ ನಿಲುವು) ಮಾದರಿಯಲ್ಲಿದ್ದು ಪ್ರಭುತ್ವ ಕೈಹಾಕಬಾರದು ಎಂಬುದನ್ನು ಪದೇ ಪದೇ ನೆನಪಿಸಿಕೊಡುತ್ತಿದೆ. ಕೃಷ್ಣಭೈರೇಗೌಡರು ಜಾಗತೀಕರಣದ ಬಗ್ಗೆ ಹೆಚ್ಚಿನ ಸೈದ್ಧಾಂತಿಕ ತಕರಾರು ಇಲ್ಲ ಎಂದು ಹೇಳುತ್ತಾ, ಇಂತಹ ಸಂದರ್ಭದಲ್ಲಿ ಸ್ಟೇಟ್ ತಾನೇ ಸ್ವಯಂ ನಿರ್ಧಾರದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಸಮಾನ ಹಂಚಿಕೆಯನ್ನು ಖಾತ್ರಿಪಡಿಸಬಹುದು ಎಂಬ ನಿಲುವು ತಳೆದರು. ಇದರ ಸಮಸ್ಯೆ ಎಂದರೆ ಈ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ಈ ಸೂಚಿ ಇಲ್ಲ. ಏನಿದ್ದರೂ ಆಯಾ ಸರಕಾರಗಳು ತಳೆಯಬಹುದಾದ ನಿಲುವು.

ಇಂತಹ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜೆ.ಎಚ್. ಪಟೇಲರು ‘‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’’ ಎಂಬ ನುಡಿಗಟ್ಟಲ್ಲಿ ಬಣ್ಣಿಸಿದ್ದರು

೫. ಸ್ಥಳೀಯ ಸಾಧ್ಯತೆ, ಕೌಶಲ್ಯ, ಸಂಪನ್ಮೂಲ ಆಧಾರಿತ ಅಭಿವೃದ್ಧಿ ಎಂಬಂತಹ ನುಡಿಗಟ್ಟುಗಳನ್ನು ಈಗಾಗಲೇ ಈ ಜಾಗತೀಕರಣದ ರೆಜಿಮ್ ಎಗರಿಸಿ ಬಳಸಿ ಅವುಗಳನ್ನೂ ಜಡ್ಡುಗೊಳಿಸಿದೆ. ಉದಾ: ಒಂದು ಜಿಲ್ಲೆ ಒಂದು ಉತ್ಪನ್ನ, ಪ್ರಾದೇಶಿಕ ಸಂಪನ್ಮೂಲ ಆಧಾರಿತ ಉದ್ಯಮಶೀಲತೆ ಇತ್ಯಾದಿ.

ಇವುಗಳ ಚುಂಗು ಹಿಡಿದು ಹೂಡಿಕೆಯಾದ ಉದಾಹರಣೆಗಳನ್ನು ನೋಡಿದರೆ ಅವುಗಳಿಗೂ ಈ ‘ಸಂಪನ್ಮೂಲ ಆಧಾರಿತ’ ಬ್ಯಾನರಿಗೂ ಸಂಬಂಧವೇ ಕಾಣಿಸುವುದಿಲ್ಲ.

೬. ಇನ್ನೊಂದೆಡೆ ಶಿಕ್ಷಣದಲ್ಲಿ ಆಗುತ್ತಿರುವ ಸಂವಿಧಾನ ವಿರೋಧಿ ಆತ್ಯಂತಿಕ ವಿಕೃತಿಗಳು ಪ್ರಾದೇಶಿಕ, ಸಾಂಸ್ಕೃತಿಕ ಬೇರುಗಳಿಗೇ ಮಾರಕವಾಗುತ್ತಿರುವುದನ್ನು ನಿಲ್ಲಿಸದೆ ಈ ಮಾದರಿ ಹೇಗೆ ಸೃಷ್ಟಿಯಾಗಲು ಸಾಧ್ಯ?

ಸಾಂಸ್ಕೃತಿಕವಾಗಿ, ಕರ್ನಾಟಕದಲ್ಲಿ (ಅದೂ ಎರಡೇ ಜಿಲ್ಲೆಗಳಲ್ಲಿ) ಇರುವ ಉಪ/ ಪ್ರಾದೇಶಿಕ ಭಾಷಾ ಅಕಾಡಮಿಗಳು ದೇಶದ ಬೇರೆಲ್ಲೂ ಇಲ್ಲ. ಈ ಒಳಗೊಳ್ಳುವಿಕೆಯ ಸ್ವರೂಪ ರಾಜ್ಯಕ್ಕೇ ವಿಸ್ತರಿಸಿದರೆ ನಮ್ಮ ಸಾಂಸ್ಕೃತಿಕ ಕೊಡು-ಕೊಳ್ಳು, ಶಿಕ್ಷಣದ ಹೆಜ್ಜೆ ಹಾದಿ ಹೇಗಿರುತ್ತದೆ?

ಇವು ಈಗ ತಕ್ಷಣಕ್ಕೆ ಗುರುತು ಹಾಕಿದ ಅಂಶಗಳು. ವಿಷಯದ ಚರ್ಚೆಗೆ ಈ ಟಿಪ್ಪಣಿ ಸಹಾಯವಾಗಲಿ

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಕೆ.ಪಿ. ಸುರೇಶ

contributor

Similar News